
ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಕುಟುಂಬವನ್ನು ರಾಜಕೀಯ ದುರುದ್ದೇಶದಿಂದ ತೇಜೋವಧೆ ಮಾಡಲಾಗುತ್ತಿದೆ ಎಂದು ಖಂಡಿಸಿ ಮತ್ತು ಅಶ್ಲೀಲ ದೃಶ್ಯವುಳ್ಳ ಪೆನ್ ಡ್ರೈವ್ ಹಂಚಿದ ಆರೋಪಿಗಳನ್ನು ಬಂಧನ ಮಾಡದೇ ಇರುವುದನ್ನು ವಿರೋಧಿಸಿ ಜೆಡಿಎಸ್ ಪಕ್ಷದಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಎನ್.ಆರ್. ವೃತ್ತದ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣಕ್ಕೆ ಬಂದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಆರು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆ, ರಾಜ್ಯ, ದೇಶದಲ್ಲಿ ಸಕ್ರಿಯ ರಾಜಕೀಯ ಮಾಡಿದ್ದಾರೆ.
ಜೊತೆಗೆ ಎಲ್ಲಾ ಸಂದರ್ಭದಲ್ಲೂ ಈ ನೆಲದ, ದೇಶದ ಕಾನೂನುಗಳಿಗೆ ಗೌರವ ಕೊಡುತ್ತಾ ಬಂದಿದ್ದಾರೆ. ಹಾಗೆಯೇ ಯಾರೇ ತಪ್ಪು ಮಾಡಿದರೂ ಕಾನೂನು ಪ್ರಕಾರ ಶಿಕ್ಷೆಯಾಗಲಿ ಎಂದು ಪ್ರತಿಪಾದಿಸಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಅವರು, ಮಾಜಿ ಸಚಿವರಾದ ಹೆಚ್.ಡಿ.ರೇವಣ್ಣ ಅವರೂ ಸಹ ಕಾನೂನು ಪಾಲನೆ ಮತ್ತು ಗೌರವ ಕೊಡುತ್ತಾ ಬಂದಿದ್ದಾರೆ. ತನಿಖೆಯನ್ನೂ ಸ್ವಾಗತ ಮಾಡಿದ್ದಾರೆ. ಆದರೂ ಕಾಂಗ್ರೆಸ್ ನವರು ರಾಜಕೀಯ ದುರುದ್ದೇಶ ಹಾಗೂ ತಮಗೆ ಎದುರಾಳಿಯಾಗಿರುವ ದೇವೇಗೌಡರ ಕುಟುಂಬವನ್ನು ಹಣಿಯಬೇಕು ಎಂದು ಒಂದೇ ದುರುದ್ದೇಶದಿಂದ ತೇಜೋವಧೆ ಮಾಡುವ ಕೆಲಸದಲ್ಲಿ ನಿರತರಾಗಿರುವುದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.
ಆದರೆ ಅಶ್ಲೀಲ ದೃಶ್ಯಾವಳಿಯುಳ್ಳ ಪೆನ್ ಡ್ರೈವ್ ಹಂಚಿಕೆ ಮಾಡಿರುವ ಪ್ರಮುಖ ಆರೋಪಿಗಳ ವಿರುದ್ಧ ದೂರು ದಾಖಲಾಗಿ, ಜಿಲ್ಲಾ ನ್ಯಾಯಾಲಯ, ಹೈಕೋರ್ಟ್ ಜಾಮೀನು ಅರ್ಜಿ ತಿರಸ್ಕಾರ ಮಾಡಿದ್ದರೂ ಆರೋಪಿಗಳನ್ನು ಈವರೆಗೂ ಬಂಧಿಸಿಲ್ಲ ಏಕೆ ಎಂದು ಪ್ರಶ್ನೆ ಮಾಡಿದರು.
ಇಷ್ಟೂ ಮಂದಿ ಹಾಸನ ಜಿಲ್ಲೆ ಮಾತ್ರವಲ್ಲದೆ ಎಲ್ಲಾ ಕಡೆ ರಾಜಾರೋಷವಾಗಿ ಕಾಂಗ್ರೆಸ್ ಜನಪ್ರತಿನಿಧಿಗಳು, ಮುಖಂಡರ ಜೊತೆ ಓಡಾಡುತ್ತಾ, ಕಾಂಗ್ರೆಸ್ ಸಭೆ, ಸಮಾರಂಭ ಹಾಗೂ ವಿಜಯೋತ್ಸವಗಳಲ್ಲೂ ಭಾಗಿಯಾಗುತ್ತಿದ್ದಾರೆ. ಈ ವಿಚಾರದಲ್ಲಿ ಸರ್ಕಾರ ಮತ್ತು ಪೊಲೀಸರು ಪಕ್ಷಪಾತ ಧೋರಣೆ ಅನುಸುತ್ತಿದ್ದಾರೆ ಎಂಬ ಮಾತು ಜನಸಾಮಾನ್ಯರಿಂದ ಕೇಳಿ ಬರುತ್ತಿದೆ.
ಸರ್ಕಾರ ಈ ನೆಲದ ಕಾನೂನಿಗೆ ಗೌರವ ಕೊಡುವುದು, ಪಾಲನೆ ಮಾಡುವುದಿಲ್ಲದೆ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಯಾವುದೇ ಪಕ್ಷದವರಿಲಿ, ಮುಖಂಡರಿರಲಿ ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಈ ಮೂಲಕ ಒತ್ತಾಯಿಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಕ್ಷೇತ್ರದ ಶಾಸಕ ಹೆಚ್.ಪಿ. ಸ್ವರೂಪ್ ಪ್ರಕಾಶ್, ಮಾಜಿ ಸಚಿವ ಹೆಚ್ ಕೆ ಕುಮಾರಸ್ವಾಮಿ, ಡಿ.ಸಿ.ಸಿ. ಬ್ಯಾಂಕ್ ಅದ್ಯಕ್ಷರು ಸೋಮನಹಳ್ಳಿ ನಾಗರಾಜ್, ಜೆಡಿಎಸ್ ವಕ್ತಾರರು ರಘು ಹೊಂಗೆರೆ, ತಾಲೂಕು ಜೆಡಿಎಸ್ ಅಧ್ಯಕ್ಷರುಗಳಾದ ಹಾಸನ ತಾಲೂಕು ಎಸ್ ದ್ಯಾವೇಗೌಡ, ಆಲೂರು ತಾಲೂಕು ಅಧ್ಯಕ್ಷ ಮಂಜೇಗೌಡ , ಅರಸೀಕೆರೆ ತಾಲೂಕಿನ ಚಂದ್ರಶೇಖರ್, ಅರಕಲಗೂಡು ಅಧ್ಯಕ್ಷ ಸತೀಶ್, ಮುಖಂಡರುಗಳಾದ ಅರಸೀಕೆರೆ ಗಂಗಾಧರ್, ಬಾಣಾವರ ಅಶೋಕ್, ಹೊನ್ನಶೆಟ್ಟಿಹಳ್ಳಿ ಪುಟ್ಟಸ್ವಾಮಿ ನವೀನ್, ಗ್ಯಾರಹಳ್ಳಿ ರವೀಶ್ ಮಾಜಿ ಜಿಲ್ಲಾ ಪಂಚಾಯತ್ ಉಪಾದ್ಯಕ್ಷರಾದ ರಾಜಣ್ಣ. ಲಕ್ಷ್ಮಣಗೌಡ, ಸ್ವಾಮಿಗೌಡ ನೌಕರರ ಸಂಘದ ಮಾಜಿ ಗೌರವ ಅದ್ಯಕ್ಷರಾದ ರುದ್ರಪ್ಪ, ನಗರಸಭೆ ಸದಸ್ಯರಾದ ವಾಸು ,ಮಂಜಣ್ಣ, ಚಂದ್ರೇಗೌಡ , ರಫೀಕ್ ವಕೀಲರುಗಳಾದ ಲಿಂಗರಾಜು, ಸುದೀಪ್ ಲೋಕೇಶ್, ವಾಸು ಇತರರು ಉಪಸ್ಥಿತರಿದ್ದರು.




