
ಸಕಲೇಶಪುರ : ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜುರವರ ಮನವಿ ಮೇರೆಗೆ ಸಕಲೇಶ್ವರ ಸ್ವಾಮಿ ರಥೋತ್ಸವದ ಅಂಗವಾಗಿ ನಡೆಯುವ ಜಾತ್ರಾ ಮಹೋತ್ಸವವನ್ನು ಪಟ್ಟಣದ ಆಶ್ರಿತಾ ಹೋಟೆಲ್ ಮುಂಭಾಗದ ಟಾಟಾ ಕಾಫಿ ಲಿಮಿಟೆಡ್ ಜಾಗದಲ್ಲಿ ಮಾಡುತ್ತಿರುವ ಲೇ ಔಟ್ ನಲ್ಲಿ ಜಾತ್ರಾ ಮಹೋತ್ಸವ ನಡೆಸಲು ಯಾವುದೇ ಬಾಡಿಗೆ ತೆಗೆದುಕೊಳ್ಳದೆ ಅವಕಾಶ ಕೊಡುತ್ತಿದ್ದೇವೆ ಎಂದು ಜಾಗದ ಮಾಲೀಕರಾದ ಆರ್. ಎಲ್ ದೇವರಾಜ್ ಹಾಗೂ ಕರುಣಾಕರ್ ಹೇಳಿಕೆ ನೀಡಿದ್ದಾರೆ.
ಪ್ರತಿವರ್ಷ ಪಟ್ಟಣದಲ್ಲಿ ನಡೆಯುತಿದ್ದ ಜಾತ್ರೆ ನಡೆಯುತ್ತಿದ್ದ ಜಾತ್ರಾ ಮೈದಾನದ ಜಾಗ ಖಾಸಗಿ ವ್ಯಕ್ತಿಯೊಬ್ಬರ ಪಾಲಾಗಿದ್ದರಿಂದ ಜಾತ್ರೆ ನಡೆಸಲು ಪಟ್ಟಣದಲ್ಲಿ ಜಾಗದ ಕೊರತೆ ಉಂಟಾಗಿತ್ತು. ಕೆಲವು ಖಾಸಗಿ ವ್ಯಕ್ತಿಗಳು ಜಾತ್ರೆ ನಡೆಸಲು ತಮ್ಮ ಜಾಗವನ್ನು ನೀಡಲು ದುಬಾರಿ ಬಾಡಿಗೆ ಕೇಳಿದ್ದರು.
ಇದೀಗ ಜಾಗದ ಮಾಲೀಕರು ಶಾಸಕ ಸಿಮೆಂಟ್ ಮಂಜು ಮನವಿ ಮೇರೆಗೆ ಉಚಿತವಾಗಿ ಜಾಗ ನೀಡಲು ಮುಂದಾಗಿರುವುದರಿಂದ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿದ್ದಾರೆ.
