
ನವದೆಹಲಿ : ದಿನಾಂಕ 11-03-2026 ರಂದು ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರನ್ನು ಭೇಟಿ ಮಾಡಲಾಯಿತು.
ಕೇಂದ್ರ ಕೈಗಾರಿಕೆ ಹಾಗೂ ಉಕ್ಕು ಸಚಿವರಾದ ಹೆಚ್ ಡಿ ಕುಮಾರಸ್ವಾಮಿಯವರನ್ನು ಭೇಟಿ ಮಾಡಲಾಯಿತು.
ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್. ಡಾ ಸಿ ಎನ್ ಮಂಜುನಾಥ್ ರವರ ಜೊತೆ ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ ಸರ್ಫಾಸಿ ಕಾಯ್ದೆಯ ಅಡಿಯಲ್ಲಿ ಆನ್-ಲೈನ್ ಹರಾಜು ಪ್ರಕ್ರಿಯೆ ತಡೆಹಿಡಿಯುವಂತೆ ಈ ಹಿಂದೆ ಕೇಂದ್ರ ಸಚಿವರು ಸೂಚಿಸಿದ್ದರೂ ಕೂಡ ಬ್ಯಾಂಕ್ ಗಳು ಸಚಿವರ ಸೂಚನೆಯನ್ನು ಧಿಕ್ಕರಿಸಿ ಕಾಫಿ ಬೆಳೆಗಾರರಿಗೆ ಇ-ಆಕ್ಷನ್ ನೊಟೀಸ್ ಗಳನ್ನು ಜಾರಿ ಮಾಡುತ್ತಿರುವ ಕುರಿತು ಗಮನ ಸೆಳೆಯಲಾಯಿತು.
ಕೃಷಿ ಸಾಲದ ವ್ಯಾಪ್ತಿಯಲ್ಲಿ ಪಡೆದ ಕಾಫಿ ಸಂಬಂಧಿತ ಸಾಲಗಳನ್ನು ವಾಣಿಜ್ಯ ಸಾಲಗಳ ವಸೂಲಾತಿ ಮಾದರಿಯಲ್ಲಿ ಸರ್ಫಾಸಿ ಕಾಯ್ದೆ ಬಳಸಿ ಬೆಳೆಗಾರರ ತೋಟಗಳನ್ನು ಹರಾಜು ಹಾಕುತ್ತಿರುವ ಬ್ಯಾಂಕ್ ಗಳ ನಿಲುವುಗಳ ಕುರಿತು ಉದಾಹರಣೆಗಳ ಸಮೇತ ವಿವರಿಸಲಾಯಿತು.
ಬೆಳೆಗಾರರ ತೋಟಗಳನ್ನು ಹರಾಜು ಮಾಡುವ ಸಂದರ್ಭದಲ್ಲಿ ಬ್ಯಾಂಕ್ ಗಳು ಉದ್ದೇಶಪೂರ್ವಕವಾಗಿ ತೋಟಗಳ ಮಾರುಕಟ್ಟೆ ಮೌಲ್ಯವನ್ನು ಕಡೆಗಣಿಸಿ ತಮ್ಮ ಸಾಲದ ಬಾಬ್ತು ಬಾಕಿ ಇರುವ ಮೊತ್ತವನ್ನು ಮಾತ್ರ ಪರಿಗಣಿಸಿ ಹರಾಜು ಮಾಡಿ ಬೆಳಗಾರರಿಗೆ ತೀವ್ರ ನಷ್ಟ ಉಂಟುಮಾಡುತ್ತಿರುವ ಬಗ್ಗೆ ಗಮನ ಸೆಳೆಯಲಾಯಿತು.
ಈಗಾಗಲೇ ಅಸ್ತಿತ್ವದಲ್ಲಿರುವ DRT ಮೂಲಕ ಸುಸ್ಥಿ ಸಾಲಗಳ ಕುರಿತಾದ ವಸೂಲಾತಿ ಪ್ರಕ್ರಿಯೆ ಅಡಿಯಲ್ಲಿ ಹೆಚ್ಚು ಪಾರದರ್ಶಕವಾದ ಹಾಗೂ ನ್ಯಾಯಸಮ್ಮತ ತೀರ್ಮಾನಗಳು ಬರಬಹುದೆಂಬ ಅಭಿಪ್ರಾಯಕ್ಕೆ ಬರಲಾಯಿತು.
ಸುದೀರ್ಘ ಚರ್ಚೆಯ ನಂತರ ಕೇಂದ್ರ ಹಣಕಾಸು ಸಚಿವರು ಈ ಕೂಡಲೇ ಬ್ಯಾಂಕಿಂಗ್ ಮುಖ್ಯಸ್ಥರನ್ನು ಒಳಗೊಂಡಂತೆ ತುರ್ತು ಸಭೆ ಕರೆಯಲು ಆದೇಶ ಮಾಡಿರುತ್ತಾರೆಂದು ಕೆಜಿಎಫ್ ಅಧ್ಯಕ್ಷ ಹಳಸೆ ಶಿವಣ್ಣ ತಿಳಿಸಿದ್ದಾರೆ.




