
ಹಾಸನ : ಜಿಲ್ಲೆಯ ಆಲೂರಿನಲ್ಲಿ ಮಾತನಾಡಿದ ಶಾಸಕ ಸಿಮೆಂಟ್ಮಂಜು ಅವರು, ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರ ಅಡ್ಡ ಮತದಾನ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
“ಅಡ್ಡ ಮತದಾನ ಮಾಡಿದವರು ಯಾರು ಎಂಬುದು ಈಗಾಗಲೇ ಗೊತ್ತಿದೆ. ಈ ಬಗ್ಗೆ ಪಕ್ಷ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ನಾನು ರಘು ಕೌಟಿಲ್ಯ ಅವರಿಗೆ ಮತ ಹಾಕಿದ್ದೇನೆ. ಮೂವತ್ತು ಶಾಸಕರು ಹಾಕಿರುವ ಮತ ರಘು ಕೌಟಿಲ್ಯ ಅವರಿಗೆ ಬಿದ್ದಿದೆ. ಒಂದು ಮತ ತಿರಸ್ಕೃತವಾಗಿದ್ದು, ಅದನ್ನು ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ಪಕ್ಷ ಪರಿಶೀಲನೆ ನಡೆಸಲಿದೆ” ಎಂದು ಹೇಳಿದರು.
ಇದೇ ವೇಳೆ, “ಪಾಟೀಲ್ ಅವರಿಗೆ ಮೂರು ಮತಗಳು ಕಡಿಮೆಯಾಗಿವೆ. ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು, ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತದೆ. ಪಕ್ಷ ನೀಡಿರುವ ಜವಾಬ್ದಾರಿಯಂತೆ ನಾವು ಮತ ಹಾಕಿದ್ದೇವೆ” ಎಂದು ಸ್ಪಷ್ಟಪಡಿಸಿದರು.
“ವಿಚಾರದ ಸಂಪೂರ್ಣ ಮಾಹಿತಿ ಇಲ್ಲದೆ ಆರೋಪ ಮಾಡುವವರಿಗೆ ಉತ್ತರ ನೀಡಲು ಸಾಧ್ಯವಿಲ್ಲ. ನಾವು ರಘು ಕೌಟಿಲ್ಯ ಅವರಿಗೆ ಮೊದಲ ಆದ್ಯತೆಯ ಮತ ಹಾಗೂ ಗೋವಿಂದರಾಜು ಅವರಿಗೆ ಎರಡನೇ ಆದ್ಯತೆಯ ಮತ ಹಾಕಿದ್ದೇವೆ. ಯಾರು ತಪ್ಪು ಮಾಡಿದ್ದಾರೆ ಎಂಬುದು ಪಕ್ಷದ ಗಮನಕ್ಕೆ ಬಂದಿದ್ದು, ಸರಿಯಾದ ಸಮಯದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಶಾಸಕ ಸಿಮೆಂಟ್ಮಂಜು ಹೇಳಿದರು.
