
ಹಾಸನ: ಜಿಲ್ಲಾಡಳಿತ, ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಇವರ ಸಹಭಾಗಿತ್ವದಲ್ಲಿ ಮಹಿಳೆಯರಲ್ಲಿ ಕಂಡು ಬರುವ ಗರ್ಭಕಂಠದ ಕ್ಯಾನ್ಸರ್ ಪತ್ತೆ ಮಾಡುವ ಕೊಲೋಸ್ಕೋಪಿ ಯಂತ್ರವನ್ನು ಹಿಮ್ಸ್ ಸ್ತ್ರೀರೋಗ ವಿಭಾಗಕ್ಕೆ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಯಂತ್ರವನ್ನು ಹಸ್ತಾಂತರ ಮಾಡಿ ಬಳಿಕ ಹಿಮ್ಸ್ ನಿರ್ದೇಶಕ ಡಾ.ಸಂತೋಷ್ ಮಾತನಾಡಿ, ಮಹಿಳೆಯರಲ್ಲಿ ಇತ್ತೀಚೆಗೆ ಕಾಣಿಸಿಕೊಳ್ಳುತ್ತಿರುವ ಗರ್ಭಕಂಠದ ಕ್ಯಾನ್ಸರ್ ಬಗ್ಗೆ ಹೆಚ್ಚಿನ ಜಾಗೃತಿಯ ಅಗತ್ಯ ಇತ್ತೀಚಿನ ದಿನಗಳಲ್ಲಿ ಈ ಖಾಯಿಲೆಯಿಂದ ಹೆಚ್ಚುಸಾವು ಸಂಭವಿಸುತ್ತಿದ್ದು ಇದನ್ನು ನಿಯಂತ್ರಿಸಲು ಮುಂಜಾಗ್ರತ ಚಿಕಿತ್ಸೆ ಹಾಗೂ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಗರ್ಭಕಂಠದ ಕ್ಯಾನ್ಸರ್ ಪತ್ತೆಹಚ್ಚಲು ಹೊಸ ಮಾದರಿಯ ಕೊಲಸ್ಕೋಪಿ ಯಂತ್ರವನ್ನು HPCL ಕಂಪೆನಿ ಯವರು ಸ್ವಾಮಿ ವಿವೇಕಾನಂದ ಯೂತ್ ಮೊಮೆಂಟ್ ಸಹಯೋಗದಲ್ಲಿ ಇಂದು ಹಾಸನದ ಪ್ರಸೂತಿ ಮತ್ತು ಸ್ತ್ರೀರೋಗ ಚಿಕಿತ್ಸಾಹಿಭಾಗಕ್ಕೆ ಹಸ್ತಾಂತರ ಮಾಡಲಾಗುತ್ತದೆ ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದರು.
ಇದೊಂದು ಹೊಸ ಮಾದರಿಯ ಅತ್ಯಾಧುನಿಕ ಯಂತ್ರವಾಗಿದ್ದು ಮೊಬೈಲ್ ಮಾದರಿಯಲ್ಲಿರುವ ಈ ಯಂತ್ರವನ್ನು ಗ್ರಾಮೀಣ ಭಾಗಗಳಿಗೂ ತೆಗೆದುಕೊಂಡು ಹೋಗಿ ತಪಾಸಣೆ ಮಾಡಬಹುದಾಗಿದೆ. ಜೊತೆಗೆ ಗರ್ಭಕಂಠದ ಕ್ಯಾನ್ಸರ್ ಗೆ ಮಂಜಾಗ್ರತಾ ಕ್ರಮವಾಗಿ ಲಸಿಕೆ ಲಭ್ಯವಿದ್ದು ಎಲ್ಲಾ ಮಹಿಳೆಯರು ಲಸಿಕೆಯನ್ನು ಪಡೆಯುವ ಮೂಲಕ ಗರ್ಭಕಂಠದ ಕ್ಯಾನ್ಸರ್ನಿಂದ ರಕ್ಷಣೆ ಪಡೆಯುವಂತೆ ಕರೆ ನೀಡಿದರು.
ಬಳಿಕ HIMS ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ. ಸುಧಾ ಮಾತನಾಡಿ, ಹಿಂದೆ ಗರ್ಭಕಂಠದ ಕ್ಯಾನ್ಸರ್ ಪತ್ತೆಹಚ್ಚಲು ಬಳಸುತ್ತಿದ್ದ ಯಂತ್ರಕ್ಕೆ ವಿದ್ಯುತ್ ಹಾಗೂ ಇನ್ನಿತರ ಹೆಚ್ಚಿನ ಸಿಬ್ಬಂದಿಗಳ ಅಗತ್ಯವಿತ್ತು ಆದರೆ ಇದೀಗ ವಿನೂತನ ಮಾದರಿಯ ಯಂತ್ರದಿಂದ ಸಾಕಷ್ಟು ಅನುಕೂಲವಾಗಲಿದೆ ಎಂದರು.
ಪ್ರತಿ ತಿಂಗಳು ಹತ್ತಾರು ಸಂಖ್ಯೆಯಲ್ಲಿ ಗರ್ಭಕಂಠದ ಕ್ಯಾನ್ಸರ್ ಇರುವ ಮಹಿಳೆಯರು ಆಗಮಿಸುತ್ತಿದ್ದು ಸುಲಭ ವಿಧಾನದಲ್ಲಿ ಖಾಯಿಲೆಯನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಕೊಲೋಸ್ಕೋಪಿ ಯಂತ್ರ ಸಹಾಯಕವಾಗಲಿದೆ ಇದನ್ನು ಹಾಸನದ ಸ್ತ್ರೀರೋಗ ವಿಭಾಗಕ್ಕೆ ನೀಡಿದ ಜಿಲ್ಲಾಡಳಿತ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧಿಕಾರಗಳಿಗೆ ಧನ್ಯವಾದ ತಿಳಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆಡಳಿತ ಅಧಿಕಾರಿ ರೇಖಾ, ಜಿಲ್ಲಾ ಶಾಸ್ತ್ರ ಚಿಕಿತ್ಸಕ ಡಾ. ಲೋಕೇಶ್, ಸಹಾಯಕ ಆಡಳಿತ ಅಧಿಕಾರಿ ಪದ್ಮಾವತಿ, ನಿವಾಸಿ ವೈದ್ಯಾಧಿಕಾರಿ ಡಾ. ಲಕ್ಷ್ಮೇಶ್, ಡಾಕ್ಟರ್ ಜಗದೀಶ್ ಡಾ. ಸುಧೀರ್, ಹೆಚ್ ಪಿ ಸಿ ಎಲ್ ನ ಮುರಳಿ ಸೇರಿದಂತೆ ಇತರರು ಹಾಜರಿದ್ದರು.



