
ತುಮಕೂರು (ಜು.02): ಭಾನುವಾರವಾದ್ದರಿಂದ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಮಕ್ಕಳನ್ನು ಕರೆದುಕೊಂಡು ಕೆರೆಯ ಬಳಿ ಬಟ್ಟೆಯನ್ನು ತೊಳೆಯಲು ಹೋಗಿದ್ದ ಮಹಿಳೆ, ತನ್ನ ಇಬ್ಬರು ಮಕ್ಕಳು ಆಟವಾಡುತ್ತಾ ಕೆರೆ ಬಿದ್ದಿದ್ದನ್ನು ನೋಡಿ ಅವರನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ .
ಆದರೆ, ಮಕ್ಕಳ ಜೀವವನ್ನು ಉಳಿಸಿದ ಮಹಿಳೆ, ಕೊನೆಗೆ ಈಜು ಬಾರದೇ ಆಳಕ್ಕೆ ಬಿದ್ದು ಪ್ರಾಣತ್ಯಾಗ ಮಾಡಿದ್ದಾರೆ.
ಮೃತ ಮಹಿಳೆಯನ್ನು ಮನು (30) ಎಂದು ಗುರುತಿಸಲಾಗಿದೆ. ಶಿರಾ ತಾಲ್ಲೂಕಿನ ರಥಸಂದ್ರ ಗ್ರಾಮದ ಕೆರೆಯಲ್ಲಿ ಘಟನೆ ನಡೆದಿದೆ. ಮೃತ ಮಹಿಳೆ ಭಾನುವಾರ ಶಾಲೆಗೆ ರಜೆ ಇದ್ದ ಹಿನ್ನೆಲೆಯಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಕೆರೆಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದಳು. ಇಬ್ಬರು ಮಕ್ಕಳು ಕೆರೆ ದಡದಲ್ಲಿ ಆಟವಾಡುತ್ತಿದ್ದರು. ಹೀಗಾಗಿ, ತನ್ನ ಬಟ್ಟೆ ಒಗೆಯುವ ಕಾರ್ಯವನ್ನು ಮುಂದುವರೆಸಿದ್ದರು . ಆದರೆ, ಇದ್ದಕ್ಕಿಂತೆ ನೀರಿಗೆ ಮಕ್ಕಳು ಬಿದ್ದಿರುವ ಘಟನೆ ನಡೆದಿದ್ದು, ಇದನ್ನು ಕಂಡು ಗಾಬರಿಯಾದ ಮಹಿಳೆ ತನಗೆ ಈಜು ಬರುವುದಿಲ್ಲ ಎಂಬ ಅರಿವೂ ಇಲ್ಲದೆಯೇ ಕೆರೆಗೆ ಹಾರಿ ಮಕ್ಕಳನ್ನು ರಕ್ಷಣೆ ಮಾಡಲು ಮುಂದಾಗಿದ್ದಾರೆ .
ಈಜು ಬಾರದಿದ್ದರೂ ಕೆರೆಗೆ ಧುಮಿಕಿ ಮಕ್ಕಳ ರಕ್ಷಣೆ
ಇನ್ನು ಮಕ್ಕಳು ಮುಳುಗುವುದನ್ನು ನೋಡಿ ಕೆರೆಗೆ ಧುಮಿಕಿ ಮಕ್ಕಳನ್ನು ಹೊರಗೆ ಎಸೆದಿದ್ದಾರೆ . ಆಗ, ಇತರರು ಮಕ್ಕಳನ್ನು ಎಳೆದುಕೊಂಡಿದ್ದಾರೆ. ಆದರೆ, ತಾನು ಕೆರೆಯ ನೀರಿನಿಂದ ಮೇಲಕ್ಕೆ ಬರುವಾಗ ಕಾಲು ಜಾರಿ ಬಿದ್ದಿದ್ದಾರೆ . ಈ ವೇಳೆ ಈಜು ಬಾರದ ಹಿನ್ನೆಲೆಯಲ್ಲಿ ಮಹಿಳೆ ಕೆರೆಯಲ್ಲಿಯೇ ಮುಳುಗಿದ್ದಾರೆ . ಉಳಿದಂತೆ ಬಟ್ಟೆ ಒಗೆಯಲು ಹೋಗಿದ್ದ ಇತರೆ ಮಹಿಳೆಯರಿಗೂ ಈಜು ಬಾರದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಕೂಗಿಕೊಂಡಿದ್ದಾರೆ. ಯಾರೊಬ್ಬರೂ ಸಹಾಯಕ್ಕೆ ಬಾರದ ಹಿನ್ನೆಲೆಯಲ್ಲಿ ಕೆಲವೇ ಕ್ಷಣಗಳಲ್ಲಿ ಮಹಿಳೆ ಜೀವ ಬಿಟ್ಟಿದ್ದಾರೆ.
