ಹಾಸನ : ಕರ್ನಾಟಕ ರಾಜ್ಯದಲ್ಲಿ ೨೮ ಕ್ಕೆ ೨೮ ಸೀಟ್ ಗೆದ್ದು ಮೋದಿ ಅವರಿಗೆ ಅರ್ಪಿಸುತ್ತೇವೆ. ಇನ್ನು ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ಅವರಿಗೆ ಹೆಗಲ ಕೊಟ್ಟು ಹೋರಾಟ ನಡೆಸುತ್ತಾರೆ ಎಂದು ಬಿಜೆಪಿ ರಾಜ್ಯ ಚುನಾವಣೆ ಉಸ್ತುವಾರಿ ರಾಧಮೋಹನ್‌ದಾಸ್ ಅರ್ಗವಾಲ್ ಹೇಳಿಕೆ ನೀಡಿದ್ದಾರೆ.

ನಗರದ ಖಾಸಗೀ ಹೋಟೆಲೊಂದರಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ೨೮ ಕ್ಕೆ ೨೮ ಸೀಟ್ ಗೆದ್ದಾಗಿದ್ದು, ೨೫ ಸೀಟ್ ಬಿಜೆಪಿ ಹಾಗೂ ೩ ಸೀಟ್ ಜೆಡಿಎಸ್ ಕೊಟ್ಟಿದ್ದೇವೆ. ಕಾಂಗ್ರೆಸ್‌ಗೆ ಯಾವುದೇ ಉಳಿದಿಲ್ಲ. ಕಾಂಗ್ರೆಸ್‌ನವರು ಒಂದೇ ಒಂದು ಸೀಟ್ ಗೆಲ್ಲುವುದಿಲ್ಲ. ನಾನು ಕರ್ನಾಟಕದ ಎಲ್ಲಾ ಕ್ಷೇತ್ರಗಳಲ್ಲಿ ಒಂದು ತಿಂಗಳಿನಿಂದ ಪ್ರವಾಸ ನಡೆಸುತ್ತಿದ್ದೇನೆ. ಹಾಸನಕ್ಕೂ ಅದೇ ಉದ್ದೇಶದಿಂದ ವಾಸ್ತವ ಸ್ಥಿತಿ ತಿಳಿಯಲು ಬಂದಿದ್ದೇನೆ.

ಎಲ್ಲಾ ಕಡೆ ಮೋದಿಯವರಿಗೆ ಅಭೂತಪೂರ್ವ ಬೆಂಬಲ ದೊರೆಕಿದ್ದು, ಜನರು ಮೋದಿಜಿಯವರಿಗೆ ಮತ ಹಾಕಲು ಆತೊರೆಯುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅಂತರ ತುಂಬಾ ದೊಡ್ಡಮಟ್ಟದಲ್ಲಿ, ನಮಗೂ ಕಾಂಗ್ರೆಸ್ ದೊಡ್ಡಮಟ್ಟದಲ್ಲಿ ಅಂತರವಿರುತ್ತದೆ ಎಂದರು. ಪ್ರೀತಂಗೌಡ ಹಿಂದೆ ಶಾಸಕರಾಗಿದ್ದರು. ಈಗ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿದ್ದಾರೆ. ಹೆಚ್ಚಿನ ರೀತಿ ಪಕ್ಷ ಸಂಘಟನೆಗೆ ಒತ್ತುಕೊಟ್ಟು ಕೆಲಸ ಮಾಡುತ್ತಿದ್ದಾರೆ.

ಈ ಭಾರಿ ಶಾಸಕರಾಗಿ ಆಯ್ಕೆಯಾಗದಿದ್ದರು ಅವರ ಶಕ್ತಿ ಹಾಸನ ವಿಧಾನಸಭಾ ಕ್ಷೇತ್ರದಲ್ಲಿದೆ. ನಮ್ಮ ಕಾರ್ಯಕರ್ತರು ಬಹಳ ತಿಳುವಳಿಕೆ ಉಳ್ಳವರು. ನಮ್ಮ ರಾಷ್ಟ್ರದ ಹಿತಾಸಕ್ತಿಗೆ ಬದ್ದವಾಗಿ ಕೆಲಸ ಮಾಡ್ತಾರೆ. ನಾನು ಕಾರ್ಯಕರ್ತರ ಜೊತೆ ಸಭೆ ಮಾಡಿದ್ದೇನೆ. ಎಲ್ಲಾ ಕಾರ್ಯಕರ್ತರ ಮನದಲ್ಲಿ ಮೋದಿಜಿ ಅವರ ಬಗ್ಗೆ ಅಗಾಧವಾದ ಅಭಿಮಾನವಿದೆ. ಮೋದಿಜಿ, ಅಮಿತ್ ಶಾ ಏನು ನಿರ್ಧಾರ ಕೈಗೊಂಡಿದ್ದಾರೆ ಅದು ಕರ್ನಾಟಕ ಭವಿಷ್ಯಕ್ಕೆ ಎಂದು ಕಾರ್ಯಕರ್ತರು ತಿಳಿದುಕೊಂಡಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆಯುತ್ತಿದೆ. ಹಿಂದೆ ಔರಂಗಜೇಬ್ ಮಾಡುತ್ತಿದ್ದ ಕೆಲಸ ಈಗ ಕಾಂಗ್ರೆಸ್ ಮಾಡುತ್ತಿದೆ. ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿ ಹಿಂದೂಗಳ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ.

ರಾಜ್ಯಸಭೆ ಅವರ ಅಭ್ಯರ್ಥಿ ಆಯ್ಕೆಯಾದರೆ ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗ್ತಾರೆ. ಬೆಂಗಳೂರಿನ ಕೆಫೆಯಲ್ಲಿ ಬಾಂಬದ ಸ್ಫೋಟ ಆಗುತ್ತದೆ. ಹನುಮಾನ್ ಚಾಲಿಸ್ ಹಾಕಿದರೆ ಗೂಂಡಾಗಳು ಬಂದು ಹೊಡಿಯುತ್ತಾರೆ. ಇಂತಹ ಸರ್ಕಾರದ ಬಗ್ಗೆ ಜನರಿಗೆ ಅರಿವಿದೆ. ಇಂತಹ ಸರ್ಕಾರ ಆಯ್ಕೆ ಮಾಡಿದ್ದಕ್ಕೆ ಜನಗಳಿಗೆ ಅವರ ತಪ್ಪಿನ ಅರಿವಾಗಿದ್ದು, ೨೦೨೩ರ ಚುನಾವಣೆಯಲ್ಲಿ ಜನರಿಂದ ತಪ್ಪಾಗಿದೆ. ಆ ತಪ್ಪನ್ನು ಈಗ ಸರಿ ಮಾಡುತ್ತಾರೆ.ಜನರ ದೃಷ್ಟಿಯಲ್ಲಿ ಲೋಕಸಭಾ ಚುನಾವಣೆ ನಂತರ ಈ ಸರ್ಕಾರ ಬಿದ್ದು ಹೋಗುತ್ತದೆ ಎಂದು ಭವಿಷ್ಯ ನುಡಿದರು.

ಹಾಸನದಲ್ಲಿ ಬಿಜೆಪಿಯ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿಲ್ಲ ಎನ್ನುವುದು ತಪ್ಪು. ನಮ್ಮ ಕಾರ್ಯಕರ್ತರು ಪೂರ್ತಿ ಶಕ್ತಿಯೊಂದಿಗೆ ಜೆಡಿಎಸ್ ಅಭ್ಯರ್ಥಿ ಹೆಸರು ಘೋಷಣೆ ಆಗುವುದನ್ನು ಕಾಯ್ತಾ ಇದ್ದಾರೆ. ಬಿಜೆಪಿ ಕಾರ್ಯಕರ್ತರು ಜೆಡಿಎಸ್ ಕಾರ್ಯಕರ್ತರ ಹೆಗಲಿಗೆ ಹೆಗಲು ಕೊಟ್ಟು ಯುದ್ದದಲ್ಲಿ ಹೋರಾಡುತ್ತಾರೆ. ಕಳೆದ ಚುನಾವಣೆಯಲ್ಲಿ ಬಿಜೆಪಿಗೆ ಐದು ಲಕ್ಷ ಮತಗಳು ಬಂದಿದ್ದವು. ಈ ಬಾರಿ ಜೆಡಿಎಸ್ ಐದು ಲಕ್ಷ ಬಿಜೆಪಿ ಐದು ಲಕ್ಷ ಮತಗಳು ಸೇರಿ ಹತ್ತು ಲಕ್ಷ ಮತಗಳು ಸಿಗುತ್ತವೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಅವರ ಅಭಿಪ್ರಾಯ ಹೇಳುವ ಅಧಿಕಾರ ಇರುತ್ತದೆ. ಆದರೆ ಅಭ್ಯರ್ಥಿ ಘೋಷಣೆ ಆಗುವ ಮುಂಚೆ ಆಡುವ ಮಾತುಗಳಿಗೆ ಮಹತ್ವ ಕೊಡಬೇಕಿಲ್ಲ. ಅಭ್ಯರ್ಥಿ ಘೋಷಣೆ ನಂತರ ಕಾರ್ಯಕರ್ತರು ಏನು ಮಾಡುತ್ತಾರೆ ಅನ್ನೋದನ್ನ ನೋಡಬೇಕು.

ಬಿಜೆಪಿ ಕಾರ್ಯಕರ್ತರ ಭಾವನೆ ಎಚ್.ಡಿ. ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರನ್ನು ತಲುಪಿದೆ.ಆದರೆ ಜೆಡಿಎಸ್ ಅಭ್ಯರ್ಥಿ ಯಾರು ಆಗುತ್ತಾರೆ ಅನ್ನೋದನ್ನ ಬಿಜೆಪಿ ತೀರ್ಮಾನಿಸಲ್ಲ. ಅದನ್ನು ಜೆಡಿಎಸ್ ತೀರ್ಮಾನಿಸುತ್ತೆ. ಜೆಡಿಎಸ್ ಯಾರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತದೆಯೋ ಅವರ ಪರವಾಗಿ ಬಿಜೆಪಿಯ ಎಲ್ಲಾ ಶಾಸಕರು, ಕಾರ್ಯಕರ್ತರು ಪೂರ್ಣ ಶಕ್ತಿಯೊಂದಿಗೆ ಕೆಲಸ ಮಾಡ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಗೆಲ್ಲುವುದಿಲ್ಲ ಎಂದು ಅಭ್ಯರ್ಥಿಗಳಿಗೆ ಗೊತ್ತಾಗಿದೆ. ಆದ್ದರಿಂದ ಸಿದ್ದರಾಮಯ್ಯ ಮಂತ್ರಿಗಳನ್ನು ಕರೆದು ನಿಮ್ಮ ಮಕ್ಕಳನ್ನು ನಿಲ್ಲಿಸಿ ಗೆಲ್ಲಿಸಬೇಕು. ಇಲ್ಲವಾದಲ್ಲಿ ನಿಮ್ಮನ್ನು ಮಂತ್ರಿ ಮಂಡಲದಿಂದ ವಜಾ ಮಾಡ್ತಿನಿ ಅಂತ ಧಮ್ಕಿ ಹಾಕಿದ್ದಾರೆ. ಹೀಗಾಗಿ ಮಂತ್ರಿ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಸಚಿವರು ತಮ್ಮ ಮಕ್ಕಳು ಚುನಾವಣೆಗೆ ನಿಲ್ಲಿಸಿದ್ದಾರೆ.

ಹಾಗಾಗಿ ಈ ಚುನಾವಣೆ ಮನೆಯಲ್ಲಿ ಕುಳಿತು ಗೆಲ್ಲಬಹುದಾದ ಯುದ್ದ ಎಂದು ಬಿಜೆಪಿ ಕಾರ್ಯಕರ್ತರಿಗೆ ಗೊತ್ತಾಗಿದೆ. ೨೮ ಕ್ಕೆ ೨೮ ಸೀಟ್ ಗೆದ್ದು ಮೋದಿಜಿಯವರಿಗೆ ಅರ್ಪಿಸುತ್ತೇವೆ. ಜೂನ್ ೪ರ ನಂತರ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ನೀನು ನನ್ನ ಅಭ್ಯರ್ಥಿ ಸೋಲಿಸಿದೆ ಎಂದು ಹೊಡೆದಾಡುತ್ತಾರೆ. ಬಿಜೆಪಿಯ ಒಬ್ಬ ಅಭ್ಯರ್ಥಿ ಸೋಲುವುದಿಲ್ಲ. ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ. ಸುರೇಶ್ ಸ್ಪರ್ಧಿಸಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಾ.ಸಿ.ಎನ್. ಮಂಜುನಾಥ್ ಗಾಳಿ ಬೀಸುತ್ತಿದೆ. ಡಿ.ಕೆ.ಸುರೇಶ್ ಠೇವಣಿ ಕಳೆದುಕೊಳ್ಳುವಾಗ ಡಿ.ಕೆ. ಶಿವಕುಮಾರ್ ಬೇರೆ ಯಾರನ್ನು ಗೆಲ್ಲಿಸುತ್ತಾರೆ? ಕಳೆದ ಚುನಾವಣೆಯಲ್ಲಿ ಅವರು ಎಷ್ಟು ಹಣ ಖರ್ಚು ಮಾಡಿದ್ದಾರೆ ಗೊತ್ತಿದೆ.

ಈ ಬಾರಿ ಅದರ ಹತ್ತುಪಟ್ಟು ಹಣ ಖರ್ಚು ಮಾಡಿದರೂ ಠೇವಣಿ ಕಳೆದುಕೊಳ್ಳುವುದನ್ನು ತಪ್ಪಿಸಲು ಆಗುವುದಿಲ್ಲ. ಈ ಭಾರಿ ಜನರು ಸಿ.ಎನ್.ಮಂಜುನಾಥ್ ಅವರ ಪರ ನಿಂತಿದ್ದಾರೆ. ಭಾರತೀಯ ಜನತಾ ಪಾರ್ಟಿ ಯಾವುದೇ ಸರ್ಕಾರವನ್ನು ಅಸ್ಥಿರಗೊಳಿಸಲ್ಲ. ಕಾಂಗ್ರೆಸ್‌ನೊಳಗೆ ವಿರೋಧಗಳಿವೆ, ಗುಂಪುಗಳ ನಡುವೆ ದ್ವೇಷವಿದೆ. ಅವರಿಗೆ ಬಿಜೆಪಿಗಿಂತಲೂ ಅವರವರ ನಡುವೆ ದ್ವೇಷವಿದೆ. ಹೀಗಿರುವಾಗ ನಾವ್ಯೇಕೆ ಸರ್ಕಾರವನ್ನು ಅಸ್ತಿರಗೊಳಿಸಲಿ ಚುನಾವಣೆ ನಂತರ ಸರ್ಕಾರವೇ ಪತನವಾಗಲಿದೆ. ಸಾಯುತ್ತಿರುವವರನ್ನು ಸಾಯಿಸುವ ಅಗತ್ಯ ನಮಗಿಲ್ಲ. ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಪರಿಸ್ಥಿತಿ ಹದಗೆಡಲಿದೆ. ಸರ್ಕಾರ ಬೀಳಿಸಿದ ಕೆಟ್ಟ ಹೆಸರನ್ನು ಹೊರಲು ನಾವು ಸಿದ್ದರಿಲ್ಲ ಎಂದು ಟಾಂಗ್ ನೀಡಿದರು.

ಇದೆ ವೇಳೆ ಬಿಜೆಪಿ ಮುಖಂಡರಾದ ಹರ್ಷಿತ್, ಶೋಭನ್ ಬಾಬು, ಗಗನ್ ಗಾಂಧಿ ಇತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *