
ಶಿವಮೊಗ್ಗ: ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಮಂಜುನಾಥ್ ಅವರ ಮೃತದೇಹ ನಾಳೆ ಅಂದರೆ ಏಪ್ರಿಲ್ 24ರ ಬೆಳಗಿನ ಜಾವ ಬೆಂಗಳೂರು ಏರ್ಪೋರ್ಟ್ಗೆ ಆಗಮಿಸಲಿದೆ.
ಮಂಜುನಾಥ್ ಮೃತದೇಹ ಬೆಂಗಳೂರಿಗೆ ಆಗಮಿಸುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಶಿವಮೊಗ್ಗದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಏರ್ಪೋರ್ಟ್ನಲ್ಲಿ ಎಲ್ಲ ಪ್ರಕ್ರಿಯೆಗಳು ಮುಗಿದ ಮೇಲೆ ಮೃತದೇಹವನ್ನು ಆ್ಯಂಬುಲೆನ್ಸ್ ಮೂಲಕ ಎಸ್ಕಾರ್ಟ್ ಭದ್ರತೆಯಲ್ಲಿ ಶಿವಮೊಗ್ಗಕ್ಕೆ ರವಾನೆ ಮಾಡಲಾಗುತ್ತದೆ.
ಬೆಂಗಳೂರು, ತುಮಕೂರು ಚಿತ್ರದುರ್ಗ, ಚನ್ನಗಿರಿ ಮೂಲಕ ಶಿವಮೊಗ್ಗಕ್ಕೆ ಮೃತದೇಹ ಇರುವ ಆ್ಯಂಬುಲೆನ್ಸ್ ಪ್ರಯಾಣ ಮಾಡಲಿದೆ. ಬೆಳಗ್ಗೆ 8 ಗಂಟೆಗೆ ಶಿವಮೊಗ್ಗದ ವಿಜಯನಗರ ಗುತ್ಯಪ್ಪ ಕಾಲೋನಿಯಲ್ಲಿರುವ ಮೃತಮಂಜುನಾಥ್ ಅವರ ನಿವಾಸ ಮಂಜುಶ್ರೀಗೆ ಆ್ಯಂಬುಲೆನ್ಸ್ ಆಗಮಿಸುವ ಸಾಧ್ಯತೆ ಇದೆ. ಈ ವೇಳೆ ನಗರಕ್ಕೆ ಆ್ಯಂಬುಲೆನ್ಸ್ ಬರುತ್ತಿದ್ದಂತೆ ಮೃತರ ಮನೆಯವರೆಗೆ ಹಿಂದೂ ಕಾರ್ಯಕರ್ತರು ಬೈಕ್ ರ್ಯಾಲಿ ನಡೆಸಲಿದ್ದಾರೆ.
ನಾಳೆ ಮಧ್ಯಾಹ್ನ 12:30 ರಿಂದ 1 ಗಂಟೆವರೆಗೆ ಮನೆಯ ಮುಂದೆ ಮಂಜುನಾಥ್ ಮೃತದೇಹದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿರುತ್ತದೆ. ಈಗಾಗಲೇ ಅವರ ಮನೆ ಮುಂದೆ ಬ್ಯಾರಿಕೇಡ್ ಹಾಕಿ ಅಂತಿಮ ದರ್ಶನಕ್ಕೆ ಜಿಲ್ಲಾಡಳಿತ ಸಿದ್ಧತೆ ಮಾಡುತ್ತಿದೆ. ಇದರ ಜೊತೆಗೆ ಅಂತಿಮ ದರ್ಶನಕ್ಕೆ ಬರುವ ವಿವಿಐಪಿಗಳಿಗೆ ಪ್ರತ್ಯೇಕವಾಗಿ ಆಗಮಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದೆ
ಅಂತಿಮ ದರ್ಶನ ಪಡೆದ ನಂತರ ಶಿವಮೊಗ್ಗದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಮೆರವಣಿಗೆಯ ಮಾರ್ಗದಲ್ಲಿ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗುವ ಸಾಧ್ಯತೆ ಇದೆ. ಮೆರವಣಿಗೆ ನಂತರ ತುಂಗಾ ನದಿ ತಟದಲ್ಲಿರುವ ರೋಟರಿ ಚಿತಾಗರಾದಲ್ಲಿ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಲಿದ್ದಾರೆ. ಮಂಜುನಾಥ್ ಅವರ ಅಂತ್ಯ ಸಂಸ್ಕಾರವನ್ನು ಬ್ರಾಹ್ಮಣ ಸಂಪ್ರದಾಯದಂತೆ ಕುಟುಂಬಸ್ಥರು ನೆರವೇರಿಸಲಿದ್ದಾರೆ. ಗುಂಡಾ ಭಟ್ಟ ಎನ್ನುವರು ಅಂತ್ಯ ಸಂಸ್ಕಾರ ವಿಧಿವಿಧಾನಗಳನ್ನು ನಡೆಸಿ ಕೊಡಲಿದ್ದಾರೆ.