ಅಯೋಧ್ಯೆ: ರಾಮಮಂದಿರದ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. 2024 ಜನವರಿ 22ರಂದು ರಾಮಮಂದಿರದ ಗರ್ಭಗೃಹದಲ್ಲಿ ರಾಮ ಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಂತೂ ಮಧುವಣಗಿತ್ತಿಯಂತೆ ತಯಾರಾಗಿದೆ.

ಅಯೋಧ್ಯೆಯ ಕರಸೇವಕಪುರದಲ್ಲಿ ಇಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್, ಅಯೋಧ್ಯೆ ರಾಮಮಂದಿರದ ಗರ್ಭಗೃಹದಲ್ಲಿ ಪ್ರತಿಷ್ಠಾಪನೆ ಆಗುವ ರಾಮಲಲ್ಲಾ ಮೂರ್ತಿ ಆಯ್ಕೆಯ ಬಗ್ಗೆ ಮಹತ್ವದ ಸಭೆ ನಡೆಸಿದೆ. ಟ್ರಸ್ಟ್‌ನ ಪದಾಧಿಕಾರಿಗಳು ಮೂರು ಮೂರ್ತಿಗಳ ಪೈಕಿ ಒಂದು ಮೂರ್ತಿಯನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ.

ದೇಶದ ಪ್ರಖ್ಯಾತ ಮೂವರು ಶಿಲ್ಪಿಗಳಿಂದ 51 ಇಂಚು ಎತ್ತರದ ಮೂರು ರಾಮ ಲಲ್ಲಾ ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದೆ. ಮೈಸೂರಿನ ಅರುಣ್ ಯೋಗಿರಾಜ್, ರಾಜಸ್ಥಾನದ ಸತ್ಯನಾರಾಯಣ ಪಾಂಡೆ ಹಾಗೂ ಜಿ.ಎಲ್.ಭಟ್ ಅವರಿಂದ ಮೂರ್ತಿಗಳ ಕೆತ್ತನೆ ಕಾರ್ಯ ಮುಗಿದಿದೆ. ಮೂವರು ಕೆತ್ತಿರುವ ಮೂರು ಮೂರ್ತಿಗಳಲ್ಲಿ ಒಂದನ್ನು ಮಾತ್ರ ಗರ್ಭಗೃಹದಲ್ಲಿ ಕಮಲದ ಮೇಲೆ ಪ್ರತಿಷ್ಠಾಪನೆ ಮಾಡಲಾಗಿದೆ. ಉಳಿದೆರಡು ಮೂರ್ತಿಯನ್ನು ಮಂದಿರದ ಆವರಣದಲ್ಲಿ ಗೌರವಪೂರ್ವಕವಾಗಿ ಪ್ರತಿಷ್ಠಾಪನೆ ಮಾಡಲಾಗುತ್ತಿದೆ.

ಕರಸೇವಕಪುರದಲ್ಲಿ ರಾಮಮಂದಿರದ ಗರ್ಭಗೃಹದಲ್ಲಿ ಪ್ರತಿಷ್ಠಾಪನೆ ಮಾಡುವ ಮೂರ್ತಿ ಆಯ್ಕೆ ಬಗ್ಗೆ ಸಭೆ ನಡೀತು. ಟ್ರಸ್ಟ್ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅಧ್ಯಕ್ಷತೆಯಲ್ಲಿ ‌ಜಗದ್ಗುರು ವಾಸುದೇವ್ ಆನಂದ್ ಸರಸ್ವತಿ , ಅನಿಲ್ ಮಿಶ್ರಾ, ಸ್ವಾಮಿ ಪರಮಾನಂದ, ಸ್ವಾಮಿ ಗೋವಿಂದ್ ದೇವ್ ಗಿರಿ, ಚಂಪತ್ ರಾಯ್ ಭಾಗಿಯಾಗಿದ್ದರು. ಟ್ರಸ್ಟ್‌ನ‌ ಹನ್ನೊಂದು ಸದಸ್ಯರು ಈ ಮಹತ್ವದ ಸಭೆಯಲ್ಲಿ ಭಾಗಿಯಾಗಿದ್ದರು. ತಮ್ಮ ಆಯ್ಕೆಯ ಮೂರ್ತಿಯನ್ನು ಒಂದು, ಎರಡು, ಮೂರು ಎಂದು ಆದ್ಯತೆ ನೀಡಿ ವೋಟಿಂಗ್ ಮಾಡಿದ್ದು, ಸದಸ್ಯರು ಮೂರ್ತಿಯ ಆಯ್ಕೆ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.

ಮೂರರಲ್ಲಿ ಒಂದು ರಾಮ ಲಲ್ಲಾ ಮೂರ್ತಿ ಆಯ್ಕೆಯ ಸಭೆಯಲ್ಲಿ ಇಂದು ಯಾವುದೇ ಅಂತಿಮ ನಿರ್ಧಾರ ಕೈಗೊಂಡಿಲ್ಲ. ಮೂರ್ತಿ ಆಯ್ಕೆಗೆ ಮತ್ತೊಂದು ಸುತ್ತಿನ‌ ಸಭೆ ನಡೆಸಲು‌ ನಿರ್ಧಾರ ಮಾಡಲಾಗಿದೆ. ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಭೆ ಬಳಿಕ ಅಧ್ಯಕ್ಷ ನೃಪೇಂದ್ರ ಮಿಶ್ರಾ ಅವರು ನಾವು ಬರೀ ಚಹಾ, ಪ್ರಸಾದ ಸೇವಿಸಿದೆವು ಎಂದಿದ್ದಾರೆ. ಈ ಮೂಲಕ ರಾಮ ಲಲ್ಲಾ ಮೂರ್ತಿ ಆಯ್ಕೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇಂದಿನ ಸಭೆ ಬಳಿಕ ರಾಮಜನ್ಮಭೂಮಿ ಟ್ರಸ್ಟ್ ಸದಸ್ಯರು ಅಯೋಧ್ಯೆಗೆ ಭೇಟಿ ನೀಡಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾಗಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಚರ್ಚಿಸಿದ ಬಳಿಕ ರಾಮ ಲಲ್ಲಾ ಮೂರ್ತಿಯನ್ನು ಅಂತಿಮಗೊಳಿಸಲಾಗುತ್ತಿದೆ. ಶೀಘ್ರವೇ ಟ್ರಸ್ಟ್ ಅಧ್ಯಕ್ಷರಾಗಿರುವ ನೃಪೇಂದ್ರ ಮಿಶ್ರಾ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಬಳಿಕ ಗರ್ಭಗೃಹದಲ್ಲಿ ಪ್ರತಿಷ್ಠಾಪನೆ ಆಗುವ ರಾಮಲಲ್ಲಾ ಮೂರ್ತಿ ಅಂತಿಮ ಆಯ್ಕೆ ನಡೆಯಲಿದೆ. ಜನವರಿ ಮೊದಲ ವಾರದಲ್ಲಿ ರಾಮಲಲ್ಲಾ ಮೂರ್ತಿಯ ಆಯ್ಕೆಯನ್ನು ರಾಮಜನ್ಮಭೂಮಿಯ ಟ್ರಸ್ಟ್ ಅಂತಿಮಗೊಳಿಸುವ ನಿರೀಕ್ಷೆ ಇದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *