
ಬೇಲೂರು : ಏಪ್ರಿಲ್. ೮”ಹೆಬ್ಬಾಳು ಗ್ರಾಮಾಭಿವೃದ್ದಿ ಸಂಘದಿಂದ ಸ್ವಚ್ಚತಾ ಕಾರ್ಯಕ್ಕೆ ಚಾಲನೆ” :- ತಾಲ್ಲೂಕಿನ ಹೆಬ್ಬಾಳು ಗ್ರಾಮದ ಮುಂಬರುವ ಜಾತ್ರಾ ಮಹೋತ್ಸವ ಅಂಗವಾಗಿ ಹೆಬ್ಬಾಳು ಗ್ರಾಮಾಭಿವೃದ್ದಿ ಸಂಘದಿಂದ ಸದಸ್ಯರು ಸ್ವಚ್ಚತಾ ಕಾರ್ಯಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಸುಧಾಕರ್, ಗೌರವಾಧ್ಯಕ್ಷ ಬಿ.ಎಂ.ದೊಡ್ಡವೀರೇಗೌಡ ಸೇರಿದಂತೆ ಇನ್ನೂ ಮುಂತಾದವರು ಸಾಕ್ಷಿಯಾದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಬ್ಬಾಳು ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಸುಧಾಕರ್ ಮಾತನಾಡಿ, ಹೆಬ್ಬಾಳು ಗ್ರಾಮ ಹೊಯ್ಸಳ ಅರಸರ ಕಾಲಘಟ್ಟದಲ್ಲಿ ಬೇಲೂರು ( ವೇಲಾಪುರಿ) ಮತ್ತು ಹಳೇಬೀಡು ( ದ್ವಾರಸಮುದ್ರ) ನಡುವಿನ ಹೆಬ್ಬಾಗಿಲು ಎಂದೇ ಖ್ಯಾತಿ ಹೊಂದಿರುವ ಹೆಬ್ಬಾಳು ಗ್ರಾಮಕ್ಕೆ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗ್ರಾಮದ ಈಶಾನ್ಯ ಮೂಲೆಯಲ್ಲಿನ ಚಿಕ್ಕಕೆರೆ ಕೃಷ್ಣ ಮತ್ತು ಕಾವೇರಿ ಜಲಾನಯನಕ್ಕೆ ಹರಿಯುವ ವಿಶೇಷತೆ ಹೆಬ್ಬಾಳು ಗ್ರಾಮದ ಚಿಕ್ಕಕೆರೆ ಗ್ರಾಮಕ್ಕೆ ಇದೆ. ಇಂತಹ ಐತಿಹಾಸಿಕ ಸ್ಥಳವನ್ನು ಮಾದರಿ ಕ್ಷೇತ್ರವಾಗಿ ಮಾರ್ಪಾಡು ಮಾಡಬೇಕು ಎಂಬ ಕಾರಣದಿಂದ ಕಳೆದ ಎರಡು ವರ್ಷಗಳ ಹಿಂದೆ ಗ್ರಾಮಾಭಿವೃದ್ದಿ ಸಂಘ ಸ್ಥಾಪಿಸಿ ಸದಸ್ಯರ ಸಹಕಾರದಿಂದ ಈಗಾಗಲೇ ಜನಪರ ಮತ್ತು ಸಮಾಜಮುಖಿ ಕೆಲಸಗಳಿಗೆ ಆಧ್ಯತೆ ನೀಡುತ್ತಾ ಬಂದಿದೆ.
ಗ್ರಾಮಾಭಿವೃದ್ದಿ ಸಂಘದ ಪ್ರಮುಖ ಉದ್ದೇಶ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯಕ್ಕೆ ಒತ್ತು ನೀಡಲಾಗುತ್ತದೆ.ಮುಂಬರುವ ಹೆಬ್ಬಾಳು ಚನ್ನಬಸವೇಶ್ವರ, ದೊಡ್ಡಮ್ಮ ಮತ್ತು ಚಿಕ್ಕಮ್ಮ ದೇವರ ಕೆಂಡೋತ್ಸವ, ಸಿಡಿಯೋತ್ಸವ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ಹೆಬ್ಬಾಳು ಗ್ರಾಮಾಭಿವೃದ್ದಿ ಸಂಘದ ಸದಸ್ಯರು ಒಳಗೊಂಡು ಗ್ರಾಮ ಮುಖ್ಯರಸ್ತೆ, ಚಿಕ್ಕಕೆರೆ, ದೇಗುಲದ ಮುಂಭಾಗ ಹಾಗೂ ಬಸ್ ನಿಲ್ದಾಣ ಸೇರಿದಂತೆ ನಾನಾ ಕಡೆಗಳಲ್ಲಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಯಿತು.ಇದೇ ರೀತಿಯಲ್ಲಿ ಎಲ್ಲಾ ಗ್ರಾಮಗಳಲ್ಲಿ ಸರ್ಕಾರದ ಅನುದಾನವನ್ನೇ ನಂಬದೆ ನಾವುಗಳು ಕೂಡ ದೇಶಕ್ಕೆ ಕೊಡುಗೆ ನೀಡುವ ನಿಟ್ಟಿನಲ್ಲಿ ಗ್ರಾಮಸ್ಥರು ವಿಶೇಷವಾಗಿ ಯುವಕರು ಮುಂದಾಗಬೇಕಿದೆ ಎಂದು ಕರೆ ನೀಡಿದರು.
ಸಂಘದ ಗೌರವಾದ್ಯಕ್ಷ ಬಿ.ಎಂ.ದೊಡ್ಡವೀರೇಗೌಡ ಮಾತನಾಡಿ, ನಮ್ಮ ಪೂರ್ವಿಕರು ವಾರಕ್ಕೆ ಒಮ್ಮೆ ಸೋಮವಾರ ದಿನ ಎಲ್ಲಾ ಗ್ರಾಮಸ್ಥರು ಸೇರಿ ಗ್ರಾಮದಲ್ಲಿ ಸ್ವಚ್ಚತೆ ಸೇರಿದಂತೆ ನಾನಾ ಕೆಲಸಗಳನ್ನು ತಾವೇ ಮಾಡಿಕೊಂಡು ಕೃಷಿ ಕಾಯಕ ನಡೆಸುತ್ತಾ ದಿನ ನಿತ್ಯ ಸಂಜೆ ಮನೋರಂಜನೆ ಅಂಗವಾಗಿ ಜನಪದ ಹಾಡುಗಳ ಮೂಲಕ ಖುಷಿ ಪಡುತ್ತಿದ್ದರು. ಆದರೆ ಮಂಡಲ ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ಅನುಷ್ಠಾನಕ್ಕೆ ಬಂದ ಬಳಿಕ ಗ್ರಾಮಸ್ಥರು ಸರ್ಕಾರವೇ ಕೆಲಸ ಮಾಡಲಿ ಎಂದು ಹಿಂದೆ ಸರಿದ ಕಾರಣದಿಂದ ಇಂದು ಕೆಲ ಗ್ರಾಮಗಳು ಗುಬ್ಬನಾರುತ್ತಿದೆ. ಇದಕ್ಕೆ ಮಾದರಿ ಎಂಬಂತೆ ಇಲ್ಲಿನ ಗ್ರಾಮಸ್ಥರು ಸೇರಿ ಹೆಬ್ಬಾಳು ಗ್ರಾಮಾಭಿವೃದ್ದಿ ಸಂಘ ಸ್ಥಾಪಿಸಿ ಇಂದು ವಿವಿಧ ಸೇವಾ ಕಾರ್ಯ ನಡೆಸುತ್ತಿರುವುದು ನಮಗೆ ನಿಜಕ್ಕೂ ಸಂತೋಷವಾಗಿದೆ ಎಂದರು. ಈ ಸಂದರ್ಭದಲ್ಲಿ ಗ್ರಾಮಾಭಿವೃದ್ದಿ ಸಂಘದ ಸದಸ್ಯರಾದ ಹೆಚ್.ಜಿ.ಚಂದ್ರಶೇಖರಯ್ಯ, ಹೆಚ್.ಜಿ.ಭುವನೇಶ್, ಹೆಚ್.ಜಿ.ಭುವನೇಶ್, ಜಗದೀಶ್, ತೀರ್ಥಕುಮಾರ್, ಅಭಿಲಾಷ್, ಉಮಾಶಂಕರ್, ಶಶಿ, ಪುರುಷೋತ್ತಮ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
ಬಾಕ್ಸ್ ನ್ಯೂಸ್ :-ಹೆಬ್ಬಾಳು ಗ್ರಾಮದಲ್ಲಿ ಈಗಾಗಲೇ ರೂ ೩ ಕೋಟಿ ಅಧಿಕ ವೆಚ್ಚದಲ್ಲಿ ಹೆದ್ದಾರಿ ರಸ್ತೆ ಉನ್ನತೀಕರಣ, ವಿದ್ಯುತ್ ದೀಪ, ಚಿಕ್ಕಕೆರೆ ಅಭಿವೃದ್ಧಿ ಹೀಗೆ ನಾನಾ ಕೆಲಸಗಳನ್ನು ಮಾಡಲಾಗಿದೆ. ಮುಂದಿನ ದಿನದಂದು ಹೆಬ್ಬಾಳು ಗ್ರಾಮಕ್ಕೆ ಶಾಶ್ವತ ನೀರಾವರಿ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಿಸಿದವರು ಕಾಯಕಲ್ಪಕ್ಕೆ ಮುಂದಾಗಬೇಕಿದೆ. ಮುಂದಿನ ದಿನದಂದು ಗ್ರಾಮದ ಸರ್ವತೋಮುಖ ಅಭಿವೃದ್ದಿಗೆ ಬದ್ದವಾಗಿರುವ ಬಗ್ಗೆ ಹೆಬ್ಬಾಳು ಗ್ರಾಮಾಭಿವೃದ್ದಿ ಸಂಘದ ಅಧ್ಯಕ್ಷ ಸುಧಾಕರ್ ತಿಳಿಸಿದರು.



