
ಅರೇಹಳ್ಳಿ: ಕಳೆದ ಮೂರುವರೆ ವರ್ಷಗಳಿಂದ ಅಧ್ಯಕ್ಷನಾಗಿ ಸೇವೆ ಸಲ್ಲಿಸಿ ಒಪ್ಪಂದದಂತೆ ನಾನು ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ಕೆ.ಬಿ ಪುಟ್ಟರಾಜು ಹಾಗೂ ಉಪಾಧ್ಯಕ್ಷರಾಗಿ ಚಂದ್ರಮತಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ಸುಹೀಲ್ ಉರ್ ರೆಹಮಾನ್ ಹೇಳಿದರು.
ಬೇಲೂರು ತಾಲೂಕಿನ ಅರೇಹಳ್ಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷರನ್ನು ಕುರಿತು ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿದ್ದಾಗ ಆಡಳಿತ ಮಂಡಳಿಯ ಎಲ್ಲಾ ಪದಾಧಿಕಾರಿಗಳು ಬೆಂಬಲ ನೀಡಿದ್ದರಿಂದ ಸಂಘವು ಅಭಿವೃದ್ಧಿಯಾಗಲು ಸಾಧ್ಯವಾಗಿದೆ. ಹಾಗಾಗಿ ನೂತನ ಅಧ್ಯಕ್ಷರಿಗೆ ಇದೇ ರೀತಿಯ ಬೆಂಬಲ ನೀಡುತ್ತೇವೆ ಎಂದರು.
ನೂತನ ಅಧ್ಯಕ್ಷ ಕೆ.ಬಿ ಪುಟ್ಟರಾಜು ಮಾತನಾಡಿ, ನಿಕಟ ಪೂರ್ವ ಅಧ್ಯಕ್ಷರು ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸರಕಾರ ಹಾಗೂ ಹೆಚ್ಡಿಸಿಸಿ ವತಿಯಿಂದ ಸಂಘಕ್ಕೆ ಸಿಗಬೇಕಾದ ಎಲ್ಲಾ ರೀತಿಯ ಅನುದಾನವನ್ನು ರೈತರಿಗೆ ದೊರಕುವಂತೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಈ ವೇಳೆ ಹಾಸನ ಸಹಕಾರ ಇಲಾಖೆಯ ಉಪ ನಿರ್ದೇಶಕಿ ಶಕು,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಚೆನ್ನಕೇಶವ, ಸಂಘದ ಮಾಜಿ ಉಪಾಧ್ಯಕ್ಷ ಅಣ್ಣಪ್ಪ, ತುಳಸಿದಾಸ್, ಮಮತಾ ತುಳಸಿದಾಸ್, ಚಂದ್ರಶೇಖರ್, ಅಶೋಕ್, ಶ್ರೀನಿವಾಸ್,ಶಶಿಧರ್,ಟಿ.ಪಿ ಮಲ್ಲೇಶ್, ತಮ್ಮಣ್ಣಚ್ಚಾರ್,ಶಶಿ, ಪುಟ್ಟಣ್ಣೇಗೌಡ, ಸೋಮಯ್ಯ, ಸಂಘದ ನಿರ್ದೇಶಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.



