
ಶಿಕ್ಷಣದಂತೆ ಆರೋಗ್ಯವು ಮುಖ್ಯಪೌಷ್ಠಿಕ ಆಹಾರ ಸೇವನೆ ಮಾಡಲು ಸಿ.ಎಂ. ಮಹಾಲಿಂಗಯ್ಯ ಕರೆ
ಹಾಸನ : ಯಾವುದೇ ರೋಗಾವನ್ನು ಉದಾಸೀನ ಮಾಡದೇ ಶಿಕ್ಷಣ ಪಡೆಯುವಂತೆ ಆರೋಗ್ಯವು ಅಷ್ಟೆ ಮಹತ್ವವಾಗಿದ್ದು, ಪೌಷ್ಠಿಕ ಆಹಾರ ಸೇವನೆ ಮಾಡುವ ಮೂಲಕ ಅನೀಮಿಯ ಮುಕ್ತ ಮಾಡಲು ಕೈಜೋಡಿಸುವಂತೆ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಎಂ. ಮಹಾಲಿಂಗಯ್ಯ ಕರೆ ನೀಡಿದರು.
ನಗರದ ಗಂಧದ ಕೋಟೆ ಆವರಣದಲ್ಲಿರುವ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಆರೋಗ್ಯ ಅಭಿಯಾನದ ಭಾಗವಾಗಿ ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಕ್ತಹೀನತೆಯಿಂದ ಸಾಕಷ್ಟು ವಿದ್ಯಾರ್ಥಿಗಳು ಬಳಲುತಿದ್ದು, ಇಂತಹವರ ನೋಡಿದರೇ ಬಿಳುಚಿಕೊಂಡ ರೀತಿ ಇರುತ್ತಾರೆ.
ಎಲ್ಲಾರ ಜೊತೆಯಲ್ಲಿ ಬೆರೆಯಲು ಸಾಧ್ಯವಾಗದ ಆಯಾಸದಿಂದ ಬಳಲುತ್ತಿರುತ್ತಾರೆ. ಅನೀಮಿಯಕ್ಕೆ ಹಲವಾರು ಕಾರಣಗಳಿದ್ದು, ಆರೋಗ್ಯದ ದೃಷ್ಠಿಯಲ್ಲಿ ಪ್ರತಿ ವರ್ಷ ಜಂತುಹುಳ ಕಾರ್ಯಕ್ರಮ ಹಮ್ಮಿಕೊಂಡು ಯಶಸ್ವಿಗೊಳಿಸಲಾಗಿದೆ ಎಂದರು.
ಇಂತಹ ಖಾಯಿಲೆಯಿಂದ ತಪ್ಪಿಸಿಕೊಳ್ಳಲು ಪೌಷ್ಠಿಕವಾದ ಆಹಾರವನ್ನು ಸೇವನೆ ಮಾಡಬೇಕು. ಇನ್ನು ಕಾಲೇಜಿನ ವಿದ್ಯಾರ್ಥಿಗಳು ತತರಗತಿಗೆ ಬರುವ ಅವಸರದಲ್ಲಿ ತಿಂಡಿಯನ್ನು ಕೂಡ ಮಾಡುವುದಿಲ್ಲ. ಆಗೇ ಕಾಲೇಜಿಗೆ ಬರುತ್ತಿದ್ದು, ಇದರಿಂದ ಕಾಲೇಜು ಮುಗಿಸಿಕೊಂಡು ವಾಪಸ್ ಹೋಗುವಷ್ಟರಲ್ಲಿ ಸುಸ್ತಾಗಿರಬೇಕಾಗುತ್ತದೆ. ತಿಂಡಿ ಮಾಡಿಕೊಂಡು ಕಾಲೇಜಿಗೆ ಬರುವುದರ ಜೊತೆಗೆ ಮದ್ಯಾಹ್ನ ಊಟವನ್ನು ಕೂಡ ಕ್ಯಾರಿ ಮಾಡಿಕೊಂಡು ಬರಬೇಕೆಂದು ಕಿವಿಮಾತು ಹೇಳಿದರು.
ಆರೋಗ್ಯ ವಿಚಾರ ಬಂದರೇ ಯಾರು ಕೂಡ ನಿರ್ಲಕ್ಷ್ಯ ಮಾಡಬಾರದು. ಯಾರಲ್ಲೂ ಉದಾಸೀನತೆ ಎಂಬುದು ಖಂಡಿತ ಇರಬಾರದು. ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇಟ್ಟುಕೊಂಡು ಜೊತೆಗೆ ತಿಳಿಯದವರಿಗೆ ರಕ್ತಹೀನತೆ ವಿಚಾರವನ್ನು ಜಾಗೃತಿ ಮೂಡಿಸುವ ಕೆಲಸ ನಿಮ್ಮ ಮನೆಗಳಲ್ಲಿ ಮತ್ತು ನಿಮ್ಮ ಊರುಗಳಲ್ಲಿ ಮಾಡಬೇಕು ಎಂದು ಸಲಹೆ ನೀಡಿದರು.
ಹಳ್ಳಿಗಳಲ್ಲೂ ಕೂಡ ಅನೀಮಿಯ ಮುಕ್ತಗೊಳಿಸಲು ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಎಲ್ಲಾರು ಹಳ್ಳಿಗಳಲ್ಲಿ ಹೋಗಿ ಪ್ರತಿಯೊಬ್ಬರ ರಕ್ತ ತಪಾಸಣೆ ಮಾಡಬೇಕು. ಆರೋಗ್ಯದಲ್ಲಿ ರಕ್ತ ಹೀನತೆಯನ್ನು ಗುರುತಿಸಿ ಪ್ರತಿಯೊಬ್ಬರೂ ಆರೋಗ್ಯ ಸುಧಾರಣೆ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ. ಕೊರೋನಾ ವೇಳೆ ವಾರಿಯರ್ಸ್ ಆಗಿ ಕೆಲಸ ಮಾಡಿದ್ದು, ಆರೋಗ್ಯವಂತ ಜನರು ಈ ದೇಶದ ಸಂಪತ್ತು. ಶಿಕ್ಷಣಕ್ಕೆ ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅದರಂತೆ ಆರೋಗ್ಯವು ಕೂಡ ಅಷ್ಟೆ ಮುಖ್ಯವಾಗಿರುತ್ತದೆ.
ಆರೋಗ್ಯ ಇದ್ದರೇ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಅನೀಮಿಯ ಮುಕ್ತ ಮಾಡಲು ಪೌಷ್ಠಿಕತೆ ಹೆಚ್ಚಾಗಬೇಕು ಎಂದು ಹೇಳಿದರು.
ಜಿಲ್ಲಾ ಆರೋಗ್ಯಾಧಿಕಾರಿ ಹೆಚ್. ಅನೀಲ್ ಪ್ರಾಸ್ತಾವಿಕ ನುಡಿಯಲ್ಲಿ ಮಾತನಾಡಿ, ಅನೀಮಿಯ ಮುಕ್ತವಾಗಲು ಆಹಾರದಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು. ಮುಖ್ಯವಾಗಿ ಪೌಷ್ಠಿಕ ಆಹಾರವನ್ನು ಸೇವಿಸಬೇಕು. ಬರೀ ಅನ್ನವನ್ನೆ, ಮುದ್ದೆಯನ್ನೆ ಸೇವನೆ ಮಾಡದೇ ಜೊತೆಯಲ್ಲಿ ಸೊಪ್ಪು, ತರಕಾರಿ, ಮೊಳಕೆ ಕಟ್ಟಿರುವ ಪದಾರ್ಥ, ಮೀನು, ಮೊಟ್ಟೆ ಇವುಗಳು ಉಪಾಯೋಗಕ್ಕೆ ಬರುತ್ತದೆ. ಮಕ್ಕಳು ಈ ಬಗ್ಗೆ ತಿಳಿದು ಮನೆಯಲ್ಲಿ ತಿಳಿಸುವ ಕೆಲಸ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಸರಕಾರಿ ಬಾಲಕರ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ತಿಮ್ಮೇಗೌಡ, ಶೋಭರಾಣಿ, ಜಿಲ್ಲಾ ಆರ್.ಸಿ.ಹೆಚ್. ಅಧಿಕಾರಿ ಹೆಚ್.ಸಿ. ಚೇತನ್, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಈ. ಕೃಷ್ಣೇಗೌಡ, ಜಿಲ್ಲಾ ಆರೋಗ್ಯ ಇಲಾಖೆಯ ಡಾ. ಶಿವಶಂಕರ್, ಡಾ. ಹರೀಶ್, ಡಾ. ವಿಜಯ್, ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಿ ಇತರರು ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಅಧಿಕಾರಿ ಗೀತಾ ಪ್ರಾರ್ಥಿಸಿದರು. ಅರುಂಧತಿ ಸ್ವಾಗತಿಸಿದರು.





