
ಬೇಲೂರು. ಜುಲೈ. 28 :- ರಾಜ್ಯದ ಎಲ್ಲಾ ಅಂಗಡಿ, ಉದ್ಯಮ ಸೇರಿದಂತೆ ವಾಣಿಜ್ಯ ಮಳಿಗೆಗಳ ನಾಮ ಫಲಕದಲ್ಲಿ ಶೇ ೬೦ ರಷ್ಟು ಕನ್ನಡ ಭಾಷೆಯ ಬರಹ ಇರಬೇಕು ಎಂದು ಸರ್ಕಾರ ಅಧಿಕೃತ ಆದೇಶ ನೀಡಿದೆ. ಆದರೆ ಸರ್ಕಾರದ ಆದೇಶ ಇನ್ನೂ ಅನುಷ್ಠಾನವಾಗಿಲ್ಲ. ಇದಕ್ಕಾಗಿ ಸಾಹಿತ್ಯ ಪರಿಷತ್ತು ಹೋರಾಟ ನಡೆಸಬೇಕಾದ ಅನಿವಾರ್ಯತೆ ,ಇದೆ ಹಾಗು ಯುವ ಜನಾಂಗಕ್ಕೆ ಸಾಹಿತ್ಯದ ಆಸಕ್ತಿ ಕಡೆ ಮುಖ ಮಾಡಲು ಅವರನ್ನು ಹೆಚ್ಚು ಸಾಹಿತ್ಯ ಯೊಂದರ ಪರಿಷತ್ ಸದಸ್ಯರನ್ನಾಗಿ ಮಾಡಬೇಕು ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಹೆಚ್.ಎಲ್.ಮಲ್ಲೇಶಗೌಡ ಹೇಳಿದರು.
ಪಟ್ಟಣದ ಚನ್ನಕೇಶವಸ್ವಾಮಿ ದಾಸೋಹಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನೂತನ ಅಧ್ಯಕ್ಷ ಮಾ.ನಾ.ಮಂಜೇಗೌಡರ ಪದಗ್ರಹಣ ಕಾರ್ಯಕ್ರಮದ ಉದ್ಘಾಟನೆ ನಡೆಸಿದ ಬಳಿಕ ಮಾತನಾಡಿದ ಅವರು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ನಾರಾಯಣಗೌಡರ ಅವಿರತ ಹೋರಾಟದ ಫಲದಿಂದಲೇ ಸರ್ಕಾರ ನಾಮ ಫಲಕದಲ್ಲಿ ಶೇ ೬೦ ರಷ್ಟು ಕನ್ನಡ ಭಾಷೆಯನ್ನು ಹೊಂದಿರಬೇಕು ಎಂದು ಅಧಿಕೃತ ಸುತ್ತೋಲೆಯನ್ನು ಹೊರಡಿಸಿದ್ದಾರೆ.
ಆದರೆ ಸರ್ಕಾರದ ಆದೇಶ ಇನ್ನೂ ಕಾರ್ಯಗತವಾಗಿಲ್ಲ ಎಂದ ಅವರು ನಾವುಗಳು ಈಗಾಗಲೇ ಜಿಲ್ಲಾಧಿಕಾರಿಗಳ ಭೇಟಿ ನಡೆಸಿ ಈ ಬಗ್ಗೆ ಮನವರಿಕೆ ಮಾಡಲಾಗಿದೆ. ಅಂತಯೇ ಎಲ್ಲಾ ತಾಲ್ಲೂಕು ಅಧ್ಯಕ್ಷರು ಕೂಡ ಈ ಬಗ್ಗೆ ಕಾರ್ಯ ಪ್ರವೃತ್ತರಾಗಬೇಕು ಎಂದು ಸಲಹೆ ನೀಡಿದ ಅವರು
ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ.ಎಲ್.ರಾಜೇಗೌಡರು ಕೂಡ ತಮ್ಮ ಅವಧಿಯಲ್ಲಿ ಅತ್ಯುತ್ತಮ ಕೆಲಸ ಮಾಡಿದ್ದಾರೆ. ಅವರನ್ನು ಬದಲಾವಣೆ ಮಾಡಬೇಕು ಎಂದಾಗ ನನಗೆ ಒಂದು ರೀತಿಯ ಇರಿಸು- ಮುರುಸು ಉಂಟಾಗಿತ್ತು. ಇದೇ ವೇಳೆ ಸ್ವತಃ ಬಿ.ಎಲ್.ರಾಜೇಗೌಡರು ನಮಗೆ ಬರೆದು ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ ಬಳಿಕ ನಾವುಗಳು ರಾಜ್ಯಾಧ್ಯಕ್ಷರ ಅನುಮೋದನೆ ಮೇಲೆ ಮಾ.ನ.ಮಂಜೇಗೌಡ ಅಧ್ಯಕ್ಷರಾಗಿ ಮುಂದಿನ ಅದೇಶದ ಬರುವ ತನಕ ಕೆಲಸ ಮಾಡಲಿ ಎಂದು ಹಾರೈಸಿದರು.
ಕಸಾಪ ಮಾಜಿ ಅಧ್ಯಕ್ಷ ಹೆಚ್.ಎಂ.ದಯಾನಂದ ಮಾತನಾಡಿ, ಸಾಹಿತ್ಯ ಪರಿಷತ್ತು ಸರ್ಕಾರದ ಅಂಗವಾಗಿ ನಾಡು.ನುಡಿ ಮತ್ತು ಜಲದ ಬಗ್ಗೆ ಸವಿಸ್ತಾರವಾಗಿ ಕೆಲಸ ಮಾಡುತ್ತಿದೆ. ಪರಿಷತ್ತ ನಿಂತ ನೀರಲ್ಲ, ಹರಿಯುವ ನದಿ ಅದ್ದರಿಂದ ಪರಿಷತ್ತು ಕ್ರಿಯಾತ್ಮಕವಾಗಿ ಚಟುವಟಿಕೆಗಳ ಮೂಲಕ ಕೆಲಸ ಮಾಡಬೇಕಿದೆ.ರಾಜೇಗೌಡರು ಇಡೀ ಜಿಲ್ಲೆಯಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಆದರೆ ಒಪ್ಪಂದದಂತೆ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡಿದೆ. ಮುಂದಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಮಾ.ನ.ಮಂಜೇಗೌಡರಿಗೆ ರಾಜೇಗೌಡರು ಮತ್ತು ಮ.ಶಿವಮೂರ್ತಿ ರವರು ಸಂಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಸಾಹಿತಿ ಇಂದಿರಮ್ಮ, ಕಸಾಪ ಮಾಜಿ ಅಧ್ಯಕ್ಷರಾದ ಮ.ಶಿವಮೂರ್ತಿ, ಸಾಹಿತಿ ಶ್ರೀ ವತ್ಸ ಎಸ್ ವಟಿ, ಪತ್ರಕರ್ತರ ಸಂಘದ ಅಧ್ಯಕ್ಷೆ ವೈ.ಆರ್.ಭಾರತೀಗೌಡ, ಗೌರವ ಕಾರ್ಯದರ್ಶಿಗಳಾದ ಬಿ.ಬಿ.ಶಿವರಾಜ್, ಆರ್.ಎಸ್.ಮಹೇಶ್, ಸಂಘಟನಾ ಕಾರ್ಯದರ್ಶಿ ಬೊಮ್ಮಡಿಹಳ್ಳಿ ಕುಮಾರಸ್ವಾಮಿ, ಪದಾಧಿಕಾರಿಗಳಾದ ಸಂಪತ್ತು, ನಾಗರಾಜ್ ಇನ್ನೂ ಮುಂತಾದವರು ಹಾಜರಿದ್ದರು.
ಬಾಕ್ಸ್ ನ್ಯೂಸ್ : ಮಾ.ನ.ಮಂಜೇಗೌಡ. ನೂತನ ಅಧ್ಯಕ್ಷರು ಕಸಾಪ ಬೇಲೂರು. :- ಬೇಲೂರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಳೆದ ನಾಲ್ಕು ದಶಕದಿಂದ ಬೇಲೂರು ತಾಲ್ಲೂಕಿನಲ್ಲಿ ಅತ್ಯಂತ ಸಕ್ರಿಯವಾಗಿ ಕನ್ನಡ ಪರ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ. ವಿಶೇಷವಾಗಿ ಪರಿಷತ್ತು ಕೆಲಸಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ನಿಟ್ಟಿನಲ್ಲಿ ಹಾಗೂ ಅಧುನಿಕ ಕಾಲಘಟ್ಟದಲ್ಲಿನ ಸಾಮಾಜಿಕ ಜಾಲತಾಣದ ಬಳಕೆ ಮಾಡಿಕೊಂಡು ಲೇಖಕರನ್ನು ಬೆಳೆಸುವುದು ಹೆಚ್ಚು ಯುವಕರಿಗೆ ಅಧ್ಯತೆ ನೀಡಲಾಗುತ್ತದೆ ಎಂದ ಅವರು ನನಗೆ ಪರಿಷತ್ತು ಅಧ್ಯಕ್ಷರಾಗಲು ಪ್ರೋತ್ಸಾಹ ನೀಡಿದ ಸರ್ವರಿಗೂ ಅಭಿನಂದನೆ ಸಲ್ಲಿಸುತ್ತೇನೆ.ಈಗಾಗಲೇ ಸಾಹಿತ್ಯ ಪರಿಷತ್ ನಲ್ಲಿ ೧೮೦೦ ಸದಸ್ಯರಿದ್ದು ಇನ್ನು ಹೆಚ್ಚಿನ ಸದಸ್ಯರನ್ನಾಗಿ ಮಾಡಲು ಗ್ರಾಮೀಣ ಭಾಗಗಳಿಗೆ ಸಾಹಿತ್ಯದ ಸೊಗಡನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.
