
ಸಕಲೇಶಪುರ : ಟ್ರಾಫಿಕ್ ಅವ್ಯವಸ್ಥೆ ನಿವಾರಣೆಗೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜ್ ಎಸ್.ಎಲ್. ಮುಂದಾಗಿದ್ದಾರೆ
ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಅವ್ಯವಸ್ಥೆಯಿಂದಾಗಿ ಸಾರ್ವಜನಿಕರು ಅನುಭವಿಸುತ್ತಿದ್ದ ತೊಂದರೆ ನಿವಾರಣೆಗೆ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜ್ ಎಸ್.ಎಲ್. ಅವರ ಮುಂದಾಳತ್ವದಲ್ಲಿ ಬಸ್ ಒಳ ತಿರುವಿಗೆ ನೂತನ ಸೂಚನಾ ಫಲಕವನ್ನು ಅಳವಡಿಸಲಾಯಿತು.
ಸಕಲೇಶಪುರ ಪಟ್ಟಣದಲ್ಲಿ, ವಿಶೇಷವಾಗಿ ರಾಜಬೀದಿ ಭಾಗದಲ್ಲಿ KSRTC ಬಸ್ಗಳು ದಟ್ಟ ಟ್ರಾಫಿಕ್ ಮಧ್ಯೆ ಪ್ರಯಾಣಿಕರನ್ನು ಇಳಿಸುವುದರಿಂದ ಗೊಂದಲ ಮತ್ತು ಅಪಘಾತಗಳ ಪರಿಸ್ಥಿತಿ ಹೆಚ್ಚಾಗಿತ್ತು.
ಹಳೆ ಬಸ್ಸ್ಟ್ಯಾಂಡ್ ಕಡೆ ತಿರುವು ಪಡೆಯುವಾಗ ಬಸ್ ಚಾಲಕರು ದಿಕ್ಕುಸೂಚನೆಯ ಕೊರತೆಯಿಂದಾಗಿ ಆಗಾಗ ಸಮಸ್ಯೆ ಎದುರಿಸುತ್ತಿದ್ದರು.
ಈ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಸ್ ಚಾಲಕರಿಗೆ ಸ್ಪಷ್ಟ ಮಾರ್ಗಸೂಚಿ ನೀಡುವ ಉದ್ದೇಶದಿಂದ ನೂತನ ದಿಕ್ಕು ಸೂಚನಾ ಫಲಕವನ್ನು ಅಳವಡಿಸುವ ಕಾರ್ಯ ಕೈಗೊಂಡರು.
ಈ ಫಲಕ ಚಾಲಕರಿಗೆ ಯಾವುದೇ ಅಡ್ಡಿ–ತೊಂದರೆ ಇಲ್ಲದೇ ನೇರವಾಗಿ ಬಸ್ ಸ್ಟ್ಯಾಂಡ್ ತಿರುವು ಪಡೆಯಲು ಸಹಾಯವಾಗಲಿದೆ ಎಂದು ಸಂಘದ ಕಾರ್ಯಕರ್ತರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರ ಠಾಣೆ ಸಬ್ಇನ್ಸ್ಪೆಕ್ಟರ್ ಮಹೇಶ್, ಕಾರ್ಯನಿರತ ಪತ್ರಕರ್ತರ ಸಂಘದ ನಿಯೋಜಿತ ಅಧ್ಯಕ್ಷ ಕಾಂತ್ ರಾಜ್ ಹೊನ್ನೇಕೋಡಿ, ಮಧು, ಯೋಗ ಚೇತನ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀ ರಂಗನಾಥ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾ, ಉಪಾಧ್ಯಕ್ಷ ಗುರು ಪ್ರಕಾಶ್ ಸಿ.ಎನ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಸಾರ್ವಜನಿಕರ ದೈನಂದಿನ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಈ ನೂತನ ಬೋರ್ಡ್ ಮಹತ್ವದ ಪಾತ್ರ ವಹಿಸಲಿದೆ ಎಂದು ಸ್ಥಳೀಯರು ಸಂತೋಷ ವ್ಯಕ್ತಪಡಿಸಿದರು.
