
ಹಾಸನ, ಜುಲೈ, 28: ಹಾಸನ ಜಿಲ್ಲೆಯಲ್ಲಿ ಮಳೆ ತಗ್ಗಿದರೂ ಅವಾಂತರಗಳು ಕಡಿಮೆಯಾಗುತ್ತಿಲ್ಲ. ಸತತವಾಗಿ ಒಂದು ವಾರದಿಂದ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ತಡೆಗೋಡೆ ಕುಸಿದ ಘಟನೆ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹಂಗರಹಳ್ಳಿ ಬಳಿ ನಡೆದಿದೆ.
ಹಾಸನದಿಂದ ಮೈಸೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 373 ರ ಮೇಲ್ಸೇತುವೆಯ ಸ್ಲ್ಯಾಬ್ ಕುಸಿದಿದ್ದು, ಪರಿಣಾಮ ಇದೀಗ ಸಂಪೂರ್ಣ ರಸ್ತೆಯೇ ಕುಸಿಯುವ ಭೀತಿ ಎದುರಾಗಿದೆ. ಅಲ್ಲದೆ ಬೇಲೂರು – ಬಿಳಿಕೆರೆ ಮಾರ್ಗದ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್ ಆಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಉದ್ಘಾಟನೆಯಾಗಿ ಮೂರೇ ವರ್ಷಕ್ಕೆ ಮೂರನೇ ಬಾರಿ ಈ ಮೇಲ್ಸೇತುವೆ ಕುಸಿದುಬಿದ್ದಿದೆ. ಅದರಲ್ಲೂ ಮಳೆಗಾಲದಲ್ಲಿಯೇ ಮೇಲ್ಸೇತುವೆಯ ಸ್ಲ್ಯಾಬ್ ಕುಸಿಯುತ್ತಿದೆ. ಇದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

