
ಎನ್ಡಿಎ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಹಾಸನ ಲೋಕಸಭಾ ಕ್ಷೇತ್ರದಿಂದ ಸಂಸದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವ ವಿಚಾರ ಇನ್ನೂ ಸ್ಪಷ್ಟವಾಗಿಲ್ಲ. ನಮ್ಮ ಪಕ್ಷ ಅದನ್ನು ಇನ್ನೂ ಘೋಷಿಸಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹೇಳಿದರು.
ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜ್ವಲ್ ಹೆಸರು ಘೋಷಿಸಿರುವ ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.
ರಾಜಕೀಯವಾಗಿ ಎನ್ಡಿಎ ಮೈತ್ರಿ ಕೂಟಕ್ಕೆ ಜೆಡಿಎಸ್ ಒಂದು ಭಾಗವಾಗಿ ಬಂದಿದೆ. ಆದರೆ ಇವರೇ ಅಭ್ಯರ್ಥಿ ಎಂಬುದನ್ನು ಘೋಷಿಸಿಲ್ಲ’ ಎಂದರು.
ಹಾಸನ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೂ ಇದ್ದಾರೆ. ಅಂತೆಯೇ ಸಹಜವಾಗಿ ಜೆಡಿಎಸ್ನವರೂ ಟಿಕೆಟ್ ಬಯಸಿರಬಹುದು. ವಾಸ್ತವವಾಗಿ ಹಾಸನ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವಿನ ವಾತಾವರಣವಿದೆ. ಸರ್ವೆ ರಿಪೋರ್ಟ್ ಸಹ ಅದನ್ನೇ ಹೇಳುತ್ತಿದೆ.ಕಳೆದ ಬಾರಿ ಜೆಡಿಎಸ್ – ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಇದ್ದರು.
ಜೆಡಿಎಸ್ – ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿ ಮತಗಳು ಕ್ರೋಡೀಕರಣವಾಗಿದ್ದವು. ಈಗ ಇಬ್ಬರು ಬಿಜೆಪಿ ಶಾಸಕರಿದ್ದಾರೆ, ಒಳ್ಳೆಯ ರಾಜಕೀಯ ಪರಿಸ್ಥಿತಿ ಇದೆ. ಹಾಗಾಗಿ ಬಿಜೆಪಿಗೆ ಅವಕಾಶ ಕೊಟ್ಟರೆ ಗೆಲುವಿನ ಅವಕಾಶ ಹೆಚ್ಚಿದೆ ಎನ್ನುವುದು ಮತದಾರರ ಭಾವನೆ’ ಎಂದರು.
