
ಸಕಲೇಶಪುರ : ತಾಲೂಕಿನ ಹಾನುಬಾಳು ಹೋಬಳಿಯ ಮಲೆನಾಡ ಮಡಿಲಲ್ಲಿ ಪ್ರಕೃತಿ ಜೊತೆಗೆ ರಂಗ ತರಬೇತಿ ಶಿಬಿರ
ಹಾಸನ ಜಿಲ್ಲೆ, ಸಕಲೇಶಪುರ ತಾಲ್ಲೂಕಿನ ಮಲೆನಾಡಿನ ಪ್ರಕೃತಿಯ ಮಡಿಲಲ್ಲಿ ಬೆಳೆದಿರುವ “ಜೈ ಕರ್ನಾಟಕ ಸಂಘ ಬೆಳ್ಳೇಕೆರೆ”, ಕಳೆದ ನಲವತ್ತೈದು ವರ್ಷಗಳಿಂದ ರಂಗಭೂಮಿ, ಸಾಹಿತ್ಯ, ಕಲೆ, ಪರಿಸರ ಸಂರಕ್ಷಣೆ, ಸಾಕ್ಷರತೆ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಸಂಸ್ಥೆ.ಈ ಸಂಸ್ಥೆಯು ಈ ವರ್ಷ “ಪೂರ್ಣಚಂದ್ರ ತೇಜಸ್ವಿ ರಂಗಮಂದಿರ ರಕ್ಷಿದಿ” ಯಲ್ಲಿ ಮೇ ೧, ೨೦೨೪ರಿಂದ ಮೇ ೧೫, ೨೦೨೪ರ ವರೆಗೆ ಯುವ ಜನರಿಗಾಗಿ ರಂಗ ತರಬೇತಿ ಶಿಬಿರವನ್ನು ಆಯೋಜಿಸುತ್ತಿದೆ.
ಇದು ಹದಿನೈದು ದಿನಗಳ ವಸತಿ, ಊಟ ಸಮೇತ ಶಿಬಿರವಾದ್ದರಿಂದ ನಮ್ಮ ಮಿತಿಯನ್ನಾದರಿಸಿ ಶಿಬಿರಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದೆ. ಶಿಬಿರಾರ್ಥಿಗಳಿಗೆ ಪ್ರವೇಶ ಶುಲ್ಕ ಇರುತ್ತದೆ. ಶಿಬಿರಗಳು ಇಡೀ ದಿನ ನಡೆಯುತ್ತವೆ.
ಶಿಬಿರದಲ್ಲಿ ರಂಗಕಲೆ, ಚಾರಣ- ಪರಿಸರ ಅಧ್ಯಯನ, ಛಾಯಾಚಿತ್ರ ಗ್ರಹಣ, ಸಾಹಿತ್ಯ ಮುಂತಾದ ವಿಚಾರಗಳ ಪ್ರಾಥಮಿಕ ಜ್ಣಾನದ ತರಗತಿಗಳು ಹಾಗೂ ಪ್ರಾತ್ಯಕ್ಷಿಕೆಗಳು ಇರುತ್ತವೆ.
ಈ ಎಲ್ಲಾ ವಿಭಾಗಗಳಲ್ಲೂ ಆಯಾ ವಿಚಾರಕ್ಕೆ ಸಂಬಂಧಪಟ್ಟ ತಜ್ಣರು ತರಗತಿ- ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುತ್ತಾರೆ.
ಶಿಬಿರದ ಕೊನೆಯಲ್ಲಿ ತಮ್ಮ ಕಲಿಕೆಯ ಪುನರಾವಲೋಕನ ಮತ್ತು ಸಣ್ಣ ರಂಗ ಪ್ರಸ್ತುತಿಯೂ ಇರಲಿದೆ ಎಂದು ಪ್ರಸಾದ್ ರಕ್ಷದಿ ತಿಳಿಸಿದ್ದಾರೆ.
