
ಸಿಸಿ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಿದ ಶಾಸಕ ಹುಲ್ಲಳ್ಳಿ ಸುರೇಶ್
ಅರೇಹಳ್ಳಿ: ಅಂದಾಜು ೭೦ ಲಕ್ಷ ರೂ.ಗಳ ನಾನಾ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು ಅತೀ ಶೀಘ್ರದಲ್ಲಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಶಾಸಕ ಹುಲ್ಲಳ್ಳಿ ಸುರೇಶ್ ಹೇಳಿದರು. ಬೇಲೂರು ತಾಲೂಕು ಅರೇಹಳ್ಳಿ ಹೋಬಳಿಯ ಸ್ಕೂಲ್ ಗರ್ಜೆ ಬಳಿಯ ಅಮೃತೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನೆರವೇರಿದ ಸಿಸಿ ರಸ್ತೆಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಮಳೆ ನಡುವೆಯೂ ನಮ್ಮ ಜನ ಸಾರ್ವಜನಿಕ ಕಾಮಗಾರಿಗೆ ಒತ್ತನ್ನು ನೀಡುತ್ತಿದ್ದಾರೆ. ರಸ್ತೆ ದುಸ್ಥಿತಿಯಲ್ಲಿರುವುದರಿಂದ ಗ್ರಾಮಸ್ಥರ ಒತ್ತಾಸೆಯಂತೆ ಗುಣಮಟ್ಟದ ಕಾಮಗಾರಿ ಪ್ರಾರಂಭಿಸಲಾಗುವುದು.
ಕೇವಲ ೧೫ ರಿಂದ ೨೦ ದಿನಗಳೊಳಗೆ ಕಾಮಗಾರಿಯನ್ನು ಮುಗಿಸಲು ಕ್ರಮವಹಿಸಲಾಗಿದೆ. ರಸ್ತೆ ಕಾಮಗಾರಿ ಮುಗಿದ ನಂತರ ಈ ಗ್ರಾಮದ ಚರಂಡಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗುವುದು.
ಅರೇಹಳ್ಳಿಯ ಅಂಬೇಡ್ಕರ್ ವೃತ್ತದಿಂದ ತೊಳಲು ಮಾರ್ಗಕ್ಕೆ ಆರಂಭದಲ್ಲಿ ಚರಂಡಿ ನಿರ್ಮಿಸಿ ೧ ಕಿ.ಮೀ ಸಿಸಿ ರಸ್ತೆ ಮಾಡಲಾಗುವುದು ಎಂದರು. ಈ ವೇಳೆ ಲಕ್ಕುಂದ ಗ್ರಾಪಂ ಅಧ್ಯಕ್ಷೆ ರಾಧಾ ಗಂಗಾಧರ್, ಪಿಡಿಒ ಮಂಜುನಾಥ್, ಗ್ರಾಪಂ ಸದಸ್ಯರಾದ ಯಶೋಧ ಹಾಗೂ ಮಲ್ಲೇಶ್ ಗ್ರಾಮಸ್ಥರಾದ ಸದಾಶಿವ, ವಿಜಯರಾಜು, ದಿನೇಶ್, ರವಿ,ಧರ್ಮ ಹಾಗೂ ಇನ್ನಿತರರು ಇದ್ದರು.
