
ಸಕಲೇಶಪುರ /ಬೆಳಗಾವಿ: ಅರ್ಜುನ ಆನೆಯ ಸ್ಮಾರಕ ವಿಚಾರದಲ್ಲಿ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕೆಂದು ಶಾಸಕ ಸಿಮೆಂಟ್ ಮಂಜು ಆಗ್ರಹಿಸಿದ್ದಾರೆ.
ಬುಧವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಗಮನ ಸೆಳೆಯುವ ಗೊತ್ತುವಳಿಯಲ್ಲಿ ಮಾತನಾಡಿ ಮಲೆನಾಡಿನ ಜನರು ಸೌಮ್ಯ ಸ್ವಭಾವದವರು. ಇದುವರೆಗೂ ಕಾಡಾನೆ ದಾಳಿಯಿಂದ 75ಕ್ಕೂ ಜನರು ತಮ್ಮ ಜೀವ ಕಳೆದುಕೊಂಡಿದ್ದಾರೆ. ಜೊತೆಗೆ ಕಾಡನೆಗಳ ಹಾವಳಿಯಿಂದ ವ್ಯಾಪಾಕ ಬೆಳೆ ನಷ್ಟ ಸಂಭವಿಸಿದ್ದರು ಸಹ ಕಾನೂನು ಕೈಗೆತ್ತಿಕೊಳ್ಳುವ ಕೆಲಸಕ್ಕೆ ಮುಂದಾಗಿಲ್ಲ ಎಂಬುವುದನ್ನು ಸರ್ಕಾರ ಮನಗಾಣಬೇಕಿದೆ.
2023 ಡಿ. 04 ರಂದು ತಾಲ್ಲೂಕಿನ ಯಸಳೂರು ಹೋಬಳಿಯ ದಬ್ಬಳ್ಳಿಕಟ್ಟೆಯಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆಯಲ್ಲಿ ವಿಶ್ವವಿಖ್ಯಾತ ದಸರಾದ ಅಂಬಾರಿಯನ್ನು ಎಂಟು ಬಾರಿ ಹೊತ್ತು ತಿರುಗಿದ್ದ ಅರ್ಜುನ ಆನೆ ಮೃತಪಟ್ಟಿದ್ದ ವಿಷಯ ಎಲ್ಲರಿಗೂ ತಿಳಿದಿದೆ.
ಆ ಸಂದರ್ಭದಲ್ಲಿ ಅರ್ಜುನ ಆನೆಯ ಮೃತ ದೇಹವನ್ನು ರಸ್ತೆ ಬದಿಯಲ್ಲಿ ಅಂತ್ಯ ಸಂಸ್ಕಾರ ನಡೆಸುವುದರಿಂದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ನೀಡಿದಂತಾಗುತ್ತದೆ ಎಂದು ಸ್ಥಳೀಯರು ಹಾಗೂ ಹೋರಾಟಗಾರರು ಮನವಿ ಮಾಡಿದ್ದರು.
ಎರಡು ವರ್ಷದ ಹಿಂದೆಯೂ ಕೂಡ ನಾನು ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿದ್ದರಿಂದ ಅಂದು ಅರ್ಜುನ ಆನೆಯ ಅಂತ್ಯಸಂಸ್ಕಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಅರ್ಜುನನ ಅಂತ್ಯ ಸಂಸ್ಕಾರದ ಸಮಯದಲ್ಲಿ ಸ್ಥಳೀಯರು ಹಾಗೂ ಹೋರಾಟ ಗಾರರು ಸಮಾಧಿಯನ್ನು ಮುಖ್ಯ ರಸ್ತೆಯ ಬದಿಯಲ್ಲಿ ಮಾಡುವಂತೆ ಒತ್ತಾಯಿಸಿದರು ಸಹ ಅರಣ್ಯ ಇಲಾಖೆಯವರು ಸ್ಪಂದನೆ ಮಾಡದ ಕಾರಣ ಸಣ್ಣ ಗಲಭೆಯಾಗಿತ್ತು.
ಇದನ್ನೇ ನೆಪವಾಗಿ ಇಟ್ಟುಕೊಂಡು ಪೊಲೀಸರು ಅಪರಿಚಿತ ವ್ಯಕ್ತಿಗಳು ಗಲಭೆಗೆ ಕಾರಣ ಎಂದು ಪ್ರಕರಣ ದಾಖಲಿಸಿದ್ದರು.
ಆದರೆ ಎರಡು ವರ್ಷಗಳ ನಂತರ 19 ಜನರಿಗೆ ನ್ಯಾಯಾಲಯದ ಸಮನ್ಸ್ ಕಳುಹಿಸಲಾಗಿದೆ. ಇದರಲ್ಲಿ ಕೆಲವರು ಪ್ರತಿಭಟನೆಯಲ್ಲಿ ಭಾಗಿಯಾಗೆ ಇರಲಿಲ್ಲ ಅಂಥವರ ವಿರುದ್ದ ಸಹ ಪ್ರಕರಣ ದಾಖಲಾಗಿದೆ.
ಕಾಡಾನೆ ಹಾವಳಿ ವಿರುದ್ಧದ ಹೋರಾಟಗಾರರು ಹಾಗೂ ಸ್ಥಳೀಯ ಅಮಾಯಕ ಯುವಕರು ಸೇರಿದಂತೆ 19 ಜನರ ಮೇಲೆ ಪೊಲೀಸರು ವಿವಿಧ ಸೆಕ್ಷನಡಿ ಪ್ರಕರಣ ದಾಖಲಿಸಿರುವುದು ಖಂಡನೀಯವಾದದ್ದು. ಪರಿಣಾಮ ಇದೆ ಡಿ. 30 ರಂದು ನ್ಯಾಯಲಯಕ್ಕೆ ಹಾಜರಾಗುವಂತೆ ಹೋರಾಟಗಾರರಿಗೆ ಸಮನ್ಸ್ ಜಾರಿಯಾಗಿದೆ. ಆದ್ದರಿಂದ ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣವನ್ನು ವಾಪಸ್ ಪಡೆಯುವಂತೆ ಸಭಾಧ್ಯಕ್ಷರ ಮೂಲಕ ಸದನದಲ್ಲಿದ್ದ ಗೃಹ ಸಚಿವರು ಹಾಗೂ ಅರಣ್ಯ ಸಚಿವರಿಗೆ ಒತ್ತಾಯಿಸಿದರು.
ಗೃಹ ಸಚಿವರ ಸಕಾರಾತ್ಮಕ ಸ್ಪಂದನೆ : ಶಾಸಕ ಸಿಮೆಂಟ್ ಮಂಜು ಸದನದಲ್ಲಿ ಮಾತನಾಡುವ ಮುನ್ನ ಗೃಹ ಸಚಿವ ಜಿ. ಪರಮೇಶ್ವರ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಹೋರಾಟಗಾರರ ಮೇಲೆ ದಾಖಲಾಗಿರುವ ಪ್ರಕರಣದ ಕುರಿತು ಸುದೀರ್ಘ ಚರ್ಚೆ ನಡೆಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವರು, ಪ್ರಕರಣದ ಮಾಹಿತಿಯನ್ನು ಪಡೆದು ಮುಖ್ಯಮಂತ್ರಿ, ಅರಣ್ಯ ಸಚಿವರೊಂದಿಗೆ ಚರ್ಚೆ ನಡೆಸಿ ಹೋರಾಟಗಾರರ ಮೇಲಿನ ಪ್ರಕರಣವನ್ನು ಸರ್ಕಾರ ವಾಪಸ್ ಪಡೆಯಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ಶಾಸಕರು ತಿಳಿಸಿದರು.
