
ಹೆತ್ತೂರು : ಮಲೆನಾಡು ಭಾಗವಾದ ಯಸಳೂರು, ಹೆತ್ತೂರು ಹೋಬಳಿಯಲ್ಲಿ ಮಳೆಯ ಅಬ್ಬರ ಗುರುವಾರ ಸ್ವಲ್ಪ ಕಡಿಮೆಯಾಗಿದೆ. ಆದರೆ, ಸತತ ಒಂದು ವಾರ ಸುರಿದ ಮಳೆ ಮತ್ತು ಇದರ ಬೆನ್ನಿಗೆ ಬಂದ ನೆರೆಯಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಬೆಳೆಗಾರರು ಅತಂಕಕ್ಕೀಡಾಗಿದ್ದಾರೆ.
ಗಾಳಿ-ಮಳೆಯಿಂದ ಕಾಫಿ, ಅಡಿಕೆ, ಬಾಳೆ ನೆಲಕಚ್ಚಿವೆ. ಭತ್ತದ ಗದ್ದೆ ಸೇರಿದಂತೆ ಕೃಷಿ ಭೂಮಿಗೆ ನೀರು ನುಗ್ಗಿ ಬೆಳೆಗಾರರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಕೆಲವರ ಮನೆಗಳಿಗೆ ಭಾಗಶಃ ಹಾನಿಯಾಗಿವೆ.
ಗಾಳಿಯ ರಭಸಕ್ಕೆ ಮನೆಯ ಚಾವಣಿ ಹಾರಿಹೋಗಿದೆ.ಪಾಲಹಳ್ಳಿ, ಐಗೂರು, ಹುಲಗತ್ತೂರು, ಹಳ್ಳಿಗದ್ದೆ, ಯಡಕೇರಿ, ಅತ್ತಿಗನಹಳ್ಳಿ ಸೇರಿದಂತೆ ಹಲವು ಗ್ರಾಮದಲ್ಲಿ ರೈತರ ಜಮೀನುಗಳಿಗೆ ಹೇಮಾವತಿ ಉಪನದಿಗಳ ನೀರು ನುಗ್ಗಿ, ಇಡೀ ಗದ್ದೆಗಳಿಗೆ ಮರಳು, ನೀರು ತುಂಬಿಕೊಂಡು ಅಪಾರ ಹಾನಿ ಸಂಭವಿಸಿದೆ.
ಹೆತ್ತೂರು ನಾಗೇಶ್ ತೋಟದಲ್ಲಿ ಕಾಫಿ ಕಾಯಿ ಕೊಳೆತು ನೆಲಕ್ಕೆ ಉದುರುತ್ತಿದೆ. ವಳ್ಳಲಹಳ್ಳಿ ರಾಜಣ್ಣ ಸೇರಿದಂತೆ ಯಸಳೂರು ಹೋಬಳಿಯ ಅನೇಕ ರೈತರ ತೋಟಗಳಲ್ಲಿ ಮರ, ಬಾಳೆ, ಗದ್ದೆ, ಕಾಳುಮೆಣಸು, ಅಡಿಕೆ, ಕಾಫಿ ನೆಲಕಚ್ಚಿದೆ.



