
ಹೊಳೆನರಸೀಪುರ: ತಾಲ್ಲೂಕಿನ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯನ್ನು ಆ.23ರ ಸಂಜೆ ವೇಳೆ ಅಪಹರಿಸಿದ್ದು , ಕಾರ್ಯಾಚರಣೆ ನಡೆಸಿದ ಪೊಲೀಸರು ಶುಕ್ರವಾರ ವಿದ್ಯಾರ್ಥಿನಿಯನ್ನು ರಕ್ಷಿಸಿ, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪರಸನಹಳ್ಳಿಯ ಕಾರ್ತಿಕ್, ಮೋಹನ್ಕುಮಾರ್, ಅರಕಲಗೂಡು ತಾಲ್ಲೂಕು ಬಾನಗುಂದಿಯ ಪ್ರತಾಪ ಬಂಧಿತರು.
ಅಪಹರಣಕ್ಕೆ ಬಳಸಿದ್ದ ಕೆ.ಎ. 41 ಬಿ. 7166 ಕಾರನ್ನು ವಶಪಡಿಸಿಕೊಂಡಿದ್ದಾರೆ.ಹಾಸನದಲ್ಲಿ ಕಾಲೇಜು ಮುಗಿಸಿ ತನ್ನ ಹಳ್ಳಿಗೆ ಹೋಗಲು ಸಮೀಪದ ಗೇಟ್ನಲ್ಲಿ ಕಾಯುತ್ತಿದ್ದಾಗ ಕಾರಿನಲ್ಲಿ ಬಂದ ಕೆಲವರು ಆಕೆಯನ್ನು ಅಪಹರಿಸಿದ್ದರು.
ಆಕೆಯ ತಂದೆ ನಗರಠಾಣೆಯಲ್ಲಿ ದೂರು ದಾಖಲಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂಶಂಕರ್ ಆರೋಪಿಗಳ ಪತ್ತೆಗೆ ತಂಡ ರಚಿಸಿದ್ದರು.
ಹಾಸನ ತಾಲ್ಲೂಕಿನ ಶಾಂತಿಗ್ರಾಮ ಬಳಿ ಕಾರೊಂದು ವೇಗವಾಗಿ ಹೋಗುತ್ತಿದ್ದುದನ್ನು ಕಂಡ ಪೊಲೀಸರು ಅದನ್ನು ಹಿಂಬಾಲಿಸಿದರು.
ಪೊಲೀಸರು ಕಾರನ್ನು ಬೆನ್ನಟ್ಟುತ್ತಿರುವುದನ್ನು ಗಮನಿಸಿದದ ಅಪಹರಣಕಾರರು ವಿದ್ಯಾರ್ಥಿನಿಯನ್ನು ಇಳಿಸಿ, ಪರಾರಿ ಆಗಿದ್ದರು. ಆಕೆಯನ್ನು ರಕ್ಷಿಸಿದ ಪೊಲೀಸರು, ಅಪಹರಣಕಾರರ ಚಹರೆ, ಮಾಹಿತಿ ಪಡೆದಿದ್ದರು.ಶುಕ್ರವಾರ ಸಂಜೆ ಹೊಳೆನರಸೀಪುರ-ಮೈಸೂರು ರಸ್ತೆ ಹಳ್ಳಿಮೈಸೂರು ಕ್ರಾಸ್ನಲ್ಲಿ ಕಾರನ್ನು ಪೊಲೀಸರು ತಡೆದು ಆರೋಪಿಗಳನ್ನು ಬಂಧಿಸಿ , ಕಾರನ್ನು ವಶಪಡಿಸಿಕೊಂಡಿದ್ದಾರೆ.
ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ಪಿ ಮಂಜುನಾಥ್, ವೃತ್ತ ನಿರೀಕ್ಷಕ ಪ್ರದೀಪ್, ನಗರಠಾಣೆ ಎಸ್.ಐ. ಅರುಣ್. ಗ್ರಾಮಾಂತರ ಠಾಣೆ ಎಸ್.ಐ ವಿನಯ್, ರಂಗಸ್ವಾಮಿ, ಪ್ರವೀಣ್, ಮಂಜೇಗೌಡ, ಬಸವರಾಜು, ಪ್ರಕಾಶ, ನಾಗೇಶ, ವಸಂತ, ಜಗದೀಶ,ಬಸವೇಗೌಡ, ರೇಣುಕಾ, ಕೀರ್ತಿ, ನಾಗಪ್ಪ ಅವರು ಪತ್ತೆಕಾರ್ಯದ ತಂಡದಲ್ಲಿದ್ದರು.

