
ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಬಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರೆದಿದ್ದು ಕಳೆದ ರಾತ್ರಿ ಕಡೇಗರ್ಜೆ ಗ್ರಾಮದ ಆನಂದ ಕೆ.ಟಿ ರವರರಿಗೆ ಸೇರಿದ ಜಮೀನಿನಲ್ಲಿ ಸುಮಾರು 10 ಕ್ಕು ಹೆಚ್ಚಿನ ಕಾಡನೆಗಳ ಗುಂಪು ದಾಂದಲೆ ಎಬ್ಬಿಸಿ ಅಪಾರ ಪ್ರಮಾಣದ ಅಡಿಕೆ,ಕಾಫಿ ಹಾಗು ಇನ್ನಿತರ ಗಿಡಗಳನ್ನು ಹಾನಿ ಮಾಡಿದ ಘಟನೆ ವರದಿಯಾಗಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಕೃಷಿಕರಾದ ಆನಂದ ಕೆ ಟಿ ಮಾತನಾಡಿ ಜೀವನೋಪಾಯಕ್ಕಾಗಿ ಕೃಷಿಯನ್ನೇ ಅವಲಂಬಿಸಿ ಕಳೆದ ಐದಾರು ವರ್ಷಗಳಿಂದ ಬ್ಯಾಂಕಿನಲ್ಲಿ ಸಾಲ ಪಡೆದು ಅಡಿಕೆ,ಕಾಫಿ , ಸಿಲ್ವರ್ ಸೇರಿದಂತೆ ಇನ್ನಿತರ ಗಿಡಗಳನ್ನು ನೆಟ್ಟು ಪೋಷಿಸಿ ಪಸಲು ಕೊಡುವ ಹಂತಕ್ಕೆ ಬಂದಾಗ ಕಾಡಾನೆಗಳು ಏಕಾಏಕಿ ಬಂದು ಸಾವಿರಾರು ಮೌಲ್ಯದ ಬೆಳೆಗಳನ್ನು ಈ ರೀತಿ ದ್ವಂಸ ಮಾಡಿದರೆ ನಾವು ಹೇಗೆ ಜೀವನ ಸಾಗಿಸುವುದು, ಬಿಸಿಲು ಮಳೆ ಎನ್ನದೆ ಕಷ್ಟ ಪಟ್ಟು ಸಾಕಿದ ಗಿಡಗಳು ಹಾನಿಯಾಗುದನ್ನು ನೋಡಿದರೆ ಕೃಷಿ ಜೀವನದ ಮೇಲೆ ಜಿಗುಪ್ಸೆಯಾಗುತ್ತದೆ.
ಈ ಹಿಂದೆಯೂ ಮೂರ್ನಾಲ್ಕು ಬಾರಿ ಕಾಡಾನೆಗಳು ನಮ್ಮ ಜಮೀನಿನಲ್ಲಿ ದಾಳಿ ನಡೆಸಿ ಬಹಳಷ್ಟು ಗಿಡಗಳನ್ನು ಹಾನಿ ಮಾಡಿದ್ದು ಪರಿಹಾರಕ್ಕಾಗಿ ಅರ್ಜಿ ನೀಡಿದ್ದರು ಯಾವುದೇ ಪರಿಹಾರ ಬಂದಿಲ್ಲ,ಕಳೆದೆರಡು ವಾರಗಳಿಂದ ಸುಮಾರು 15 ಕ್ಕೂ ಅಧಿಕ ಕಾಡಾನೆಗಳು ಇಲ್ಲಿಯೇ ಬೀಡು ಬಿಟ್ಟಿದೆ,ಇಲ್ಲಿ ಸುತ್ತ ಮುತ್ತ ಕಾಡಾನೆಗಳ ದಿನ ನಿತ್ಯ ಹಾವಳಿ ನೋಡಿದರೆ ಜಮೀನಿಗೆ ಕಾಲಿಡಲು ತುಂಬಾ ಭಯವಾಗುತ್ತೆ.
ನಮಗೆ ಕಾಡಾನೆಗಳ ಹಾವಳಿಯಿಂದ ಶಾಶ್ವತ ಪರಿಹಾರ ಒದಗಿಸಿ ಇಲ್ಲಾ ನಮ್ಮ ಜಮೀನನ್ನು ಸರ್ಕಾರವೇ ಇಟ್ಟುಕೊಳ್ಳಲಿ ಎಂದು ತಮ್ಮ ಅಳಲನ್ನು ತೋಡಿಕೊಂಡರು.





