
ಹಾಸನ : ಕಲಿಯಲು ನಮಗೆ ಯಾವುದೇ ಶಿಕ್ಷಕರಿಂದ ಲೈಸೆನ್ಸ್ ಅಗತ್ಯವಿಲ್ಲ, ಅತ್ಯುತ್ತಮ ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಸದಾ ಲಭ್ಯವಿರುತ್ತಾರೆ. ವಿದ್ಯೆ ಪಡೆದು ಉತ್ತಮ ಜೀವನ ರೂಪಿಸುವಲ್ಲಿ ಗುರುವಿನ ಪಾತ್ರ ಮುಖ್ಯವಾದದ್ದು.ಎಂದು ಯುವ ಸಾಹಿತಿ ನಿರಂಜನ್ ಎ.ಸಿ ಹೇಳಿದರು.
ಎನ್.ಡಿ.ಆರ್ ಕೆ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ವಿಭಾಗದಿಂದ ಆಯೋಜಿಸಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆ ಹಾಗೂ ಶಿಕ್ಷಕರ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿ “ಸಂಸ್ಕ್ರತಿ ಎಲ್ಲಿರುತ್ತದೆ ಅಲ್ಲಿ ಶಾಂತಿ ಮತ್ತು ನೆಮ್ಮದಿ ಇರುತ್ತದೆ. ಜ್ಞಾನ ಬೇಕೆಂದರೆ ಗುರು ಬೇಕು, ಗುರುಗಳು ಹೇಳುವ ಜ್ಞಾನ ಪಡೆಯಬೇಕು, ಶಿಕ್ಷಕರಿಗೆ ಗೌರವ ನೀಡಬೇಕು. ವಿದ್ಯೆ ಪಡೆದು ಉತ್ತಮ ಜೀವನ ರೂಪಿಸುವಲ್ಲಿ ಗುರುವಿನ ಪಾತ್ರ ಮುಖ್ಯವಾದದ್ದು.ಕಲಿಯಲು ನಮಗೆ ಯಾವುದೇ ಶಿಕ್ಷಕರಿಂದ ಲೈಸೆನ್ಸ್ ಅಗತ್ಯವಿಲ್ಲ, ಅತ್ಯುತ್ತಮ ಶಿಕ್ಷಕರುಗಳು ವಿದ್ಯಾರ್ಥಿಗಳಿಗೆ ಸದಾ ಲಭ್ಯವಿರುತ್ತಾರೆ,ಸರ್ವಪಲ್ಲಿ ರಾಧಾಕೃಷ್ಣನ್ ಅವರು ದೇಶದ ಮೊದಲ ಉಪರಾಷ್ಟ್ರಪತಿಯಾಗಿ , ಎರಡನೇ ರಾಷ್ಟ್ರಪತಿಯಾಗಿ,ಓರ್ವ ಶ್ರೇಷ್ಠ ಶಿಕ್ಷಣ ತಜ್ಞರಾಗಿ, ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.
ಶಿಕ್ಷಣ ಕ್ಷೇತ್ರ, ತತ್ವಜ್ಞಾನ, ದೇಶದ ಅಭಿವೃದ್ಧಿಗಾಗಿ ತಮ್ಮ ಜೀವನನ್ನೇ ಮುಡುಪಾಗಿಟ್ಟಿದ್ದರು. ಅದಕ್ಕಾಗಿಯೇ ಅವರು ಭಾರತೀಯರ ಮನದಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ” ಎಂದರು.ಶಿಕ್ಷಣದ ಪರಿವರ್ತನೆಯು ಶಿಕ್ಷಕರಿಂದ ಪ್ರಾರಂಭವಾಗುತ್ತದೆ.
ಅಧ್ಯಯನಶೀಲತೆ ಅಧ್ಯಾಪಕನಿಗೆ ಅತ್ಯಗತ್ಯ. ವಿದ್ಯಾರ್ಥಿಗಳಲ್ಲಿ ಹುದುಗಿದ ಸುಪ್ತ ಪ್ರತಿಭೆಯನ್ನು ನನಗರಿವಿಲ್ಲದಂತೆ ವೇದಿಕೆ ಮುಂದೆ ಸಾದರಪಡಿಸುವಲ್ಲಿ ಪ್ರಮುಖ ಪಾತ್ರವನ್ನು ಶಿಕ್ಷಕರು ವಹಿಸುತ್ತಾರೆ. ಪ್ರತೀ ಹೆಜ್ಜೆಯಲ್ಲೂ ಮಾರ್ಗದರ್ಶಕರಾಗಿ ನಿಂತು ಭರವಸೆಯ ಬದುಕಿಗೆ ದಾರಿ ಮಾಡಿಕೊಡುತ್ತಾರೆ. ಭಯ ಪಟ್ಟು ನಿಂತಾಗ ಆತ್ಮ ಧೈರ್ಯ ತುಂಬಿ, ಕೈ ಚೆಲ್ಲಿ ಕೂತಾಗ ಸಾಧಿಸುವ ಮಾರ್ಗ ತೋರಿಸಿ, ಅರಿವಿಲ್ಲದ ವಿಷಯಗಳ ಕುರಿತು ಅರಿವು ಮೂಡಿಸಿ, ಅತ್ತಾಗ ಕಣ್ಣೂರೆಸಿ, ಹಲವು ಬಾರಿ ವಿದ್ಯಾರ್ಥಿಗಳ ನಗುವಿಗೆ ಕಾರಣವಾಗಿ, ನಿರರ್ಗಳವಾಗಿ ಮಾತನಾಡುವ ಕಲೆಯ ಕಾರಣಿಕರ್ತರಾಗಿ, ಮಕ್ಕಳ ಆಸೆ ಕನಸಿಗೆ ಮಾರ್ಗದರ್ಶಕರಾಗಿ ನಿಲ್ಲುತ್ತಾರೆ. ಗುರುಗಳನ್ನು ಪೂಜಿಸುವ ಈ ಸಂಪ್ರದಾಯವು ನಮ್ಮ ದೇಶದಲ್ಲಿ ಯುಗಾಂತರಗಳಿಂದ ಮುಂದುವರೆದಿದೆ ಎಂದು ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಎ ರವಿಕಾಂತ್ ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ಎ.ರವಿಕಾಂತ್ , ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಂಯೋಜಕಿ ಶ್ರೀಮತಿ ಪ್ರಿಯ ಎ.ಜೆ ಅವರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಬೋಧಕರಾದ ಸತೀಶ್ ಕುಮಾರ್ , ಪ್ರದೀಪ್ ನಾಯಕ್,ಅಕ್ಷತಾ , ಸಭಾ ನಸ್ಮಿನ್ , ಡಾ. ಪವಿತ್ರ , ನಿಶ್ಚಿತ , ಅನುಷ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


