ಬೆಂಗಳೂರು: ಮೇ.01: ಬುದ್ಧನ ಮೂರು ಮಹತ್ವದ ಘಟನೆಗಳೇ ಬೌದ್ಧ ಪೂರ್ಣಿಮಾ ಪವಿತ್ರ ದಿನವಾಗಿದೆ ಎಂದು ಬೆಂಗಳೂರು ವಿವಿಯ ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಪ್ರೊ.ಪಿ.ಸಿ. ನಾಗೇಶ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಬೆಂಗಳೂರು ವಿವಿಯ ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ “ಬುದ್ಧ ಪೂರ್ಣಿಮಾ” ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮೂರು ಮಹಾ ಘಟನೆಗಳ ಸಂಕೇತವೇ ಬುದ್ಧ ಪೂರ್ಣಿಮಾ. ಈ ಪುಣ್ಯ ದಿನವು ಬೌದ್ಧ ಧರ್ಮದ ಅತ್ಯಂತ ಪವಿತ್ರ ದಿನವಾಗಿದೆ. ಇದೊಂದು ಗೌತಮ ಬುದ್ಧನ ಜನನ, ಜ್ಞಾನೋದಯ ಹಾಗೂ ಮಹಾಪರಿನಿರ್ವಾಣ ಈ ಮೂರು ಮಹತ್ವದ ಘಟನೆಗಳನ್ನು ಒಂದೇ ದಿನದಲ್ಲಿ ಸ್ಮರಿಸುವ ದಿನವಾಗಿದೆ. ಇಂದು ಬೌದ್ಧರಿಗೆ ಮಾತ್ರವಲ್ಲದೆ, ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಬಯಸುವ ಎಲ್ಲರಿಗೂ ಪ್ರೇರಣೆಯ ದಿನವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶೇಷಾದ್ರಿ ಮಾತನಾಡಿ, ಬುದ್ಧ ಪೂರ್ಣಿಮಾ ಪ್ರಯುಕ್ತವಾಗಿ ಇಂದು ನಾವೆಲ್ಲರೂ ಭಗವಾನ್ ಬುದ್ಧರಿಗೆ ವಂದನೆ ಸಲ್ಲಿಸುತ್ತಾ, ಅವರ ಬೋಧನೆಗಳನ್ನು ಸ್ಮರಿಸುತ್ತಾ, ದಾನ ಮತ್ತು ಪ್ರಾರ್ಥನೆಯಲ್ಲಿ ತೊಡಗಿದ್ದು ವಿಶೇಷವಾಗಿದ್ದು ಎಂದು ತಿಳಿಸಿದರು.

ಪ್ರಸ್ತುತ ದಿನಗಳಲ್ಲಿ ಇಂದಿನ ಯುವ ಪೀಳಿಗೆಗೆ ಬುದ್ಧನ ವಿಚಾರಗಳನ್ನು ಅಗತ್ಯತೆಯನ್ನು ವಿವರಿಸಿ, ಮೂರು ಮುಖ್ಯ ಅಂಶಗಳನ್ನು ಉಲ್ಲೇಖಿಸುತ್ತಾ ಮೊದಲನೆಯದಾಗಿ, ಮನಸ್ಸಿನ ಮೇಲೆ ನಿಯಂತ್ರಣ ಅಗತ್ಯವಿದೆ. ಇಂದಿನ ವೇಗದ ಬದುಕಿನಲ್ಲಿ ಸಣ್ಣ ವಿಷಯಗಳಿಗೂ ಒತ್ತಡ ಮತ್ತು ಆತಂಕ ಹೆಚ್ಚುತ್ತಿರುವ ಸಂದರ್ಭದಲ್ಲಿ, “ನಮ್ಮ ಮನಸ್ಸೇ ನಮ್ಮ ಸುಖ-ದುಃಖಗಳಿಗೆ ಕಾರಣ” ಎಂಬ ಬುದ್ಧನ ಉಪದೇಶವನ್ನು ಅವರು ಸ್ಮರಿಸಿದರು.

ಎರಡನೆಯದಾಗಿ, ಅಹಿಂಸೆಯ ಮಹತ್ವವನ್ನು ವಿವರಿಸಿ, ಅಹಿಂಸೆ ಎಂದರೆ ಕೇವಲ ಯುದ್ಧವಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಇತರರನ್ನು ಅವಹೇಳನ ಮಾಡದಿರುವುದು, ಕೋಪದಲ್ಲಿ ಕೆಟ್ಟ ಮಾತುಗಳನ್ನು ಆಡದಿರುವುದು ಹಾಗೂ ಪ್ರಾಣಿ-ಪಕ್ಷಿಗಳ ಮೇಲೆ ಕರುಣೆ ತೋರುವುದು ಕೂಡ ಅಹಿಂಸೆಯ ಭಾಗವೇ ಎಂದರು. ಮೂರನೆಯದಾಗಿ, ತಮ್ಮ ಜ್ಞಾನ ಮತ್ತು ವಿವೇಕದ ಆಧಾರದ ಮೇಲೆ ತಮ್ಮ ಬದುಕಿನ ದಾರಿಯನ್ನು ತಾವೇ ರೂಪಿಸಿಕೊಳ್ಳಬೇಕು ಎಂದರು.

ಕೊನೆಯಲ್ಲಿ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ, ಸಮಾಜಕ್ಕೆ ಒಳಿತು ಮಾಡುವುದೇ ಬುದ್ಧನಿಗೆ ಸಲ್ಲಿಸುವ ನಿಜವಾದ ಗೌರವ, ಹಾಗೆ ಶಾಂತಿ ಮತ್ತು ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.

ಇದೇ ವೇಳೆಯಲ್ಲಿ ಬೆಂಗಳೂರು ವಿವಿಯ ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು ಹಾಗೂ ಪ್ರಾಧ್ಯಾಪಕರಾದ ಪ್ರೊ. ಪಿ.ಸಿ. ನಾಗೇಶ್, ಬೆಂಗಳೂರು ವಿವಿಯ ಎಸ್‌ಸಿ ಮತ್ತು ಎಸ್‌ಟಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್. ಕೊಂಡಲರಾವ್, ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಶೇಷಾದ್ರಿ, ಉಪಾಧ್ಯಕ್ಷ ಅನಿಲ್ ಕುಮಾರ್ ವಿ, ಚಂದ್ರಪ್ಪ ಎಂ ಮಿಡ್ಲುಮುನಿ, ಡಾ. ದೀಪಕ್ ಅಪ್ಪಾಜಿ, ರವಿಕಾಂತ್, ಬೋಧಕ-ಬೋಧಕೇತರ ಸಿಬ್ಬಂದಿ ವರ್ಗದವರು, ಸುನಿಲ್ ಕುಮಾರ್, ಪ್ರವೀಣ್, ಕಿರಣ್, ಶಾಲಿನಿ, ಅಮೃತಾ, ಬಿಂದು ಮತ್ತು ಭಗವಾನ್‌ ಬುದ್ಧರ ಅನುಯಾಯಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪೋಟೋ ಕ್ಯಾಪ್ಷನ್:ಬೆಂಗಳೂರು ವಿಶ್ವವಿದ್ಯಾಲಯದ ಬಾಬಾಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಮತ್ತು ಸ್ನಾತಕೋತ್ತರ ಹಾಗೂ ಸಂಶೋಧನಾ ವಿದ್ಯಾರ್ಥಿ ಒಕ್ಕೂಟದ ಸಹಯೋಗದೊಂದಿಗೆ ಆಯೋಜಿಸಿದ್ದ ಬುದ್ಧ ಪೂರ್ಣಿಮಾ ಅಂಗವಾಗಿ ಭಗವಾನ್ ಬುದ್ಧರ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡುವ ಮೂಲಕ ಬೌದ್ಧ ಪೂರ್ಣಿಮಾ ಆಚರಣೆಯನ್ನು ಮಾಡಲಾಯಿತು.

ಕೋಟ್:1ಬೌದ್ಧ ಪೂರ್ಣಿಮಾ ಸನ್ನಿವೇಶವು ಗೌತಮ ಬುದ್ಧನ ಜನನ, ಜ್ಞಾನೋದಯ ಹಾಗೂ ಮಹಾಪರಿನಿರ್ವಾಣ ಈ ಮೂರು ಮಹತ್ವದ ಘಟನೆಗಳನ್ನು ಒಂದೇ ದಿನದಲ್ಲಿ ಸ್ಮರಿಸುವ ದಿನ, ಇಂದು ಬೌದ್ಧರಿಗೆ ಮಾತ್ರವಲ್ಲದೆ, ಶಾಂತಿ, ಕರುಣೆ ಮತ್ತು ಅಹಿಂಸೆಯ ಸಂದೇಶವನ್ನು ಬಯಸುವ ಎಲ್ಲರಿಗೂ ಪ್ರೇರಣೆಯ ದಿನವಾಗಿದೆ.- ಪ್ರೊ. ಪಿ.ಸಿ. ನಾಗೇಶ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕರು.

ಕೋಟ್:2 ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರೂ ಕೆಟ್ಟ ಅಭ್ಯಾಸಗಳನ್ನು ತ್ಯಜಿಸಿ, ಸಮಾಜಕ್ಕೆ ಒಳಿತು ಮಾಡುವುದೇ ಬುದ್ಧರಿಗೆ ಸಲ್ಲಿಸುವ ನಿಜವಾದ ಗೌರವ, ಹಾಗೆ ಶಾಂತಿ ಮತ್ತು ಸದಾಚಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು.- ಶೇಷಾದ್ರಿ ಜಿ.ಜಿ. ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *