
ಹಾಸನ: ನಗರದ ಮಹಾರಾಜ ಪಾರ್ಕ್ ಹೇಮಾವತಿ ಪ್ರತಿಮೆ ಬಳಿ ಶನಿವಾರದಂದು ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸೇವಾ ಭಾರತೀಯ ವತಿಯಿಂದ ನಡೆಸಲಾಗುತ್ತಿರುವ ಗಾಲಿ ಕುರ್ಚಿ ರಾಲಿಯನ್ನು ಡಿವೈಎಸ್ಪಿ ಪಿ.ಕೆ. ಮುರುಳೀಧರ್ ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಉದ್ದೇಶಿಸಿ ಮಾತನಾಡಿದ ಅವರು, ಅನೇಕರು ಅಪಘಾತವಾಗಿ ಕಾಲು ಕೈ ಕಳೆದುಕೊಳ್ಳುತ್ತಾರೆ. ಇನ್ನು ಕೆಲವರು ಮೆದುಳಿಗೆ ಪೆಟ್ಟು ಬಿದ್ದು ಜೀವವನ್ನೆ ಕಳೆದುಕೊಂಡಿದ್ದಾರೆ.
ವಾಹನ ಚಾಲನೆ ಮಾಡುವಾಗ ಚಾಲಕರು ಎಲ್ಮೆಟ್ ಹಾಕುವುದನ್ನು ತಪ್ಪದೆ ಯಾರು ಮರೆಯಬಾರದು. ಕಾನೂನಿನ ನಿಯಮದಲ್ಲಿ ವಾಹನ ಚಾಲನೆ ಮಾಡಿದರೇ ಆಗುವ ಅಪಘಾತವನ್ನು ತಪ್ಪಿಸಬಹುದಾಗಿದೆ ಎಂದರು.
ಇಂತಹ ಜಾಗೃತಿ ಜಾಥ ನಡೆಸುತ್ತಿರುವುದು ಸಾರ್ವಜನಿಕರಿಗೆ ಉತ್ತಮ ಸಂದೇಶ ಕೊಡಲಿದೆ ಎಂದು ಹೇಳಿದ ಅವರು, ಸೇವಾ ಭಾರತೀಯ ವತಿಯಿಂದ ನಡೆಸಲಾಗುತ್ತಿರುವ ಗಾಲಿ ಕುರ್ಚಿ ರಾಲಿಗೆ ಇದೆ ವೇಳೆ ಶುಭಾಶಯ ಕೋರಿದರು.
ಸೇವಾ ಭಾರತಿ ಕನ್ಯಾಡಿ ಅಧ್ಯಕ್ಷರಾದ ಸ್ವರ್ಣಗೌರಿ ಮಾತನಾಡಿ, ಹಾಸಿಗೆ ಹಿಡಿದು ಬೆನ್ನು ಉರಿ ಅಪಘಾತಕ್ಕೊಳಗಾದ ದಿವ್ಯಾಂಗರನ್ನು ಮುಖ್ಯ ವಾಹಿನಿಗೆ ತರುವ ನಿಟ್ಟಿನಲ್ಲಿ ಹಾಗೂ ಎಲ್ಲರಂತೆ ಬದುಕಲು ಧೈರ್ಯ ತುಂಬುವ ಹಾಗೂ ಜಾಗೃತಿ ಮೂಡಿಸಲು ಈ ಗಾಲಿಕುರ್ಚಿ ಜಾಥವನ್ನು ಹಮ್ಮಿಕೊಳ್ಳಲಾಗಿದೆ. ಮರ ಹತ್ತುವಾಗ, ಎತ್ತರದ ಜಾಗಕ್ಕೆ ಹೋಗುವಾಗ ಹಾಗೂ ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಇರಬೇಕು ಎಂದರು.
ಗಾಲಿ ಕುರ್ಚಿ ರಾಲಿಯು ಮಹಾರಾಜ ಉದ್ಯಾನವನದ ಮುಂಭಾಗದಿಂದ ಹೊರಟು ಆರ್.ಸಿ. ರಸ್ತೆ ಮೂಲಕ ಎನ್.ಆರ್. ವೃತ್ತದಲ್ಲಿ ಕೊನೆ ಮಾಡಿದರು.
ಇದೆ ವೇಳೆ ರಾಜೀವ್ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.
ಇದೆ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಕುಮಾರ್, ಸೇವಾ ಭಾರತಿ ಸಂಸ್ಥೆಯ ಹಿರಿಯ ಮ್ಯಾನೇಜರ್ ಚರಣ್, ಸಂಘಟನಾ ಕಾರ್ಯದರ್ಶಿ ಗಿರೀಶ್, ಮಂಜುನಾಥ್, ನಾಗಾರ್ಜುನ್ ಇತರರು ಉಪಸ್ಥಿತರಿದ್ದರು.




