
ಅರೇಹಳ್ಳಿ: ವಿಶ್ವವಿಖ್ಯಾತ ಬೇಲೂರು,ಮೂಡಿಗೆರೆ ಮುಖ್ಯರಸ್ತೆಯನ್ನು ಹಳ್ಳಿಗಳ ಮೂಲಕ ಸಂಪರ್ಕಿಸುವ ರಸ್ತೆ ತೀರಾ ಗುಂಡಿಮಯವಾಗಿದ್ದರಿಂದ ಆಜುಬಾಜಿನಲ್ಲಿರುವ ಗ್ರಾಮಸ್ಥರು ಹಾಗೂ ಕಾಫಿ ತೋಟದ ಮಾಲೀಕರು ಸಾವಿರಾರು ರೂ.ಗಳ ಸ್ವಂತ ಹಣ ವಿನಿಯೋಗಿಸಿ ಸರಕಾರದಿಂದ ಆಗಬೇಕಾದ ಕಾರ್ಯವನ್ನು ತಾವೆ ತಾತ್ಕಾಲಿಕವಾಗಿ ನಿರ್ವಹಿಸಿದ್ದೇವೆ ಎಂದು ಗ್ರಾಮಸ್ಥ ಹಾಗೂ ಕಾಫಿ ಬೆಳೆಗಾರ ವೆಂಕಟೇಶ್ ಎಂ.ಟಿ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿ ಹೋಬಳಿಯ ಅನುಘಟ್ಟ ಪಂಚಾಯಿತಿ ವ್ಯಾಪ್ತಿಯ ದೋಲನ ಮನೆ-ಬೆಳ್ಳಾವರ-ಜಾರ್ಗಲ್-ಮಲವಳ್ಳಿ ಮೂಲಕ ತೊಳಲು ಗ್ರಾಮಕ್ಕೆ ತೆರಳುವ ಗುಂಡಿಬಿದ್ದ ರಸ್ತೆಯ ದುಸ್ಥಿತಿಯಿಂದ ಕಂಗೆಟ್ಟು ತಮ್ಮ ಸಹಚರರ ಆರ್ಥಿಕ ಸಹಕಾರದಿಂದ 2 ಕಿ.ಮೀ ರಸ್ತೆಯನ್ನು ದುರಸ್ಥಿಗೊಳಿಸಿ,ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಟ್ಟು ಮಾತನಾಡಿದ ಅವರು, ಯಗಚಿ ಜಲಾಶಯ ಯೋಜನೆಯ ವ್ಯಾಪ್ತಿಯಡಿಯಲ್ಲಿ ಬೇಲೂರು ತಾಲೂಕಿನ ಗ್ರಾಮಗಳ ರಸ್ತೆಗಳು ಗುಂಡಿಬಿದ್ದು ಸುಗಮ ವಾಹನ ಸಂಚಾರಕ್ಕೆ ಈ ರಸ್ತೆ ನಿರ್ಮಿಸಲು 150 ಕೋಟಿ ರೂ. ಅನುದಾನ ಬಂದಿತ್ತು.
ವಿಪರ್ಯಾಸವೆಂದರೆ ಬಿಡುಗಡೆಯಾದ ಈ ಅನುದಾನವನ್ನು ಪ್ರಬಲ ಸ್ಥಳೀಯ ರಾಜಕೀಯ ನಾಯಕರು ಬೇರೆಡೆಗೆ ವರ್ಗಾವಣೆ ಮಾಡಿ ನಮಗೆ ಅನ್ಯಾಯ ಎಸಗಿದ್ದರು ಎಂದು ಆರೋಪಿಸಿದರು.
ಕಾಫಿ ಬೆಳೆಗಾರ ರಘು ಮಾತನಾಡಿ, ಕಳಪೆ ರಸ್ತೆಯಿಂದ ಯಾವೊಬ್ಬ ನೆಂಟರಿಸ್ಟರು ನಮ್ಮ ಮನೆಗಳಿಗೆ ಬರಲು ಹಿಂದು ಮುಂದು ನೋಡಿ ಕಷ್ಟಕ್ಕೆ ನಿಮ್ಮ ರಸ್ತೆಯಲ್ಲ ಎಂದು ನೇರವಾಗಿ ದೂರುತ್ತಿದ್ದರು. ಇದರಿಂದ ನೊಂದು ರಸ್ತೆಯನ್ನು ಆಶ್ರಯಿಸಿರುವ ಗ್ರಾಮಸ್ಥರು ಹಾಗೂ ತೋಟದ ಮಾಲೀಕರು ಸೇರಿ ನಮ್ಮ ಸ್ವಂತ ಹಣದಲ್ಲಿ ಜೆಸಿಬಿ ಮೂಲಕ ಗುಂಡಿ ಮುಚ್ಚಿಸಿ,ಚರಂಡಿ ನಿರ್ಮಿಸಿ ತಾತ್ಕಾಲಿಕ ರಸ್ತೆಯನ್ನು ನಮಗೆ ನಾವೆ ನಿರ್ಮಿಸಿಕೊಂಡಿದ್ದೇವೆ ಎಂದರು.
ಈ ವೇಳೆ ರವಿ,ತ್ಯಾಗರಾಜು,ಚಿದಾನಂದ್ ಬಂದಳ್ಳಿ, ಲೋಕೇಶ್, ಪುಟ್ಟಸ್ವಾಮಿ, ದೇವರಾಜ್, ನಿರ್ವಾಣಿ, ಮಂಜು ,ಉಮೇಶ್ , ಹುಲಿಯಯಪ್ಪಗೌಡ,ಖಲೀಂ,ಹಮೀದ್, ವಿಶ್ವನಾಥ್ ,ನವೀನ್ ರಾಜ್, ಸುರೇಶ್,ಸ್ವಾಮಿ,ಸತೀಶ್ ಹಾಗೂ ಇನ್ನಿತರರು ಪ್ರಮುಖ ಪಾತ್ರ ವಹಿಸಿದ್ದರು.



