
ಹಾಸನ : ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮ (RAWE Program)ದ ಅಂಗವಾಗಿ ಕೆ. ಬ್ಯಾಡರಹಳ್ಳಿ ಗ್ರಾಮದಲ್ಲಿ ಇಸಿರಿ ಮಾಹಿತಿಕೇಂದ್ರವನ್ನು ಸ್ಥಾಪಿಸಿದ್ದಾರೆ. ಇದರ ಉದ್ಘಾಟನಾ ಸಮಾರಂಭವು ವಿಜೃಂಭಣೆಯಿಂದ ನೆರವೇರಿತು.
ಕಾರ್ಯಕ್ರಮವನ್ನು ಕೃಷಿ ಮಹಾವಿದ್ಯಾಲಯ ಡೀನ್ ಅವರಾದ ಡಾ. ಕೆ.ಎನ್. ಮುನಿಸ್ವಾಮಿ ಗೌಡ ಅವರು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು.
ಈ ಮಾಹಿತಿ ಕೇಂದ್ರವನ್ನು ವಿದ್ಯಾರ್ಥಿಗಳೇ ತಮ್ಮ ಪ್ರಯತ್ನದಿಂದ ನಿರ್ಮಿಸಿದ್ದು, ಇದರ ಉದ್ದೇಶ ರೈತರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವುದು ಮತ್ತು ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ತಲುಪಿಸುವುದು.
ಈ ಕಾರ್ಯಕ್ರಮದಲ್ಲಿ ಸಂಯೋಜಕರಾದ ಡಾ. ಶಶಿಕಲಾ, ಸಹ ಸಂಯೋಜಕರಾದ ಡಾ. ಮಂಜುನಾಥ ಎಚ್ ಮತ್ತು ಡಾ. ವಿನೋದ ಶಂಕರ್ ನಾಯಕ್ ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಈ ಪ್ರಯತ್ನವನ್ನು ಮೆಚ್ಚಿದರು.
ಮಾಹಿತಿಕೇಂದ್ರದಲ್ಲಿ ವಿವಿಧ ವಿಷಯ ವಿಭಾಗಗಳಾದ ಮಣ್ಣು ವಿಜ್ಞಾನ, ಸಸ್ಯ ರೋಗಶಾಸ್ತ್ರ, ಕೀಟಶಾಸ್ತ್ರ, ಬೀಜ ವಿಜ್ಞಾನ, ತೋಟಗಾರಿಕೆ ಇತ್ಯಾದಿ ವಿಭಾಗಗಳ ವಿದ್ಯಾರ್ಥಿಗಳು ತಯಾರಿಸಿದ ಮಾದರಿಗಳು ಹಾಗೂ ಚಾರ್ಟ್ಗಳನ್ನು ಪ್ರದರ್ಶಿಸಲಾಗಿದೆ. ಇವುಗಳ ಮೂಲಕ ರೈತರು ತಂತ್ರಜ್ಞಾನಾಧಾರಿತ ಬೆಳೆಗಾರಿಕೆಯ ವಿಧಾನಗಳನ್ನು ಅರಿತುಕೊಳ್ಳುವಂತೆ ವಿಶೇಷ ವ್ಯವಸ್ಥೆ ಮಾಡಲಾಗಿದೆ.
ಇಸಿರಿ ಮಾಹಿತಿ ಕೇಂದ್ರವು ಮುಂದಿನ ಒಂದು ತಿಂಗಳ ಕಾಲ ಗ್ರಾಮಸ್ಥರಿಗೆ ತೆರೆದಿರಲಿದ್ದು, ರೈತರು ಪ್ರತಿದಿನ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಪಡೆಯಬಹುದು. ಈ ಕೇಂದ್ರದ ಮೂಲಕ ಸುಧಾರಿತ ಕೃಷಿ ತಂತ್ರಜ್ಞಾನಗಳು ಗ್ರಾಮೀಣ ಮಟ್ಟಕ್ಕೆ ತಲುಪುವ ನಿರೀಕ್ಷೆ ವ್ಯಕ್ತವಾಗಿದೆ.

