
ಪುಣೆ: ಮಾವಲ್ ಬಳಿ ಇಂದ್ರಾಯಣಿ ನದಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಇಂದು(ಭಾನುವಾರ) ಕುಸಿತಗೊಂಡಿದೆ. ಘಟನೆಯಲ್ಲಿ ಐವರು ಮೃತಪಟ್ಟಿದ್ದು, ಇನ್ನೂ ಹಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆ ನಡೆದ ವೇಳೆ ಸೇತುವೆಯ ಮೇಲೆ 20 ರಿಂದ 25 ಜನರಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಪೊಲೀಸರು, ಎನ್ಡಿಆರ್ಎಫ್ ಸೇರಿದಂತೆ ಹಲವು ರಕ್ಷಣಾ ಪಡೆಗಳು ಆಗಮಿಸಿವೆ. ನದಿಯಲ್ಲಿ ಬಿದ್ದಿರುವವರ ರಕ್ಷಣೆಯು ಪ್ರಮುಖ ಆದ್ಯತೆಯಾಗಿದೆ ಎಂದು ಬಾರಾಮತಿ ಸಂಸದೆ ಸುಪ್ರಿಯಾ ಸುಳೆ ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಈವರೆಗೆ ಮೂವರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಪುಣೆ ಬಳಿ ಬಾರಿ ಮಳೆಯಾಗುತ್ತಿದೆ. ಕುಂದಮಾಲ ಸೇತುವೆ ಎಂದೇ ಪ್ರಸಿದ್ದವಾಗಿದ್ದ ಈ ಸೇತುವೆಯ ಬಳಿ ಮಾನ್ಸೂನ್ ವೇಳೆ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದರು.
