ಅರೇಹಳ್ಳಿ: ಕಳೆದ ಎರಡ್ಮೂರು ದಿನಗಳಿಂದ ಧೋ ಎಂದು ಸುರಿಯುತ್ತಿರವ ಮಳೆ ಹಾಗೂ ಐಬಿಸಿ ಕಾಫಿ ಎಸ್ಟೇಟ್ ಒಡೆತನದ ಕೆರೆ ಒಡೆದಿದ್ದರಿಂದ ಕಳೆದ ಮಾರ್ಚ್ ನಲ್ಲಿ ಲಕ್ಷಾಂತರ ರೂ. ಖರ್ಚು ಮಾಡಿ ನಿರ್ಮಿಸಿದ್ದ ಕೆರೆ ಸಂಪೂರ್ಣ ಹಾಳಾಗಿದೆ ಎಂದು ಹೆಚ್.ಆರ್ ದೀಪಕ್ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ನಾರ್ವೆ ಗ್ರಾಪಂ ವ್ಯಾಪ್ತಿಯ ಹೊಸಮನೆ ಬಳಿ ತಮ್ಮ ಜಮೀನಿನಲ್ಲಿ ನಿರ್ಮಿಸಿರುವ ಕೆರೆಗೆ ಹಾನಿಯಾಗಿರುವುದನ್ನು ಉದ್ದೇಶಿಸಿ ಮಾತನಾಡಿ ಅವರು, ನಾನು ಸಣ್ಣ ಹಿಡುವಳಿದಾರನಾಗಿದ್ದು ಕೃಷಿ ನಂಬಿ ಜೀವನ ಸಾಗಿಸುತ್ತಿದ್ದೇನೆ. ಜಮೀನಿನ ಮೇಲ್ಭಾಗಲ್ಲಿರುವ ಐಬಿಸಿ ಕಾಫಿ ಎಸ್ಟೇಟ್ನವರು ಅವೈಜ್ಙಾನಿಕವಾಗಿ ನಿರ್ಮಿಸಿರುವ ಕೆರೆ ಒಡೆದು ಹೋದ ಪರಿಣಾಮದಿಂದ ಉಂಟಾದ ಪ್ರವಾಹದಿಂದ ಕೆರೆಗೆ ಹೂಳು ತುಂಬಿಕೊಂಡಿದೆ. ಕಾಫಿ,ಅಡಿಕೆ ಹಾಗೂ ಮೆಣಸು ಬೆಳೆಯೂ ಸಹ ಹಾಳಾಗಿದೆ. ಇದರಿಂದ ಜಿಲ್ಲಾ ಪಂಚಾಯತ್ ಅನುದಾನದಲ್ಲಿ ನಿರ್ಮಿಸಲಾಗಿದ್ದ ಸೇತುವೆ ತಳಭಾಗದ ತಡೆಗೋಡೆ ಕುಸಿತಗೊಂಡಿದೆ. ಸೇತುವೆಗೆ ಹೊಂದಿಕೊಂಡಂತೆ ನೂರು ಅಡಿ ಉದ್ದದ ತಡೆಗೋಡೆಯನ್ನು ನಿರ್ಮಿಸಿಕೊಟ್ಟರೆ ಬಹಳ ಅನುಕೂಲವಾಗುತ್ತದೆ ಎಂದರು.
ಗ್ರಾಪಂ ಸದಸ್ಯ ಮಹೇಶ್ ಶೆಟ್ಟಿ ಮಾತನಾಡಿ, ಚರಂಡಿಯಲ್ಲಿ ದಿಢೀರ್ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ದೀಪಕ್ ಅವರ ಕೆರೆಗೆ ನೀರು ನುಗ್ಗಿ ಒಡೆದು ಹೋಗಿದೆ. ಚರಂಡಿ ಅವ್ಯವಸ್ಥೆಯಿಂದಾಗಿ ಮೇಲ್ಭಾಗದ ಮಳೆ ನೀರಿನ ರಭಸಕ್ಕೆ ಜೆಜೆಎಂ ಪೈಪ್ ಅಳವಡಿಸಿ ಮುಚ್ಚಲಾಗಿದ್ದ ಚರಂಡಿ ಮಣ್ಣು ಸಂಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಸರಕಾರದ ಅಧಿಕಾರಿಗಳು ಹಾಗೂ ಶಾಸಕರು ಇತ್ತ ಗಮನ ಹರಿಸಿ ನಷ್ಟ ಹೊಂದಿದ ರೈತನಿಗೆ ನೆರವು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ಧನಲಕ್ಷ್ಮೀ ವಾಸಂತಿ, ಪದ್ಮರಾಜ್ ಅರಸ್, ಆನಂದ್ ಕುಮಾರ್ ಇದ್ದರು.