
ಹಾಸನ: ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರೂ ಎಸ್.ಬಿ.ಐ. ಎಲೆಕ್ಟ್ರಾಲ್ ಬಾಂಡ್ ವಿವರ ನೀಡದೇ ಇರುವುದನ್ನು ಖಂಡಿಸಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಬ್ಯಾಂಕ್ ಮುಖ್ಯ ಕಛೇರಿ ಮುಂದೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ನೇತೃತ್ವದಲ್ಲಿ ಪ್ರತಿಭಟಿಸಿದಲ್ಲದೇ ಒಳ ನುಗ್ಗಲು ಯತ್ನಿಸಿದಾಗ ಪೊಲೀಸರು ಮುಖ್ಯಧ್ವಾರದಲ್ಲೆ ತಡೆದ ಹಿನ್ನಲೆಯಲ್ಲಿ ತಳ್ಳಾಟ ನಡೆಯಿತು.
ನಂತರ ಬ್ಯಾಂಕ್ ಬಾಗಿಲಿಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಇದೆ ವೇಳೆ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ರಂಜಿತ್ ಗೊರೂರು ಮಾಧ್ಯಮದೊಂದಿಗೆ ಮಾತನಾಡಿ, ದೇಶದಲ್ಲಿ ಪ್ರತಿಷ್ಠಿತ ಬ್ಯಾಂಕ್ ಎಂದು ಹೆಸರು ಆಗಿರುವ ಎಸ್.ಬಿ.ಐ. ಬ್ಯಾಂಕ್ ಇಂದು ಕೇಂದ್ರ ಸರಕಾರದ ತಾಳಕ್ಕೆ ತಕ್ಕಾಗೆ ಕುಣಿಯುತ್ತಿದೆ.
ಪ್ರಜಾಪ್ರಭುತ್ವದಲ್ಲಿ ಒಂದು ಸಾರ್ವಜನಿಕ ಹುದ್ದಿಮೆಯಾಗಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್ ವ್ಯವಹಾರ ನಡೆಸಬೇಕು. ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕೈಗೊಂಬೆಯಾಗಿ ಬ್ಯಾಂಕ್ ವರ್ತಿಸುತ್ತಿರುವುದು ಒಂದು ಬೇಸರದ ಸಂಗತಿಯಾಗಿದೆ ಎಂದರು.
ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದರೂ ಚುನಾವಣೆ ಎಸ್.ಬಿ.ಐ. ಎಲೆಕ್ಟ್ರಾಲ್ ಬಾಂಡ್ ಗಳ ವಿವರ ಬಹಿರಂಗ ಪಡಿಸಿದೇ ಇರುವುದನ್ನು ನಾವು ಖಂಡಿಸುತ್ತೇವೆ. ನಾಲ್ಕು ತಿಂಗಳ ಕಾಲಾವಕಾಶವನ್ನು ಕೂಡ ಎಸ್.ಬಿ.ಐ. ಕೋರಿ ಮನವಿ ಮಾಡಲಾಗಿದ್ದು, ಈಗಾಗಲೇ ಮನವಿಯನ್ನು ಕೂಡ ತಿರಸ್ಕರಿಸಿ ಕೂಡಲೇ ಚುನಾವಣೆಗೆ ಸಂಬಂಧಿಸಿದ ಬಾಂಡ್ ಗಳ ದಾನಿಗಳ ಹೆಸರನ್ನು ಬಹಿರಂಗಪಡಿಸುವಂತೆ ಸುಪ್ರಿಂ ಕೋರ್ಟ್ ಆದೇಶ ಮಾಡಲಾಗಿದ್ದರೂ ಕೇಂದ್ರ ಸರಕಾರದ ಜೊತೆ ಹೊಂದಾಣಿಕೆ ಮಾಡಿಸಿಕೊಂಡು ಅವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದಾನಿಗಳ ಹೆಸರನ್ನು ಹೇಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.
ಇಂತಹ ನಡೆಯನ್ನು ಜಿಲ್ಲಾ ಯುವ ಕಾಂಗ್ರೆಸ್ ಪಕ್ಷದವತಿಯಿಂದ ಖಂಡಿಸುತ್ತಿದ್ದೇವೆ. ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಆದೇಶದಂತೆ ರಾಜ್ಯಾಧ್ಯಂತ ಎಸ್.ಬಿ.ಐ. ಪ್ರಧಾನ ಕಛೇರಿ ಮುಂದೆ ಪ್ರತಿಭಟಿಸಿ ಬ್ಯಾಂಕ್ ಗೆ ಮುತ್ತಿಗೆ ಹಾಕಿ ಬೀಗ ಹಾಕುವುದರ ಮೂಲಕ ಉಗ್ರ ಹೋರಾಟ ಮಾಡಲಾಗಿದೆ ಎಂದು ಹೇಳಿದರು.
ಕೂಡಲೇ ಸಂಬಂಧಿಸಿದ ಬಾಂಡ್ ಗಳ ದಾನಿಗಳ ಹೆಸರನ್ನು ಬಹಿರಂಗಪಡಿಸಬೇಕು ಇಲ್ಲವಾದರೇ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯೂತ್ ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಇಸ್ಮಾಯಿಲ್, ವಿವೇಕ್, ಮನು ಕುಮಾರ್, ಸುಜನ್, ಶಿವಕುಮಾರ್, ಮೂಹಿನ್, ಅಭೀಲಾಶ್, ಗಣೇಶ್, ಸತೀಶ್, ಪ್ರಕಾಶ್ ಇತರರು ಉಪಸ್ಥಿತರಿದ್ದರು.
