
ಸಕಲೇಶಪುರ;-ಇಲ್ಲಿನ ಟಿಎಪಿಸಿಎಂಎಸ್ ಅಧ್ಯಕ್ಷರಾದ ಕಿರುವಾಲೆ ಶಶಿಕುಮಾರ್ ತಮ್ಮ ಜನ್ಮದಿನವನ್ನು ಈ ಬಾರಿ ವಿಭಿನ್ನವಾಗಿ ಆಚರಿಸಿಕೊಂಡರು.
ಪುರಸಭೆ ಆವರಣದಲ್ಲಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಅವರು ಸುಮಾರು ಐವತ್ತನಾಲ್ಕು ಪೌರಕಾರ್ಮಿಕರಿಗೆ ಬಟ್ಟೆಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಈ ದಿನವನ್ನು ಸಾರ್ಥಕಗೊಳಿಸಿಕೊಂಡರು.
ನಂತರ ಮಾಧ್ಯಮದೊಂದಿಗೆ ಮಾತನಾಡಿದ ಕಿರುವಾಲೆ ಶಶಿಕುಮಾರ್ “ಪಟ್ಟಣದ ಸ್ವಚ್ಚತೆಗೆ ಪೌರಕಾರ್ಮಿಕರ ಕೊಡುಗೆ ಅಪಾರವಾದದ್ದು. ಪ್ರತಿದಿನ ತ್ಯಾಜ್ಯ ಸಂಗ್ರಹಿಸಿ, ಬೀದಿಗಳನ್ನು ಸ್ವಚ್ಚಗೊಳಿಸುವ ಮೂಲಕ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಪಟ್ಟಣದ ನಿಜವಾದ ಸೈನಿಕರು. ಆದ್ದರಿಂದ ನಾನು ಮತ್ತು ನನ್ನ ಕುಟುಂಬ ಈ ಬಾರಿ ಜನ್ಮದಿನವನ್ನು ಪೌರಕಾರ್ಮಿಕರಿಗೆ ಬಟ್ಟೆ ಉಡುಗೊರೆಯಾಗಿ ನೀಡುವ ಮೂಲಕ ವಿಶೇಷವಾಗಿ ಆಚರಿಸಿದ್ದೇವೆ” ಎಂದು ತಿಳಿಸಿದರು.
ಇದೇ ವೇಳೆ ಮಾತನಾಡಿದ ಪೌರಕಾರ್ಮಿಕರ ಅಧ್ಯಕ್ಷರಾದ ಸೋಮಣ್ಣ ಅವರು,“ಜನ್ಮದಿನವನ್ನು ಸಾಮಾನ್ಯವಾಗಿ ಕೆಲವರು ತಮ್ಮ ಪ್ರತಿಷ್ಟಿತೆಗೆ ಮಾತ್ರ ಬಳಸಿಕೊಳ್ಳುತ್ತಾರೆ. ಆದರೆ ಶಶಿಕುಮಾರ್ ಅವರು ನಮ್ಮಂತಹ ಕಾರ್ಮಿಕರನ್ನು ಗುರುತಿಸಿ, ಸನ್ಮಾನಿಸಿ, ಬಟ್ಟೆಗಳನ್ನು ನೀಡಿರುವುದು ನಮಗೆ ಅಪಾರ ಸಂತೋಷ ತಂದಿದೆ. ಇದು ಮೊದಲ ಬಾರಿಗೆ ನಡೆದ ಗೌರವ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿಗಳಾದ ಮಹೇಶ್ವರಪ್ಪ, ಪುರಸಭಾ ಅಧ್ಯಕ್ಷೆ ಜ್ಯೋತಿ ರಾಜ್ ಕುಮಾರ್, ಸದಸ್ಯ ಮುಖೇಶ್ ಶೆಟ್ಟಿ, ಟಿ ಎಪಿಸಿಎಂಎಸ್ ಸದಸ್ಯ ರವಿ, ಪ್ರಭಾರಿ ಕಂದಾಯಾಧಿಕಾರಿ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.




