
ಅರೇಹಳ್ಳಿ: ಅಯೋಧ್ಯೆಯಲ್ಲಿ ನೂತನವಾಗಿ ಉದ್ಘಾಟನೆಯಾದ ರಾಮಮಂದಿರದಿಂದಾಗಿ ಇಡೀ ದೇಶದಲ್ಲೆ ಹಬ್ಬದ ವಾತಾವರಣ ಸೃಷ್ಠಿಯಾಗುತ್ತಿದೆ ಎಂದು ಮಾಜಿ ಜಿ.ಪಂ ಸದಸ್ಯ ಅಮಿತ್ ಶೆಟ್ಟಿ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಶ್ರೀ ವಿನಾಯಕ ಭವನದಲ್ಲಿ ರಾಮಲಲ್ಲಾ ವಿಗ್ರಹ ಪ್ರಾಣ ಪ್ರತಿಷ್ಠಾಪನೆಯ ಹಿನ್ನಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ದಿನ ಸುವರ್ಣ ಅಕ್ಷರದಲ್ಲಿ ಬರೆದಿಡಬೇಕಾದ ದಿನವಾದ್ದರಿಂದ ಇಡೀ ಅರೇಹಳ್ಳಿ ಪಟ್ಟಣ ತಳಿರು ತೋರಣಗಳಿಂದ ಕಂಗೊಳಿಸುತ್ತಿದೆ.
ಪ್ರತಿ ಮನೆಗಳಲ್ಲೂ ದೀಪವನ್ನು ಹಚ್ಚುವುದರ ಮೂಲಕ ಸಂಭ್ರಮಿಸಲಾಗುತ್ತಿದೆ. ರಾಮಕಾರಕ ಹೋಮವನ್ನು ನಡೆಸಲಾಗುತ್ತಿದ್ದು ಅಯೋಧ್ಯೆಯಲ್ಲಿ ನಡೆಯುತ್ತಿರುವ ಧಾರ್ಮಿಕ ಕಾರ್ಯಕ್ರಮವನ್ನು ಎಲ್ಇಡಿ ಪರದೆ ಮೂಲಕ ನೆರೆದಿದ್ದ ಭಕ್ತಾಧಿಗಳಿಗೆ ಪ್ರದರ್ಶಿಸಲಾಯಿತು.
ಅರೇಹಳ್ಳಿಯಿಂದ ಅಯೋಧ್ಯೆಗೆ ತೆರಳಿದಂತಹ ಹಲವರನ್ನು ಇಂದು ಗೌರವಿಸಲಾಗಿದೆ.
ಮಹಿಳೆಯರಿಗಾಗಿ ವಿನಾಯಕ ಭವನದೊಳಗೆ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಇಲ್ಲಿನ ಕಾರ್ಯಕ್ರಮ ಮುಗಿದ ಮೇಲೆ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಏರ್ಪಡಿಸಲಾಗಿದೆ. ನರೇಂದ್ರ ಮೋದಿಯವರ ಕಾರ್ಯ ವೈಖರಿಗೆ ಇಡೀ ದೇಶವೆ ಶ್ಲಾಘಿಸುತ್ತಿದೆ ಎಂದರು.
ಈ ವೇಳೆ ಸಿದ್ದೇಶ್ ನಾಗೇಂದ್ರ, ನಾಗೇಶ್ ಶೆಟ್ಟಿ,ಸಚಿನ್ ರೈ, ಶ್ರೀನಿವಾಸ ಶೆಟ್ಟಿ, ಭರತ್,ಪ್ರಕಾಶ್, ಸುದೇವ್, ಶಶಿ ಕುಮಾರ್, ವೀರೇಶ್, ಬಿ.ಐ ನಟರಾಜ್, ಚಿದಾನಂದ್, ಗಂಗಾಧರ್, ಮಹೇಶ್ ಶೆಟ್ಟಿ ಸೇರಿದಂತೆ ಅನೇಕರಿದ್ದರು.



