
ಬೇಲೂರು :-ಮನೆಯಲ್ಲಿ ಹಿರಿಯರು ಹಾಗೂ ಮಠದಲ್ಲಿ ಗುರು ಇದ್ದರೆ ಮಾತ್ರ ಸಮಾಜ ಸುಧಾರಣೆ ಎಂದು ಶಾಸಕ ಹಚ್.ಕೆ. ಸುರೇಶ್ ಹೇಳಿದರು.
ತಾಲ್ಲೂಕಿನ ಪಂಡಿತನಹಳ್ಳಿ ಕೆರೆಗೆ ಪುಷ್ಪಗಿರಿ ಕ್ಷೇತ್ರದ ಸೋಮಶೇಖರ ಸ್ವಾಮೀಜಿಯವರ ನೇತೃತ್ವದಲ್ಲಿ ಬಾಗಿನ ಅರ್ಪಿಸಿ ಮಾತನಾಡಿದ ಅವರು ಪುಷ್ಪಗಿರಿ ಕ್ಷೇತ್ರದ ಅಭಿವೃದ್ಧಿಯ ಹರಿಕಾರರಾಗಿ ಮತ್ತು ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಶ್ರೀಗಳು ತಮ್ಮನ್ನು ತಾವು ತೊಡಗಿಸಿಕೊಂಡು ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ.
ತಾಲ್ಲೂಕಿನ ನೀರಾವರಿ ಹೊರಟಕ್ಕಾಗಿ ಉಪವಾಸ ಸತ್ಯಾಗ್ರಹದ ಮೂಲಕ ಬರ ಪೀಡಿತ ಪ್ರದೇಶಗಳಾದ ಹಳೇಬೀಡು, ಮಾದಿಹಳ್ಳಿ ಮತ್ತು ಸಾಲಗಾಮೆ ಕೆರೆಗಳಿಗೆ ನೀರು ತುಂಬಿಸುವ 126 ಕೋಟಿ ರೂ. ವೆಚ್ಚದ ರಣಘಟ್ಟ ನೀರಾವರಿ ಯೋಜನೆ ಕಾಮಗಾರಿಗೆ ಸ್ವಾಮೀಜಿಯವರ ಕೊಡುಗೆ ಅಪಾರ ಎಂದರು.
ಪುಷ್ಪಗಿರಿ ಕ್ಷೇತ್ರದ ಪೀಠಧ್ಯಕ್ಷರಾದ ಸೋಮಶೇಖರ್ ಸ್ಬಾಮೀಜಿ ಮಾತನಾಡಿ ಈ ಬಾರಿ ವರುಣನ ಕೃಪೆಯಿಂದ ಉತ್ತಮ ಮಳೆ ಬೆಳೆಯಾಗಿದ್ದು ರೈತರ ಸಂಕಷ್ಟ ದೂರವಗಿದೆ. ಹಳೆಬೀಡು ಭಾಗದ ಎಲ್ಲಾ ಕೆರೆಕಟ್ಟೆಗಳು ಭರ್ತಿಯಾಗಿ ಬರ ನೀಗಿದಂತಾಗಿದೆ.
ಹಳ್ಳಿಗಳಲ್ಲಿ ಕೆರೆಕಟ್ಟೆಗಳು ಅತ್ಯವಶ್ಯಕ ಹಾಗೂ ಉಪಯುಕ್ತವಾಗಿವೆ ಅದ್ದರಿಂದ ಕೆರೆಗಳನ್ನು ಕಡೆಗಣಿಸಬಾರದು. ಕೆರೆಗಳು ಇದ್ದರೆ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ.
ತಾಲ್ಲೂಕಿನ ಕೆರೆಗಳ ಸುತ್ತಲು ಒತ್ತುವರಿಯಾಗಿರುವ ಜಮೀನನ್ನು ತೆರವುಗೊಳಿಸಿ ಹಾಗೂ ಕೆರೆಯ ಹೂಳನ್ನು ತೆಗೆಸುವ ಮೂಲಕ ಕೆರೆಗಳ ಸಂರಕ್ಷಣೆ ಪ್ರತಿಯೊಬ್ಬರೂ ಮುಂದಾಗಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ. ಶಿವರಾಜ್, ರೈತ ಮುಖಂಡರಾದ ಮಲ್ಲಿಕ್,ಚಂದ್ರಕಾಂತ್, ಪರಮೇಶ್, ರಂಗನಾಥ್, ಶೇಕರೇಗೌಡ, ಕುಮಾರನಹಳ್ಳಿ ಕುಮಾರ್ ಹಾಜರಿದ್ದರು.


