
ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮಂಗಳವಾರ ದಾಖಲಿಸಲಾಗಿದೆ.
ಬೆಂಗಳೂರಿನಲ್ಲಿ ವಾಸಕ್ಕೆ ಸಮಸ್ಯೆಯುಂಟಾದ ಹಿನ್ನೆಲೆ ತಿಮ್ಮಕ್ಕ ಅವರು ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬಳ್ಳೂರಿನಲ್ಲಿ ವಾಸವಾಗಿದ್ದರು.ಸೆಪ್ಟೆಂಬರ್ 27ರಂದು ತಿಮ್ಮಕ್ಕ ಅವರ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆ ಬೇಲೂರಿನ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗ್ರಾಮಕ್ಕೆ ಹಿಂದಿರುಗಿದ್ದರು.
ಹಾಸನ ಜಿಲ್ಲಾಡಳಿತ ತಿಮ್ಮಕ್ಕ ಅವರ ಆರೈಕೆಗೆ ಇಬ್ಬರು ನರ್ಸ್ ಗಳನ್ನು ಸಹ ನೇಮಕ ಮಾಡಿತ್ತು. ಇದೀಗ ಮತ್ತೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡು ಬಂದು ಹಿನ್ನೆಲೆ ಜಯನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೇಲೂರು ಮಲೆನಾಡು ಪ್ರದೇಶವಾಗಿದ್ದರಿಂದ ಚಳಿ ಸ್ವಲ್ಪ ಹೆಚ್ಚು. ಆದ್ರಿಂದ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಕೆಲ ದಿನಗಳ ಹಿಂದೆ ಬೇಲೂರಿನ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಕೊಡಿಸಲಾಗಿತ್ತು ಎಂದು ದತ್ತು ಪುತ್ರ ಬಳ್ಳೂರು ಉಮೇಶ್ ಹೇಳಿದ್ದಾರೆ.ಮಂಗಳವಾರ ಆಸ್ಪತ್ರೆಗೆ ದಾಖಲುಬೇಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಆರೋಗ್ಯದಲ್ಲಿ ಸುಧಾರಣೆ ಕಾಣಲಿಲ್ಲ. ನಿನ್ನೆ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ವೈದ್ಯರ ಸಲಹೆ ಮೇರೆಗೆ ಮಂಗಳವಾದ ಮಧ್ಯಾಹ್ನ ಸುಮಾರು 2.30ಕ್ಕೆ ತಾಯಿ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಯ್ತು ಎಂದು ಉಮೇಶ್ ಮಾಹಿತಿ ನೀಡಿದರು.
ತಿಮ್ಮಕ್ಕ ಅವರಿಗೆ ಡಾ.ರವೀಂದ್ರ ಮೆಹ್ತಾ ಅವರ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ಸದ್ಯ ತಿಮ್ಮಕ್ಕ ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಯಾರು ಈ ಸಾಲುಮರದ ತಿಮ್ಮಕ್ಕ?
ತುಮಕೂರಿನ ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ಜನಿಸಿದ ತಿಮ್ಮಕ್ಕ ಅವರು ಮಕ್ಕಳಿಲ್ಲದ ಕಾರಣ ಪತಿಯೊಂದಿಗೆ ಸೇರಿ ಮರಗಳನ್ನು ಬೆಳೆಸಲು ನಿರ್ಧರಿಸಿದ್ದರು. ಆರಂಭಿಕವಾಗಿ ಮೊದಲ ವರ್ಷದಲ್ಲಿ ದಂಪತಿಗಳು 4 ಕಿಮೀ ಉದ್ದರ ಎರಡು ಬದಿಗಳಲ್ಲಿ 10 ಆಲದ ಸಸಿಗಳನ್ನು ನೆಟ್ಟು ಬೆಳೆಸಲು ಆರಂಬಿಸಿದ್ದರು. ಇಲ್ಲಿವರೆಗೂ ತಿಮ್ಮಕ್ಕ ಅವರು 8 ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ.
