
ಹಾಸನ: ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಅಡಿಯಲ್ಲಿ ಬರುವ ಕೃಷಿ ಮಹಾವಿದ್ಯಾಲಯ, ಕಾರೇಕೆರೆ, ಹಾಸನದ ವತಿಯಿಂದ ಆಯೋಜಿಸಲಾದ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ 2023-24ರ ಅಂಗವಾಗಿ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳಿಂದ ದೊಡ್ದಯರಗನಾಳು ಗ್ರಾಮದಲ್ಲಿ ‘ಕೊಳವೆಬಾವಿ ಜಲ ಮರುಪೂರಣ’ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಕೃಷಿ ತಂತ್ರಜ್ಞಾನ ತಜ್ಞರಾದ ಶ್ರೀ ಶಿವಬಸಪ್ಪ ಕಂದಕೂರ ರವರು ಆಗಮಿಸಿದ್ದರು.
ಕೊಳವೆಬಾವಿ ಮರುಪೂರಣ ಕಾರ್ಯದ ಅನುಕೂಲಗಳು ಹಾಗೂ ವಿಧಾನದ ಬಗ್ಗೆ ವಿದ್ಯಾರ್ಥಿನಿಯಾದ ಪೂಜಾರವರು ತಿಳಿಸಿದರು ಹಾಗೂ ಅವೈಜ್ಞಾನಿಕ ಮರುಪೂರಣ ಕಾರ್ಯಗಳಿಂದಾಗುವ ಅನಾನುಕೂಲಗಳ ಬಗ್ಗೆ ತಿಳಿಸಿದರು.
ಕೊಳವೆಬಾವಿ ಮರುಪೂರಣವನ್ನು ಕಡಿಮೆ ವೆಚ್ಚದಲ್ಲಿ ಮಾಡಬಹುದಾಗಿದೆ ಹಾಗೂ ದೀರ್ಘಕಾಲದವರೆಗೆ ಅಂತರ್ಜಲ ಮಟ್ಟವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ಶಿವಬಸಪ್ಪ ಕಂದಕೂರ ರವರು ಕೊಳವೆ ಬಾವಿಯು 4000 ಲೀಟರ್ ನೀರನ್ನು ಸಂಪೂರ್ಣವಾಗಿ ಇಂಗಿಸಿಕೊಂಡರೆ ಜಲ ಮರುಪೂರಣ ಕಾರ್ಯದ ಅಗತ್ಯತೆಯಿದೆಯೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅನೇಕ ಸಂಖ್ಯೆಯಲ್ಲಿ ಗ್ರಾಮದ ರೈತರು ಹಾಜರಿದ್ದು ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
