
ಹಾಸನ: ಅಗ್ನಿ ದುರಂತವು ನಾನಾ ರೀತಿಯಲ್ಲಿ ಸಂಭವಿಸುತ್ತಿದ್ದು, ಈ ವೇಳೆ ಯಾರು ಹೆದರದೇ ಜಾಗೃತರಾದರೇ ಆಗುವ ಅಪಾಯವನ್ನು ಮೊದಲೆ ತಪ್ಪಿಸಬಹುದು. ಇಲ್ಲವಾದರೇ ಹೆಚ್ಚಿನ ಅನಾಹುತ ನಡೆಯುತ್ತದೆ. ಇನ್ನು ನಮ್ಮ ಅಗ್ನಿ ಶಾಮಕ ದಳ ಕಛೇರಿಯಲ್ಲಿ ಇರುವುದು ಒಂದೆ ವಾಹನವಿದ್ದು, ತುರ್ತು ವೇಳೆ ಬೆಂಕಿ ಹಾರಿಸಲು ಹೆಚ್ಚಿನ ವಾಹನದ ಅವಶ್ಯಕತೆ ಇದೆ ಎಂದು ಅಗ್ನಿಶಾಮಕ ದಳದ ಠಾಣಾಧಿಕಾರಿ ಆರ್.ಕೆ. ಗಿಡ್ಡೇಗೌಡ ಮನವಿ ಮಾಡಿದರು.
ನಗರದ ಮಹಾರಾಜ ಪಾರ್ಕ್ನಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿಯಿಂದ ೫ನೇ ತರಗತಿಯ ಮೇಲ್ಪಟವರಿಗೆ ಮಾತ್ರ. ವಿದ್ಯಾರ್ಥಿ ನಾಯಕತ್ವ ಮತ್ತು ಬೇಸಿಗೆ ವಿಶೇಷ ಶಿಬಿರದ ಚಿಣ್ಣರ ಚಿಲಿಪಿಲಿ ಕಲರವ ಮೇಳದಲ್ಲಿ ೫ನೇ ದಿವಸದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಅಗ್ನಿ ಸುರಕ್ಷತೆ ಕುರಿತು ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಜಾಗೃತಿ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿ, ವಿದ್ಯುತ್ ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿ ಬೆಂಕಿ ಕಾಣಿಸಿಕೊಂಡಾಗ ಮೊದಲು ಕರೆಂಟ್ ಸ್ವಿಚ್ ಆಫ್ ಮಾಡಬೇಕು. ನಂತರ ಮಣ್ಣು ಹಾಕಬಹುದು. ಇನು ಹಳ್ಳಿ ಕಡೆ ದನ ಕರುಗಳನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕುತ್ತಾರೆ. ಅದು ಗ್ರೌಂಡ್ ಆಗಿ ದನ ಸಿಕ್ಕಿಕೊಂಡು ಸಾಯುತ್ತದೆ. ಈ ವೇಳೆ ಒಣ ವಸ್ತು ಏನೆ ಇದ್ದರೂ ಅದನ್ನ ಉಪಯೋಗಿಸಿ ಕಾಪಾಡಬಹುದು. ಮನೆಯಲ್ಲಿ ಫ್ರಿಡ್ಜ್, ವಾಷಿಂಗ್ ಮಿಷೆನ್ ಯಾವುದಾದರೂ ಸಿಡಿದು ಬೆಂಕಿ ಹತ್ತಿಕೊಂಡರೇ ತಕ್ಷಣ ಮೇನ್ ಸ್ವಿಚ್ ಆಫ್ ಮಾಡುವುದು ಮರೆಯಬಾರದು ಎಂದರು.
ಕೆರೆ, ಕಟ್ಟೆ, ನದಿ ಬಾವಿ ಯಾವುದಾದರಲ್ಲಿ ಈಜುವಾಗಲು ಕೂಡ ಎಚ್ಚರದಿಂದ ಇರಬೇಕು. ಎಲ್ಲೆ ಬೆಂಕಿ ಹತ್ತಿಕೊಂಡರೂ ಮೊದಲು ವೈಜ್ಞಾನಿಕವಾಗಿ ಎಚ್ಚರದಿಂದ ಬೆಂಕಿ ಹಾರಿಸಿ ಆಗುವ ಹೆಚ್ಚಿನ ಅಪಾಯವನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.
ಪ್ರಸ್ತುತದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಒಣಗಿದ ಭಾಗದಲ್ಲಿ ಯಾರು ಕೂಡ ಬಿಡಿ, ಸಿಗರೇಟ್ ಸೇದಿ ಎಸೆಯಬೇಡಿ. ಬೆಂಕಿ ಎಂಬುದನ್ನು ಸಲ್ಪವೂ ತಾಗಿಸಬಾರದು. ಸಲ್ಪ ಹತ್ತಿಕೊಂಡರೂ ಸುತ್ತ ಪೂರ್ಣ ವ್ಯಾಪಿಸುತ್ತದೆ ಎಂದು ಕಿವಿಮಾತು ಹೇಳಿದರು. ಹಾಸನ ಜಿಲ್ಲೆಯ ಎಲ್ಲಾ ತಾಲೂಕುಗಳಿಗೂ ಒಂದೊಂದು ಬೆಂಕಿ ಆರಿಸುವ ವಾಹನ ಇದ್ದು, ಏನಾದರೂ ಹೆಚ್ಚಿನ ಬೆಂಕಿ ಕಾಣಿಸಿಕೊಂಡರೇ ನಮ್ಮ ಅಗ್ನಿ ಶಾಸಮಕ ದಳದ ಕಛೇರಿಯಲ್ಲಿರುವ ಒಂದೆ ವಾಹನದಲ್ಲಿ ಹಾರಿಸುವ ಕೆಲಸ ಮಾಡುವುದು ಕಷ್ಟಸಾಧ್ಯವಾಗಿದೆ. ಒಂದರ ಜೊತೆಗೆ ಹೆಚ್ಚಿನ ವಾಹನಗಳ ಅವಶ್ಯಕತೆ ಹೆಚ್ಚು ಇದೆ ಎಂದು ಅಭಿಪ್ರಾಯಪಟ್ಟರು.
ಕೊನೆಯಲ್ಲಿ ಆಗ್ನಿಯಿಂದ ಆಗುವ ದುರಂತದ ವೇಳೆ ಅಗ್ನಿ ಶಾಮಕ ದಳದವರು ನಿರ್ವಹಿಸುವ ಕಾರ್ಯವೈಕರಿ ಬಗ್ಗೆ ಅಣುಕು ಪ್ರದರ್ಶನ ನಡೆಸಿಕೊಟ್ಟರು. ಪಂಪ್ ಮೂಲಕ ನೀರನ್ನು ವಿವಿಧ ರೀತಿಯಲ್ಲಿ ಪ್ರದರ್ಶಿಸಿ ಗಮನಸೆಳೆದರು. ಭಾರತ್ ಸೇವಾದಳದ ವಲಯ ಸಂಚಾಲಕಿ ವಿ.ಎಸ್. ರಾಣಿ ಅವರು ಕಾರ್ಯಕ್ರಮ ನಿರೂಪಿಸಿದರು.



