
ಅರೇಹಳ್ಳಿ : 2000ನೇ ಇಸವಿಯಲ್ಲಿ ಬಾಡಿಗೆ ಕಟ್ಟಡದಲ್ಲಿ ಆರಂಭವಾದ ಕಾಫಿ ಬೆಳೆಗಾರರ ಸಂಘವು ಇಂದು 25 ವರ್ಷ ಪೂರೈಸಿದ್ದರಿಂದ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದೇವೆ ಎಂದು ಕಾಫಿ ಬೆಳೆಗಾರರ ಸಂಘದ ಸ್ಥಾಪಕ ಅಧ್ಯಕ್ಷ ರಾಜೇಗೌಡ ಹೇಳಿದರು.
ಬೇಲೂರು ತಾಲೂಕು ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಕಾಫಿ ಬೆಳೆಗಾರರ ಸಂಘದ ಶ್ರೀ ಸಿದ್ದೇಶ್ ನಾಗೇಂದ್ರ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೆಳ್ಳಿ ಹಬ್ಬ ಸಂಭ್ರಮ, ಮೊದಲನೇ ಮಹಡಿ ಕಟ್ಟಡದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯ ಕನಸು ಕಂಡು ಅದನ್ನು ಸಾಕಾರಗೊಳಿಸಲು ಪ್ರಯತ್ನ ಪಟ್ಟಿದ್ದರಿಂದ ಸಂಘವನ್ನು ಸ್ಥಾಪಿಸಲು ಸಾಧ್ಯವಾಯಿತು ಎಂದರು.
ಶಾಸಕ ಹುಲ್ಲಳ್ಳಿ ಸುರೇಶ್ ಮಾತನಾಡಿ, ಕಾಡಾನೆ ಸಮಸ್ಯೆ ಮಲೆನಾಡ ಭಾಗದಲ್ಲಿ ಮಿತಿಮೀರಿದೆ. ಆದ್ದರಿಂದ ಕಾಫಿ ಬೆಳೆಗಾರರ ಸಂಘದ ಜೊತೆಗೆ ಸದಾ ಇದ್ದು ಕಾಡಾನೆ ಸಮಸ್ಯೆ ವಿರುದ್ಧದ ಹೋರಾಟಕ್ಕೆ ಬೆಂಬಲವನ್ನು ನೀಡುತ್ತೇನೆ ಎಂದರು
ಸಭಾಂಗಣದ ದಾನಿ ಸಿದ್ದೇಶ್ ನಾಗೇಂದ್ರ ಮಾತನಾಡಿ, ನಾನು ಕಾಫಿ ಬೆಳೆಗಾರನಲ್ಲದಿದ್ದರೂ ಮೂಲತಃ ನನ್ನ ಕುಟುಂಬ ಕಾಫಿ ಬೆಳೆಯನ್ನು ನಂಬಿ ಬದುಕುತ್ತಿದ್ದ ಕುಟುಂಬವಾದ್ದರಿಂದ ಸಂಘಕ್ಕೆ ನೆರವಾಗುವ ನಿಟ್ಟಿನಲ್ಲಿ ಸಭಾಂಗಣವನ್ನು ನಿರ್ಮಾಣವನ್ನು ಮಾಡಲು ಶ್ರೀ ಸಿದ್ದೇಶ್ ನಾಗೇಂದ್ರ ಸೇವಾ ಪ್ರತಿಷ್ಠಾನದ ಮೂಲಕ ಕೊಡುಗೆ ನೀಡಲಾಗಿದೆ ಎಂದರು.
ಈ ಸಂಧರ್ಭದಲ್ಲಿ ಸಂಘದ ಉಪಾಧ್ಯಕ್ಷ ಶಾರೀಬ್ ಫರ್ಹಾನ್, ಕಾರ್ಯದರ್ಶಿ ಕೆ.ಬಿ.ಪುಟ್ಟರಾಜು,ಜಂಟಿ ಕಾರ್ಯದರ್ಶಿ ಬಿ.ಸಿ. ಮೋಹನ್ ಕುಮಾರ್, ಪರಮೇಶ್,ಲೋಹಿತ್, ಯು.ಪಿ.ಮಲ್ಲೇಶ್,ಎಂ.ಆರ್.ವಿನೋದ್,ನ ಜೀಬುರ್ ರೆಹಮಾನ್, ಚೇತನ್ ಕುಮಾರ್, ಡಬ್ಲ್ಯೂ.ಆರ್.ಪಿಂಟೊ ಹಾಗೂ ಇನ್ನಿತರರು ಇದ್ದರು.
