
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ನಿಧಾನವಾಗಿ ಏರತೊಡಗಿದೆ. ಫೆಬ್ರವರಿವರೆಗೆ ಚಳಿಗಾಲ ಇರಬೇಕಿತ್ತು. ಆದರೆ, ಹವಾಮಾನ ವೈಪರಿತ್ಯದಿಂದಾಗಿ ಈ ಬಾರಿ ವಾಡಿಕೆಗಿಂತ ಮುನ್ನವೇ ಬಿಸಿಲಿನ ಕಾವು ಹೆಚ್ಚಿದೆ.
ತೇವಾಂಶ ಭರಿತ ಮೋಡಗಳ ಸೆಳೆತ,ಗಾಳಿ ವೇಗ ಇಲ್ಲದಿರುವುದು, ವಾತಾವರಣದಲ್ಲಿ ತೀವ್ರ ತೇವಾಂಶ ಕೊರತೆಯಿಂದಾಗಿ ಬಿಸಿಲಿನ ಝಳ ಜನರನ್ನು ಬಾಧಿಸುತ್ತಿದೆ.ರಾಜ್ಯದ ಹೆಚ್ಚಿನ ಭಾಗಗಳು ಶುಷ್ಕ ಮತ್ತು ಅರೆ ಶುಷ್ಕ ಸ್ಥಿತಿಯಲ್ಲಿ ಇರುವ ಕಾರಣದಿಂದ ಇತ್ತೀಚಿನ ವರ್ಷಗಳಲ್ಲಿ ಉಷ್ಣತೆ ಹೆಚ್ಚಳ, ಬಿಸಿಗಾಳಿಯ ಆತಂಕ ತಂದೊಡ್ಡಿದೆ.
ಏಪ್ರಿಲ್ ಮತ್ತು ಮೇನಲ್ಲಿ ಶಾಖಾ ತರಂಗ ಬೀಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ಕೊಟ್ಟಿದೆ.ಸಾಮಾನ್ಯವಾಗಿ ಬೇಸಿಗೆಗಾಲ ಅಂದರೆ ಮಾರ್ಚ್ನಿಂದ ಆರಂಭವಾಗಿ ಮೇ ತಿಂಗಳವರೆಗೆ ಇರುತ್ತದೆ. ಆದರೆ, ಬಾರಿ ವಾಡಿಕೆಗಿಂತ ಮುನ್ನವೇ ಶುರುವಾಗುವಂತಾಗಿದೆ.
ಈ ವರ್ಷ 4 ತಿಂಗಳು ಬೇಸಿಗೆ ಕಾಲ ಇರಲಿದೆ. ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲು ಬೇಗೆ ಹೆಚ್ಚಾಗುತ್ತಿತ್ತು. ಆದರೆ, ಫೆಬ್ರವಾರಿ 2ನೇ ವಾರದಿಂದಲೇ ರಾಜ್ಯದಲ್ಲಿ ಸುಡು ಬಿಸಿಲು ಕಾಣಿಸಿಕೊಳ್ಳಲಿದೆ. ಏಪ್ರಿಲ್ನಲ್ಲಿ ಹೆಚ್ಚಾಗುತ್ತಿದ್ದ ಉಷ್ಣಾಂಶ ಮಾರ್ಚ್ನಲ್ಲಿ ಅಧಿಕವಾಗುವ ಸಾಧ್ಯತೆಯಿದೆ.
ಈಗ ಪ್ರಸ್ತುತ ತಿಂಗಳಲ್ಲಿ ಬಿಸಿಲು ಝಳ ತುಸು ಹೆಚ್ಚಳವಾಗಿರುವುದು ಆತಂಕ ತಂದೊಡ್ಡಿದೆ.ಹವಾಮಾನ ಅಸಮತೋಲನದಿಂದ ವಾತಾವರಣದಲ್ಲಿ ದಿಢೀರ್ ಬದಲಾವಣೆಯಾಗಿದೆ.
ಪ್ರತಿ ವರ್ಷವೂ ದಕ್ಷಿಣ ಕರ್ನಾಟಕ ಜಿಲ್ಲೆಗಳಿಗಿಂತ ಉತ್ತರ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ,ರಾಯಚೂರು, ಧಾರವಾಡ, ಕೊಪ್ಪಳ, ಗದಗ, ಬಳ್ಳಾರಿ, ಹಾವೇರಿ, ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಹೆಚ್ಚು ಉಷ್ಣಾಂಶ ದಾಖಲಾಗುತ್ತದೆ.
ಹಲವು ವರ್ಷಗಳಿಂದಲೂ ಉತ್ತರ ಕರ್ನಾಟಕ, ಆಂಧ್ರಪದೇಶ ಹಾಗೂ ತೆಲಂಗಾಣದಲ್ಲಿ 40 ಡಿಗ್ರಿಗಿಂತ ಹೆಚ್ಚು ಉಷ್ಣಾಂಶ ದಾಖಲಾಗುತ್ತಿದ್ದು, ಶಾಖ ತರಂಗ ಸ್ಥಿತಿ ಉಂಟಾಗಿದೆ.
ಈ ವರ್ಷವೂ ಅದೇ ಪರಿಸ್ಥಿತಿ ಉಂಟಾಗುವ ಸಾಧ್ಯತೆಯಿದೆ. ಬಿಸಿಲು ಹೆಚ್ಚಳದಿಂದಾಗಿ ಜನರು, ಜಾನುವಾರು, ಪಕ್ಷಿ, ಪ್ರಾಣಿಗಳು ನಲಗಲಿದೆ.ವಿಶೇಷವಾಗಿ ಕಾಡಿನಲ್ಲಿ ವಾಸಿಸುತ್ತಿರುವ ಪಕ್ಷಿಗಳು ಮತ್ತು ಪ್ರಾಣಿಗಳು ತಾಪಮಾನ ಹೆಚ್ಚಳಕ್ಕೆ ಕಂಗೆಟ್ಟು ನೀರುಗಾಗಿ ಪರಿತಪ್ಪಿಸುವಂತಾಗಲಿದೆ.
