![](https://tv46malenadudigital.com/wp-content/uploads/2024/05/1000106289-1024x1024.jpg)
ಮುಚ್ಚಿನಮನೆ ಶ್ರೀಶಿವಲಿಂಗೇಶ್ವರ ನೂತನ ದೇಗುಲ ಲೋಕಾರ್ಪಣೆ
ಬೇಲೂರು : ತಾಲ್ಲೂಕಿನ ಬಿಕ್ಕೋಡು ಹೋಬಳಿ ವ್ಯಾಪ್ತಿಯಲ್ಲಿ ಬರುವ ಮುಚ್ಚಿನಮನೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ಶಿವಲಿಂಗೇಶ್ವರಸ್ವಾಮಿ ದೇವಾಲಯ ಪ್ರವೇಶ ಹಾಗೂ ಶಿಲಾ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವವನ್ನು ಹರಗುರು ಚರಮೂರ್ತಿಗಳ ದಿವ್ಯಸಾನಿಧ್ಯದಲ್ಲಿ ಅತ್ಯಂತ ಭಕ್ತಿ ಭಾವದಿಂದ ಹಾಗೂ ಅದ್ದೂರಿಯಿಂದ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಲೂರು ತಾಲ್ಲೂಕು ಕಾರ್ಜುವಳ್ಳಿ ಹಿರೇಮಠದ ಪೂಜ್ಯ ಶ್ರೀ ಶ್ರೀ ಸದಾಶಿವ ಶಿವಾಚಾರ್ಯ ಮಹಾಸ್ವಾಮೀಜಿಗಳು, ದೇಗುಲ ಸಂಸ್ಕೃತಿಯಿಂದ ಸಂಸ್ಕಾರವನ್ನು ಪಡೆಯುವ ನಿಟ್ಟಿನಲ್ಲಿ ಭಕ್ತರು ಪ್ರಯತ್ನ ಮಾಡಬೇಕಿದೆ.
ಕಾರಣ ಇತ್ತೀಚಿನ ದಿನದಲ್ಲಿ ದೇಗುಲ ಕಟ್ಟಿಸಿ, ಉದ್ಘಾಟನೆ ನಡೆಸಿ ಕೈತೊಳೆದುಕೊಳ್ಳುವ ಜನರೇ ಹೆಚ್ಚು, ನೂತನ ದೇಗುಲ ಉದ್ಘಾಟನೆಯಾದ ಬಳಿಕ ಕನಿಷ್ಟ ದಿನನಿತ್ಯ ಪೂಜೆ, ಭಜನೆ ಹಾಗೂ ಪ್ರವಚನ ಏರ್ಪಡಿಸುವ ಮೂಲಕ ನಮ್ಮ ಮುಂದಿನ ಪೀಳಿಗೆಗೆ ಸಂಸ್ಕಾರವನ್ನು ನೀಡುವ ಕೆಲಸ ಮಾಡಬೇಕು ಎಂದ ಅವರು ದೇವರನ್ನು ಕಾಣಲು ಗುರುವಿನ ಪಾತ್ರ ಹಿರಿದು, ಈ ನಿಟ್ಟಿನಲ್ಲಿ ಭಕ್ತರು ಗುರು-ಹಿರಿಯರ ಬಗ್ಗೆ ಗೌರವಾಭಿಮಾನವನ್ನು ಬೆಳೆಸಿಕೊಂಡು ಉತ್ತಮ ಮಾರ್ಗದಲ್ಲಿ ಬದುಕು ಸಾಗಿಸಬೇಕಿದೆ. ಮಕ್ಕಳಿಗೆ ಪಠ್ಯದ ವಿಷಯದ ಜೊತೆಗೆ ಧಾರ್ಮಿಕ ಸಂಸ್ಕಾರವನ್ನು ನೀಡಿದಾದ ಮಾತ್ರ ಬದುಕು ಒಳ್ಳಯ ರೀತಿಯಲ್ಲಿ ನಡೆಯುತ್ತದೆ ಎಂದು ಅಭಿಪ್ರಾಯ ಪಟ್ಟರು.
ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಮಾತನಾಡಿ, ಭಾರತ ಗುರು ಸಂಸ್ಕೃತಿಯ ನಾಡು, ಈ ಕಾರಣದಿಂದಲೇ ಇಡೀ ವಿಶ್ವದಲ್ಲಿ ಭಾರತ ಗುರು ಸ್ಥಾನಕ್ಕೆ ಏರಿದೆ. ಇತ್ತೀಚಿನ ದಿನದಲ್ಲಿ ಪ್ರತಿ ಗ್ರಾಮ-ಗ್ರಾಮದಲ್ಲಿ ನೂತನ ದೇಗುಲಗಳು ನಿರ್ಮಾಣವಾಗುತ್ತಿರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ. ದೇವರ ದಯೆಯಿಂದ ಈ ಭಾರಿ ಕ್ಷೇತ್ರದಲ್ಲಿ ಉತ್ತಮ ಮಳೆ ಬರುತ್ತಿದೆ, ರೈತರ ಮೊಗದಲ್ಲಿ ಮಂದಹಾಸ ಮೂಡಲು ಅವರಿಗೆ ಮಳೆ,ಬೆಳೆ ಮತ್ತು ಉತ್ತಮ ಬೆಲೆ ಸಿಗಲಿ ಎಂದ ಅವರು ಮುಚ್ಚಿನಮನೆ ಗ್ರಾಮದಲ್ಲಿ ನಿರ್ಮಿಸಿದ ನೂತನ ದೇಗುಲದ ಉದ್ಘಾಟನೆಗೆ ಕೋಡಿಮಠದ ಶ್ರೀಗಳು, ಕಾರ್ಜುವಳ್ಳಿ ಶ್ರೀಗಳು ಹಾಗೂ ಹುಲಿಕೆರೆ ಮಠದ ಶ್ರೀಗಳು ಸೇರಿದಂತೆ ನಾನಾ ಗಣ್ಯರು ಬಂದಿರುವುದು ಹರ್ಷದ ಸಂಗತಿ ಎಂದರು.
ಕಾರ್ಯಕ್ರಮದಲ್ಲಿ ಅರಸೀಕೆರೆ ತಾಲ್ಲೂಕು ಕೋಡಿಮಠ ಮಹಾಸಂಸ್ಥಾನ ಹಾರನಹಳ್ಳಿ ಮಠದ ಪರಮಪೂಜ್ಯ ಶ್ರೀ ಶ್ರೀ ಡಾ, ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿಗಳು, ಸಖರಾಯಪಟ್ಟಣದ ಹೋಬಳಿ ಹುಲಿಕೆರೆ ದೊಡ್ಡಮಠದ ಪೂಜ್ಯ ಶ್ರೀ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಗಳು, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್, ಪ್ರದೀಪ್, ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಅದ್ದೂರಿ ಕುಮಾರ್, ಶಿವಕುಮಾರ್, ನಿರಂಜನ್, ಯಶವಂತ್, ತೇಜುಕುಮಾರ್, ಶಂಕರ್, ಪ್ರವೀಣ್ ಸೇರಿದಂತೆ ಮುಚ್ಚಿನಮನೆ ಗ್ರಾಮಸ್ಥರು ಹಾಜರಿದ್ದರು.
ಬಾಕ್ಸ್ ನ್ಯೂಸ್ : ಸಮಾಜದಲ್ಲಿ ಇಂದಿಗೂ ದೇವರನ್ನು ನಂಬುವ ಮತ್ತು ನಂಬಿಕೆ ಇಲ್ಲದ ಜನರು ಇದ್ದಾರೆ. ಆದರೆ ವಿಶ್ವದಲ್ಲಿ ಒಂದು ಆಗೋಚರ ಶಕ್ತಿ ಕೆಲಸ ಮಾಡುತ್ತಿದೆ ಎಂಬ ನಂಬಿಕೆ ಬಲವಾಗಿದೆ. ದೇಗುಲ ಉದ್ಘಾಟನೆ ಕಾರ್ಯಕ್ರಮದಲ್ಲಿನ ಶ್ರೀಗಳ ಮಾತುಗಳನ್ನು ತಾವುಗಳು ಪಾಲಿಸಬೇಕಿದೆ ಮತ್ತು ಮಹಿಳೆಯರಿಗೆ ಗೌರವ ನೀಡಬೇಕು ಎಂದು ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
![](https://tv46malenadudigital.com/wp-content/uploads/2024/05/1000106288-1024x580.jpg)
![](https://tv46malenadudigital.com/wp-content/uploads/2024/05/1000106287-1024x571.jpg)