ಬೇಲೂರು : ತಾಲ್ಲೂಕಿನ ಬಿಕ್ಕೋಡು ಹೋಬಳಿಯ ವಾಟೆಹೊಳೆ ಜಲಾಶಯ ಭರ್ತಿಯಾದ ಕಾರಣ ಶಾಸಕ ಹೆಚ್.ಕೆ.ಸುರೇಶ್ ಬಾಗಿನ ಅರ್ಪಿಸಿದರು.
1.51 ಟಿಎಂಸಿ ಅಡಿ ಸಾಮರ್ಥ್ಯದ ವಾಟೆಹೊಳೆ ಜಲಾಶಯದ ಮುಖ್ಯದ್ವಾರ ಕಟ್ಟಡ ಉದ್ಘಾಟಿಸಿ, ಜಲಾಶಯ ಬಾಗಿನ ಅರ್ಪಿಸಿ ಮಾತನಾಡಿದ ಅವರು ವಾಟೆಹೊಳೆ ಜಲಾನಯನ ಪ್ರದೇಶವಾದ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ನಿರಂತರ ಮಳೆ ಬೀಳುತ್ತಿರುವುದರಿಂದ ಜಲಾಶಯದ ಒಡಲು ಭರ್ತಿಯಾಗಿದೆ.
1.51 ಟಿಎಂಸಿ ಅಡಿ ಸಾಮರ್ಥ್ಯವುಳ್ಳ ಜಲಾಶಯದಲ್ಲಿ ಇಂದು 1.35 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು ಬಾಗಿನ ಅರ್ಪಣೆ ಮಾಡಲಾಗಿದೆ.
ಜಲಾಶಯ ಭರ್ತಿಯಾಗಿರುವುದರಿಂದ ಅಧಿಕಾರಿಗಳು ಕೃಷಿ ಚಟುವಟಿಕೆಗೆ ಪೂರಕವಾದ ಕೃಷಿ ಪರಿಕರಗಳನ್ನು ಸಮರ್ಪಕವಾಗಿ ವಿತರಿಸಬೇಕು. ಕಳೆದ ಆರು ವರ್ಷದ ಹಿಂದೆ ಈ ಜಲಾಶಯ ಭರ್ತಿಯಾಗಿತ್ತು ಈ ವರ್ಷ ಭರ್ತಿಯಾಗಿದ್ದು ಪ್ರಸ್ತುತ ನಿಮ್ಮೆಲ್ಲರ ಆಶೀರ್ವಾದದಿಂದ ಒಂದುವರೆ ವರ್ಷದ ಬಳಿಕ ನಾನು ಶಾಸಕನಾಗಿ ಬಾಗಿನ ಅರ್ಪಿಸಿದ್ದು, ಸಂತಸ ತಂದಿದೆ. ತಾಲ್ಲೂಕಿನ ಜನತೆಯ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದರು.
ಜಲಾಶಯದ ನೀರು ಯಗಚಿ ನದಿ ಸೇರುವ ಜಾಗದವರೆಗೂ ಕೃಷಿ ಭೂಮಿ ಹೊರತುಪಡಿಸಿ ಯಾವುದೇ ಹಳ್ಳಿಗಳಿಲ್ಲ. ಕೃಷಿ ಚಟುವಟಿಕೆಗೆ ಅಳವಡಿಸಿಕೊಂಡಿರುವ ನೀರೆತ್ತುವ ಪಂಪು ಮತ್ತು ಮೋಟಾರುಗಳು ನೀರಿನಲ್ಲಿ ಮುಳುಗಬಹುದು. ಮುನ್ನೆಚ್ಚರಿಕೆ ವಹಿಸುವಂತೆ ಜನರಿಗೆ ಸೂಚನೆ ನೀಡಲಾಗಿದೆ ಎಂದು ಕಾರ್ಯಪಾಲಕ ಎಂಜಿನಿಯರ್ ಧರ್ಮರಾಜ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಮಮತ ಎಂ. ಸಿಪಿಐ ಜಯರಾಂ, ಪುರಸಭಾ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ್, ಅರ್ಬನ್ ಕೋ.ಆಪರೇಟಿವ್ ಬ್ಯಾಂಕ್ ನಿರ್ದೇಶಕ ಬಿ.ಬಿ.ಶಿವರಾಜ್, ತೋಟಗಾರಿಕೆ ಅಧಿಕಾರಿ ಸೀಮಾ, ತಾ.ಪಂ.ಇಒ ಹೆಚ್.ಕೆ.ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.