
ಸಕಲೇಶಪುರ .ತಾಲ್ಲೂಕಿನ ಮಲೆನಾಡ ಭಾಗದಲ್ಲಿ ನಿಲ್ಲದ ಕಾಡುಪ್ರಾಣಿಗಳ ಹಾವಳಿಯಿಂದ ಬೇಸತ್ತ ರೈತರು ತಮ್ಮ ವ್ಯವಸಾಯವನ್ನು ನಿಲ್ಲಿಸಿ , ಪಟ್ಟಣ ಕಡೆ ಮುಖ ಮಾಡುತ್ತಿರುವುದು ಬಹುತೇಕ ಎಲ್ಲಾ ಗ್ರಾಮದಲ್ಲೂ ಸಾಮಾನ್ಯವಾಗಿದೆ.
ರೈತರು ತಾವು ಬೆಳೆದ ಬೆಳೆಗಳನ್ನು ಉಳಿಸಿಕೊಳ್ಳುವುದರ ಜೊತೆಗೆ ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವಂತಹ ಪರಿಸ್ಥಿತಿ ಬಹುತೇಕ ಈ ಭಾಗದಲ್ಲಿ ಉಂಟಾಗಿರುವುದು ವಿಪರ್ಯಾಸವೇ ಸರಿ.
ಕಾಡು ಪ್ರಾಣಿಗಳು ಪ್ರತಿದಿನ ತಮ್ಮ ಆಹಾರಕ್ಕಾಗಿ ಊರಿಂದ ಊರಿಗೆ ತೋಟದಿಂದ ತೋಟಕ್ಕೆ ಸಂಚರಿಸುತ್ತಾ ಬೆಳೆಗಳನ್ನು ನಾಶ ಮಾಡುತ್ತಿದ್ದಾವೆ.ರೈತರು ಮತ್ತು ಕೂಲಿ ಕಾರ್ಮಿಕರು ಯಾವಾಗ ಎಲ್ಲಿ ಕಾಡಾನೆಗಳು ಕಾಣಿಸಿಕೊಂಡು ಪ್ರಾಣಪಾಯ ಮಾಡುತ್ತಾವೋ ಎಂಬ ಭಯದಲ್ಲೇ ಬದುಕುವ ಪರಿಸ್ಥಿತಿ ಈ ಮಲೆನಾಡಿನ ಜನರಲ್ಲಿ ಬಂದಿದೆ.
ಇಷ್ಟೆಲ್ಲಾ ಕಾಡು ಪ್ರಾಣಿಗಳಿಂದ ಸಮಸ್ಯೆಗಳು ಎದುರಾಗುತ್ತಿದ್ದು ಇನ್ನೂ ಸರ್ಕಾರದಿಂದ ದೊಡ್ಡ ಮಟ್ಟದ ಶಾಶ್ವತ ಪರಿಹಾರಕ್ಕೆ ಮುಂದಾಗದ ಸರ್ಕಾರವನ್ನು ಬೈಯುತ್ತಾ ದಿನ ದೂಡುತ್ತಿರುವ ಗ್ರಾಮಸ್ಥರುಗಳಿಗೆ ಮತ್ತೊಂದು ಭಯ ಹುಟ್ಟಿಸುವ ಪ್ರಸಂಗವು ನಡೆದಿದೆ.
ತಾಲ್ಲೂಕಿನ ಹೆಗ್ಗೋವೆ ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡಿನಲ್ಲಿ ಎರಡು ಮದಗಜಗಳು ಪರಸ್ಪರ ಕುಸ್ತಿಗೆ ಬಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ರಸ್ತೆಯಲ್ಲೆಲ್ಲ ಅಟ್ಟಡಿಸಿಕೊಂಡು ಹೋದ ಕಾಡಾನೆ ದಂತದಿಂದ ತಿವಿದು ಸಲಗವನ್ನು ಗಾಯಗೊಳಿಸಿದ್ದು ಹಿರಿಯದಾದ ಕಾಡಾನೆಯ ದಾಳಿಗೆ ಹೆದರಿದ ಕಿರಿಯ ಕಾಡಾನೆ ನಿನ್ನ ಸಹವಾಸವೇ ಬೇಡ ಎಂದು ತನ್ನಷ್ಟಕ್ಕೆ ತಾನು ಹೋಗುತ್ತಿದ್ದರೂ ಸಹಿತ ಮತ್ತೊಂದು ಆನೆ ಪಿಡಿಸುತ್ತಾ ಫೈಟಿಗೆ ಹೋಗುವ ದೃಶ್ಯಗಳು ವೀಡಿಯೋದಲ್ಲಿ ಸೆರೆಯಾಗಿವೆ.
ಈ ದೃಶ್ಯದಿಂದ ಹೆಗ್ಗೋವೆ ಗ್ರಾಮದ ಸುತ್ತ ಮುತ್ತಲಿನ ಜನರು ಓಡಾಡಲು ಆತಂಕ ಪಡುತ್ತಿದ್ದು ಕಾಡಾನೆ ಭಯದಿಂದ ಕಾಫಿ ತೋಟಕ್ಕೆ ಹೋಗುವ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ .
ಬೆಳೆಗಾರರಿಗೆ ಒಂದು ಕಡೆ ಕಾಡಾನೆಗಳ ಕಾಟವಾದರೆ ಮತ್ತೊಂದು ಕಡೆ ಕಾಡುಕೋಣಗಳ ಹಾವಳಿಯು ತಾಲೂಕಿನ ಯಸಳೂರು ಹೋಬಳಿ ತಂಬಲಕೆರೆ ಗ್ರಾಮದಲ್ಲಿ ಕಂಡು ಬಂದಿದ್ದು. ರೈತರು ಈ ಕಾಡು ಪ್ರಾಣಿಗಳಿಂದ ತಾವು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದರ ಜೊತೆಗೆ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳುವಂತಹ ಪರಿಸ್ಥಿತಿ ಒದಗಿದೆ.ಇಷ್ಟೆಲ್ಲಾ ಸಮಸ್ಯೆಗಳು ಇರುವುದರಿಂದ ಈಗಲಾದರೂ ಈ ಮಲೆನಾಡ ರೈತರಿಗೆ ಕಾಡು ಪ್ರಾಣಿಗಳಿಂದ ಶಾಶ್ವತ ಪರಿಹಾರ ಮಾಡಿಕೊಡುವುದರ ಜೊತೆಗೆ ಮತ್ತೊಮ್ಮೆ ನೆಮ್ಮದಿಯಿಂದ ಈ ಭಾಗದ ರೈತರು ತಮ್ಮ ಕೃಷಿ ಜೀವನಕ್ಕೆ ಮರಳುವಂತೆ ಆಗಬೇಕೆಂದು ನೊಂದ ಗ್ರಾಮಸ್ಥರುಗಳು ಅಳಲು ತೋಡಿಕೊಂಡಿದ್ದಾರೆ.


