
ಸಕಲೇಶಪುರ: ಹಾಸನದಿಂದ ಸಕಲೇಶಪುರ ಬೈಪಾಸ್ವರೆಗೆ ನ.1ರೊಳಗೆ ಕಾಮಗಾರಿ ಮುಗಿಸಲು ಸಮಯ ನೀಡಿದ್ದೇವೆ. ಮುಂದಿನ ಕಾಮಗಾರಿಯನ್ನು ಮುಗಿಸಲು ಮುಂದಿನ ವರ್ಷ ಮಾ. 24ರ ವರೆಗೆ ಕಾಲಾವಕಾಶವನ್ನು ಗುತ್ತಿಗೆದಾರರು ಕೇಳಿದ್ದಾರೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ತಾಲೂಕಿನ ದೋಣಿಗಾಲ್ ಬಳಿ ಭೂಕುಸಿತ ಪ್ರದೇಶಕ್ಕೆ ರಾಷ್ಟ್ರೀಯ ಹೆದ್ದಾರಿ 75ರ ಅಧಿಕಾರಿಗಳೊಂದಿಗೆ ಭೇಟಿ ಮಾಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಕಾಮಗಾರಿಗಾಗಿ ಸಂಪೂರ್ಣವಾಗಿ ಶಿರಾಡಿ ಘಾಟಿ ರಸ್ತೆಯನ್ನು ಮುಚ್ಚುವುದು ಸಾಧ್ಯವಿಲ್ಲ. ಇದು ಬೆಂಗಳೂರು-ಮಂಗಳೂರಿನ ಪ್ರಮುಖ ಸಂಪರ್ಕ ರಸ್ತೆ. ಏಕಮುಖ ಸಂಚಾರದ ಬಗ್ಗೆ ಚಿಂತಿಸಿದ್ದೇವೆ ಎಂದರು.
ಸುರಂಗ ಮಾರ್ಗ ಹೊಸ ಯೋಜನೆಶಿರಾಡಿ ಘಾಟಿ ಮಾರ್ಗದಲ್ಲಿ ಸುರಂಗ ಮಾರ್ಗ ನಿರ್ಮಾಣ ಹೊಸ ಯೋಜನೆಯಾಗಿದೆ. ಒಟ್ಟು 30 ಕಿ.ಮೀ.ಗೆ ರೂಪುರೇಷೆ ಹಾಕಲಾಗಿದ್ದು, ರಾಜ್ಯಕ್ಕೆ ಇದೊಂದು ಹೆಮ್ಮೆಯ ಯೋಜನೆಯಾಗಿದೆ. ಪ್ರಾಥಮಿಕ ಹಂತದ ರೂಪುರೇಷೆ ಸಿದ್ಧವಾಗಿದ್ದು, ಕೇಂದ್ರ ಮಂತ್ರಿಗಳು ಒಪ್ಪಿಗೆ ಕೊಟ್ಟ ಮೇಲೆ ಅಂತಿಮ ರೂಪ ನೀಡಲಾಗುವುದು ಎಂದರು.ಸುರಂಗ ಮಾರ್ಗ ನಿರ್ಮಾಣವಾದರೆ ವಾಹನಗಳ ಓಡಾಟದ ವೇಗ ಹೆಚ್ಚಾಗುತ್ತದೆ. ವಾಹನಗಳು ಒಂದು ಕಡೆಯಿಂದ ಸುರಂಗದಲ್ಲಿ ಹಾಗೂ ಇನ್ನೊಂದು ಕಡೆ ರಸ್ತೆಯಲ್ಲಿ ಸಂಚರಿಸುತ್ತವೆ. ಅಪಘಾತಗಳು ಕಡಿಮೆಯಾಗಲಿದೆ ಎಂದರು.ಶಾಸಕ ಸಿಮೆಂಟ್ ಮಂಜು, ವಿಧಾನ ಪರಿಷತ್ ಸದಸ್ಯ ನಾಗರಾಜ್ ಯಾದವ್, ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
