
ಸಕಲೇಶಪುರ : ಪಟ್ಟಣದ ಶ್ರೀ ಸಕಲೇಶ್ವರ ಬ್ರಾಹ್ಮಣ ಸಂಘದ ವತಿಯಿಂದ ನಿರ್ಮಿಸಲಾದ ಶ್ರೀ ಗಾಯತ್ರಿ ವಿಪ್ರ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನಮ್ಮ ಸಮಾಜಕ್ಕೆ ಬ್ರಾಹ್ಮಣ ಸಮುದಾಯ ನೀಡಿರುವ ಸೇವೆ ಅನನ್ಯವಾಗಿದೆ ಎಂದರು. ಜಗತ್ತಿಗೆ ಶಾಂತಿಯ ಸಂದೇಶ ಸಾರಿರುವ ದೇಶ ಭಾರತ. ನಾಗರಿಕತೆಯ ಆರಂಭದಿಂದ ಇಂದಿನವರೆಗೂ ಎಲ್ಲಾ ಕ್ಷೇತ್ರಗಳಲ್ಲಿ ಬ್ರಾಹ್ಮಣರು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ.
ಉತ್ತಮ ಸಂಸ್ಕಾರ, ಆಚಾರ-ವಿಚಾರಗಳನ್ನು ಒಳಗೊಂಡ ಜೀವನಶೈಲಿ ಬ್ರಾಹ್ಮಣ ಸಮುದಾಯದ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.
ಆದರೆ ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣರ ಸಂಖ್ಯೆ ಕುಸಿಯುತ್ತಿರುವುದು ಆತಂಕಕಾರಿಯಾಗಿದೆ. ಉನ್ನತ ವಿದ್ಯಾಭ್ಯಾಸಕ್ಕಾಗಿ ಯುವಕರು ವಿದೇಶಕ್ಕೆ ತೆರಳಿ ಅಲ್ಲಿಯೇ ತಮ್ಮ ಬದುಕು ಕಟ್ಟಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಸಕಲೇಶಪುರದಲ್ಲಿ ಬ್ರಾಹ್ಮಣ ಸಮುದಾಯದ ಅಗತ್ಯ ಬಹಳವಾಗಿತ್ತು. ಹಲವು ವರ್ಷಗಳಿಂದ ಕುಂಟುತ್ತ ಸಾಗುತ್ತಿದ್ದ ಈ ಕಟ್ಟಡ ನಿರ್ಮಾಣದ ಹಿಂದೆ ಅನೇಕ ಜನರ ಪರಿಶ್ರಮ ಇದೆ.
ಇಂದು ಈ ಭವನ ಉದ್ಘಾಟನೆಯಾಗಿರುವುದು ಸಂತೋಷದಾಯಕ ವಿಷಯ ಎಂದು ಅವರು ಹೇಳಿದರು.
ಮಾಜಿ ಶಾಸಕ ಹೆಚ್ ಕೆ ಕುಮಾರಸ್ವಾಮಿ ಮಾತನಾಡಿ, ತನ್ನದೇ ಆದ ಸಂಸ್ಕೃತಿ ಹಾಗೂ ಆಚಾರ-ವಿಚಾರಗಳನ್ನು ಒಳಗೊಂಡ ಬ್ರಾಹ್ಮಣ ಸಮುದಾಯ ಎಲ್ಲರಿಗೂ ಮಾದರಿಯಾಗಿದೆ ಎಂದರು ಆದರೆ ಮೀಸಲಾತಿ ವ್ಯವಸ್ಥೆಯಿಂದಾಗಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಕುಟುಂಬಗಳಿಗೆ ತೊಂದರೆ ಆಗುತ್ತಿದೆ ಎಂದು ಹೇಳಿದರು.
ಈ ಕಟ್ಟಡ ನಿರ್ಮಾಣಕ್ಕೆ ತನ್ನ ಅಧಿಕಾರ ಅವಧಿಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡಿದ್ದೇನೆ ಎಂದು ತಿಳಿಸಿದರು. ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಬ್ರಾಹ್ಮಣ ಸಮುದಾಯದ ಬುದ್ಧಿವಂತಿಕೆ, ಪಾಂಡಿತ್ಯ ಹಾಗೂ ಮಾರ್ಗದರ್ಶನ ಉತ್ತಮ ಸಮಾಜ ನಿರ್ಮಾಣಕ್ಕೆ ಅಗತ್ಯವಿದೆ ಎಂದರು.
ವಿಶ್ವ ಹಿಂದೂ ಪರಿಷತ್ ಪ್ರಾಂತ ಸಂಪರ್ಕ ಪ್ರಮುಖ ಮಂಜುನಾಥ್ ಸ್ವಾಮಿ ಮಾತನಾಡಿ, ಪೋಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಬೇಕು. ಆಗ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಅದಕ್ಕಾಗಿ ನಾವು ಸಂಘಟಿತರಾಗಿರಬೇಕು ಎಂದರು ರಾಜಕೀಯ, ಕೈಗಾರಿಕೆ, ಕ್ರೀಡೆ, ಕಲೆ, ವ್ಯಾಪಾರ, ಉದ್ಯಮ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಬ್ರಾಹ್ಮಣ ಸಮುದಾಯದವರು ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ನಮ್ಮ ಹಿರಿಯರು ನೀಡಿದ ಉತ್ತಮ ಸಂಸ್ಕಾರವೇ ಕಾರಣ ಎಂದು ಹೇಳಿದರು.
ಪುರಾಣಕಾಲದಿಂದ ಇಂದಿನವರೆಗೂ ಶ್ರೇಷ್ಠ ಸಂತರು, ಮುನಿಗಳು ಹಾಗೂ ವಿದ್ವಾಂಸರು ನಮಗೆ ಮಾರ್ಗದರ್ಶನ ನೀಡಿದ್ದಾರೆ. ದೇಶಕ್ಕೆ ಸಂಕಟ ಬಂದಾಗಲೆಲ್ಲಾ ಬ್ರಾಹ್ಮಣ ಸಮುದಾಯ ಮುನ್ನೆಲೆಗೆ ಬಂದಿದೆ. ಭವಿಷ್ಯದಲ್ಲಿ ಸಮುದಾಯ ಇನ್ನಷ್ಟು ಸದೃಢವಾಗಬೇಕೆಂದು ಆಶಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜದ ರಾಜ್ಯಧ್ಯಕ್ಷ ರಾದ ರಘುನಾಥ್ ಮಾತನಾಡಿ ಹಾರ ತುರಾಯಿ ಹಾಕಿಸಿಕೊಳ್ಳುವುದಕ್ಕಿಂತ ನಾನು ಸಮಾಜದ ಏಳಿಗೆ ಕಾರ್ಯಕ್ಕೆ ಆದ್ಯತೆ ಕೊಡುತ್ತೇನೆ.ಅಖಿಲ ಕರ್ನಾಟಕ ಬ್ರಾಹ್ಮಣ ಸಅಂಘಕ್ಕೆ ಪ್ರತಿಯೊಬ್ಬರು ಸದಸ್ಯರಾಗಲು ಮುಂದಾಗಬೇಕು.ಸದಸ್ಯರ ಒಟ್ಟು 150 ಜನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ತಲಾ 10000 ರೂ ಸ್ಕಾಲರ್ ಶಿಪ್ ನೀಡಲಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಮಲೆನಾಡು ವೀರಶೈವ ಸಮಾಜದ ಮುಖಂಡರು ಭಾಗಿಯಾಗಿದ್ದರು.
ಕಾರ್ಯಕ್ರಮದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷ ಪ್ರಕಾಶ್ ಧನಾವತ್, ಕಾರ್ಯದರ್ಶಿ ಆರ್.ಎನ್. ಶಿವಶಂಕರ್, ಹಿಂದೂ ಸಂಘಟನೆ ಮುಖಂಡ ರಘು, ಗಾಯತ್ರಿ ವಿಪ್ರ ಮಹಿಳಾ ಸಂಘದ ಅಧ್ಯಕ್ಷೆ ಸುವರ್ಣ ಸುರೇಶ್, ಮಾಲಿನಿ ಸೋಮೇಶ್, ವಕೀಲ ಆರ್.ಎನ್ ಕೃಷ್ಣಮೂರ್ತಿ, ಹಿರಿಯ ಮುಖಂಡ ಕೆ.ವಿ ಶ್ರೀನಿವಾಸ್ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
