
ಹಾಸನ : ಕಾರೆಕೆರೆ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳ ‘ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿ ಪಿಜಿ ಮತ್ತು ಅಂತಿಮ ವರ್ಷದ ಪಶುವೈದ್ಯಕೀಯ ವಿದ್ಯಾರ್ಥಿಗಳು ಸಹ ಪಾಲ್ಗೊಂಡು ರೈತರಿಗೆ ಪಶುಆರೋಗ್ಯ ಸೇವೆಯನ್ನು ನೀಡಿದರು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಡಾ. ಮುನಿಸ್ವಾಮಿ ಗೌಡ (ಡೀನ್, ಕೃಷಿ ಮಹಾವಿದ್ಯಾಲಯ, ಕಾರೆಕೆರೆ), ಡಾ. ಶಂಕರ ಎಂ.ಹೆಚ್. (ಸಂಯೋಜಕರು, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ), ಡಾ. ವೇಣು ಎಸ್.ಎ. (ಸಹ ಸಂಯೋಜಕರು, ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ), ಡಾ. ಸೌಮ್ಯ. ಈ. (ಸಹ ಪ್ರಾಧ್ಯಾಪಕಿ, ಕೃಷಿ ಕೀಟಶಾಸ್ತ್ರ ವಿಭಾಗ, ಕಾರೆಕೆರೆ) ಹಾಗೂ ಡಾ. ನಾಗರಾಜ ಮತ್ತು ಡಾ. ಶಿವಕುಮಾರ (ಪಶುವೈದ್ಯಕೀಯ ಕಾಲೇಜು) ಉಪಸ್ಥಿತರಿದ್ದರು.
ಶಿಬಿರದಲ್ಲಿ ಪಶುಗಳಿಗೆ ಹುಳುನಾಶಕ (deworming), ಸಾಮಾನ್ಯ ಆರೋಗ್ಯ ತಪಾಸಣೆ, ಮೇಕೆಗಳಲ್ಲಿ ಗಡ್ಡೆ (lump) ತೆಗೆದುಹಾಕುವುದು ಹಾಗೂ ಗರ್ಭಿಣಿ ಹಸುಗಳ ಆರೋಗ್ಯ ಪರಿಶೀಲನೆ ಮಾಡಲಾಯಿತು. ತಪಾಸಣೆಯ ವೇಳೆ ಪಶುಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಜೀರ್ಣಕ್ರಿಯಾ ಸಮಸ್ಯೆಗಳು, ಪೌಷ್ಟಿಕಾಂಶ ಕೊರತೆ ಹಾಗೂ ಲಸಿಕೆಗಳ ಮಹತ್ವದ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ಸ್ವಚ್ಛತೆ, ಸಮಯಕ್ಕೆ ಸರಿಯಾದ ಚಿಕಿತ್ಸೆ ಮತ್ತು ಪಶುಮನೆ ನಿರ್ವಹಣೆ ಪಶುಗಳ ಉತ್ತಮ ಆರೋಗ್ಯಕ್ಕೆ ಅತ್ಯಂತ ಅಗತ್ಯವೆಂದು ವೈದ್ಯರು ಒತ್ತಿ ಹೇಳಿದರು.ಈ ಶಿಬಿರದಲ್ಲಿ ಭಾಗವಹಿಸಿದ ರೈತರು ಉತ್ಸಾಹದಿಂದ ತಮ್ಮ ಪಶುಗಳನ್ನು ತಂದು ತಪಾಸಣೆ ಮಾಡಿಸಿಕೊಂಡು, ಪಶುಪಾಲನೆಯಲ್ಲಿ ಅನುಸರಿಸಬೇಕಾದ ಆರೋಗ್ಯ ಕ್ರಮಗಳ ಕುರಿತು ತಜ್ಞರಿಂದ ಸಲಹೆ ಪಡೆದರು.
ವಿದ್ಯಾರ್ಥಿಗಳು ಸಹ ಶಿಬಿರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಪಶುಪಾಲನಾ ಕ್ಷೇತ್ರದಲ್ಲಿ ಪ್ರಾಯೋಗಿಕ ಜ್ಞಾನವನ್ನು ಸಂಪಾದಿಸಿದರು.
