
ಬೇಲೂರು :-ತಾಲೂಕಿನ ಎಲ್ಲಾ ಸಂಘಟನೆಗಳ ಜನಾಭಿಪ್ರಾಯ ಪಡೆದು ಬೇಲೂರಿನ ಅಭಿವೃದ್ದಿಯ ಜೊತೆಗೆ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಹೆಚ್ ಕೆ ಸುರೇಶ್ ಸ್ಪಷ್ಟ ಪಡಿಸಿದರು.
ಬೇಲೂರು ಶ್ರೀ ಚನ್ನಕೇಶವ ಸ್ಬಾಮಿ ದೇವಾಲಯವು ಇತ್ತೀಚಿನ ದಿನದಂದು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದ ಹಿನ್ನೆಲೆಯಲ್ಲಿ ಬೇಲೂರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಿದ್ದು, ಜನಾಭಿಪ್ರಾಯ ಪಡೆದು ಅಭಿವೃದ್ಧಿ ಕಾಮಗಾರಿ ನಡೆಸಲಾಗುತ್ತದೆ ಹೊರತು ನನ್ನದು ಯಾವುದೇ ಸ್ವಾರ್ಥವಿಲ್ಲ. ಟೀಕೆ ಟಿಪ್ಪಣಿಗಳಿಗೆ ನಾನು ಕಿವಿಗೊಡುವ ಮಾತು ಇಲ್ಲ ಎಂದು ಬೇಲೂರು ಶಾಸಕ ಹೆಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಕೋಟೆ ಚನ್ನಕೇಶವಸ್ವಾಮಿ ದಾಸೋಹ ಭವನದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣ ಮಾಡುವ ಉದ್ದೇಶದಿಂದ ಕರೆದ ಜನಾಭಿಪ್ರಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನಾನು ಚುನಾವಣೆ ಸಂದರ್ಭದಲ್ಲಿ ಕೂಡ ಬೇಲೂರಿನ ಸಮಗ್ರ ಅಭಿವೃದ್ಧಿ ಬಗ್ಗೆ ಕನಸು ಕಂಡಿರುವೆ. ಅಂತಯೇ ನಾನು ನಿಮ್ಮಲ್ಲರ ಆಶೀರ್ವಾದದಿಂದ ಶಾಸಕನಾದ ಬಳಿಕ ಶಿಲ್ಪಕಲಾ ನಾಡು ಬೇಲೂರು ಹಳೇಬೀಡಿನ ಅಭಿವೃದ್ಧಿಗಾಗಿ ವಿಧಾನಸಭೆಯಲ್ಲಿ ಮಾತನಾಡಿ ಸಂಬಂಧಿಸಿದ ಸಚಿವರಲ್ಲಿ ಮಾತನಾಡಿ ಮನವಿ ಸಲ್ಲಿಸಿದೆ. ಅಂತಯೇ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ ರವರು ನಮ್ಮ ಮನವಿಗೆ ಸಕಾರಾತ್ಮಕ ಸ್ಪಂದಿಸಿದ್ದಾರೆ.
ವಿಶೇಷವಾಗಿ ನಗರಾಭಿವೃದ್ಧಿ ಸಚಿವರು ಕೂಡ ಬಸ್ ನಿಲ್ದಾಣ ನಿರ್ಮಾಣಕ್ಕೆ ರೂ ೫ ಕೋಟಿ ನೀಡಿದ ಕಾರಣದಿಂದಲೇ ನಾವುಗಳು ಇಂದು ಜನಾಭಿಪ್ರಾಯ ಪಡೆಯಲು ಸಭೆ ಕರೆಯಲಾಗಿದೆ. ಬಸ್ ನಿಲ್ದಾಣಕ್ಕೆ ಇನ್ನೂ ಯಾವುದೇ ಶಾಶ್ವತ ಜಾಗ ಗುರುತಿಸಿಲ್ಲ, ತಾವುಗಳು ನೀಡಿದ ಸಲಹೆ ಮೇರೆಗೆ ಬಸ್ ನಿಲ್ದಾಣ ನಿರ್ಮಾಣಕ್ಕೆ ಬದ್ದವಾಗಿರುವ ಬಗ್ಗೆ ತಿಳಿಸಿದರು.ಇಲ್ಲಿ ಎಲ್ಲರ ಒಮ್ಮತದ ನಿರ್ಣಯ ಹಳೆ ಬಸ್ ನಿಲ್ದಾಣವನ್ನು ಅಭಿವೃದ್ಧಿ ಪಡಿಸಬೇಕೊ ಅಥವಾ ಬೇರೆ ಕಡೆ ಬಸ್ ನಿಲ್ದಾಣ ಮಾಡುವುದು ಸೂಕ್ತ ಎಂಬುವುದರ ಬಗ್ಗೆ ನಿಮ್ಮಲ್ಲಿ ಮಾಹಿತ ಕೇಳುತ್ತಿದ್ದೇನೆ.ನೀವೆಲ್ಲಿ ನಮಗೆ ಸೂಕ್ತ ಜಾಗದ ಬಗ್ಗೆ ಮಾಹಿತಿ ನೀಡುತ್ತೀರಾ ಅಲ್ಲಿ ಬಸ್ ನಿಲ್ದಾಣ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಸಿ.ಎಸ್.ಪ್ರಕಾಶ್ ಮಾತನಾಡಿ, ಬೇಲೂರು ಪಟ್ಟಣದ ಮದ್ಯೆ ಇರುವ ಬಸ್ ನಿಲ್ದಾಣ ಅಗಲೀಕರಣ ಅಸಾದ್ಯವಾಗಿದೆ. ಕಾರಣ ಮುಖ್ಯ ರಸ್ತೆ ಅಗಲೀಕರಣವಾಗಬೇಕಿದೆ.ವಿಶೇಷವಾಗಿ ಬೇಲೂರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಹೊರಭಾಗದಲ್ಲಿ ಬಸ್ ನಿಲ್ದಾಣ ನಿರ್ಮಿಸಬಹುದು. ಈಗಾಗಲೇ ಹೊಸನಗರ ಸಮೀಪದ ಹೈಟೆಕ್ ಬಸ್ ನಿಲ್ದಾಣ ಸೂಕ್ತವಾಗಿದೆ. ಈಗಾಗಲೇ ಬೈಪಾಸ್ ರಸ್ತೆ ಪ್ರಗತಿಯಿಂದ ಬೇಲೂರು ಕೂಡ ವಿಸ್ತರಣೆಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.ಇಲ್ಲಿ ಜಾಗವನ್ಬು ಪಡೆದು ಅಭಿವೃದ್ಧಿ ಪಡಿಸಿದರೆ ಅದಕ್ಕೆ ಸಂಪೂರ್ಣ ಸಹಕಾರವಿದೆ ಎಂದರು.
ಮುಖ್ಯರಸ್ತೆ ವರ್ತಕರ ಸಂಘದ ಅಧ್ಯಕ್ಷ ಉಮಾಶಂಕರ್ ಮಾತನಾಡಿ, ಬಸ್ ನಿಲ್ದಾಣ ಸ್ಥಳಾಂತರದಿಂದ ಇಲ್ಲಿನ ವರ್ತಕರ ವ್ಯಾಪಾರ ವಹಿವಾಟಿಗೆ ಕೊಡಲಿಪೆಟ್ಟು ಬಿಳಲಿದೆ.ಶಾಸಕರು ಹಾಲಿ ಇರುವ ಬಸ್ ನಿಲ್ದಾಣದ ಸಮೀಪದ ಪ್ರವಾಸಿ ಮಂದಿರವನ್ನೇ ಸ್ಥಳಾಂತರ ಮಾಡುವ ಮೂಲಕ ಪಟ್ಟಣದ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದ ಅವರು ನಾವುಗಳು ಎಂದಿಗೂ ಮುಖ್ಯರಸ್ತೆ ಅಗಲೀಕರಣಕ್ಕೆ ವಿರೋಧವಿಲ್ಲ, ನಮಗೆ ಪರಿಹಾರ ನೀಡಿ ಅಗಲೀಕರಣ ಮಾಡಿ ಎಂದು ತಿಳಿಸಿದರು.
ಈಗಾಗಲೇ ೧೯೫ ಅಂಗಡಿ ಮಳಿಗೆದಾರರು ರಸ್ತೆ ಅಭಿವೃದ್ಧಿ ಗ ಸಹಕಾರ ನೀಡಲು ಮುಂದಾಗಿದ್ದೇವೆ.ನಮಗೆ ಪರಿಹಾರ ಕೊಟ್ಟು ಭೂಮಿಯನ್ನು ಪಡೆಯಲಿ.ಈಗಾಗಲೇ ಹೊಳೆಬೀದಿ ರಸ್ತೆ ಅಭಿವೃದ್ಧಿ ಯಾಗುತ್ತಿರುವುದರಿಂದ ಮುಖ್ಯರಸ್ತೆಯನ್ನು ಅಭಿವೃದ್ಧಿ ಮಾಡುವ ಮೂಲಕ ಹಳೆ ಬಸ್ ನಿಲ್ದಾಣವನ್ನು ಪಿಡಬ್ಲ್ಯೂಡಿ ಪ್ರವಾಸಿ ಮಂದಿರದ ಹಿಂಭಾಗದ ಜಾಗ ಖಾಲಿ ಇದ್ದು ಅದನ್ನು ಪಡೆದು ಅದನ್ನು ಅಭಿವೃದ್ಧಿ ಪಡಿಸಲಿ ಎಂದರು.
ಕಾಂಗ್ರೆಸ್ ಮುಖಂಡ ದೇವರಾಜ್ ಮಾತನಾಡಿ, ಚನ್ನಕೇಶವಸ್ವಾಮಿ ದೇಗುಲದ ಸುತ್ತ ಪಾಳುಬಿದ್ದ ಭೂಮಿ ಖಾಲಿಯಿದೆ. ಇಲ್ಲಿಯೇ ಬಸ್ ನಿಲ್ದಾಣ ಮಾಡಬೇಕು, ಹೊರ ಭಾಗದಲ್ಲಿ ಬಸ್ ನಿಲ್ದಾಣದಿಂದ ಕೆಲ ರಿಯಲ್ ಎಸ್ಟೇಟ್ ರವರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ನಡೆಯುತ್ತಿದೆ.ಅಲ್ಲದೆ ಸುಮಾರು ೩ ಕಿಮೀ ಪಟ್ಟಣಕ್ಕೆ ದೂರವಾಗುವುದರಿಂದ ಸೂಕ್ತ ಸ್ಥಳವನ್ನು ನೋಡಿ ಇಲ್ಲೆ ನಿಲ್ದಾಣ ಮಾಡಿ ಎಂದು ಹೇಳಿದರು. ಬಿಜೆಪಿ ಮುಖಂಡ ಜೆ ಕೆ.ಕುಮಾರ್ ಮಾತನಾಡಿ , ಪಟ್ಟಣದ ಹೃದಯ ಭಾಗದಲ್ಲಿ ಬಸ್ ನಿಲ್ದಾಣ ಮಾಡಿದರೆ ಮುಂದಿನ ದಿನದಂದು ಕಷ್ಟವಾಗುತ್ತದೆ.ಅದ್ದರಿಂದ ಪಟ್ಟಣದ ಹೊರ ಭಾಗದಲ್ಲಿ ಬಸ್ ನಿಲ್ದಾಣ ಸೂಕ್ತ ಆದರೆ ರಾಯಪುರದ ಬಳಿ ಮಾಡುವುದರ ಬದಲು ಗೆಂಡೇಹಳ್ಳಿ ರಸ್ತೆ ಹನುಮಂತನಗರದ ಬಳಿ ಸುಮಾರು ೪.೫ ಎಕರೆ ಸರ್ಕಾರಿ ಜಾಗವಿದ್ದು ಅಲ್ಲಿ ಮಾಡಿದರೆ ಪಟ್ಟಣ ದೇವಾಲಯ ಸೇರಿದಂತೆ ಶಾಲಾ ಕಾಲೇಜುಗಳಿಗೂ ಅನುಕೂಲವಾಗುತ್ತದೆ ಎಂದರು.
ಸಭೆಯಲ್ಲಿ ತಹಸೀಲ್ದಾರ್ ಎಂ ಮಮತ, ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ, ಪುರಸಭಾ ಮುಖ್ಯಾಧಿಕಾರಿ ಸುಜಯ್ ಕುಮಾರ್, ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಕುಮಾರ್, ವಿಭಾಗೀಯ ಸಂಚಾರ ಅಧಿಕಾರಿ ಚನ್ನಬಸಪ್ಪ, ಕಿರಿಯ ಅಭಿಯಂತರ ಅರವಿಂದ, ಚನ್ನಕೇಶವಸ್ವಾಮಿ ದೇಗುಲ ಕಾರ್ಯನಿರ್ವಾಹಕ ಅಧಿಕಾರಿ ಯೋಗೀಶ್ ಇನ್ನೂ ಮುಂತಾದವರು ಹಾಜರಿದ್ದರು.
ಬಾಕ್ಸ್ ನ್ಯೂಸ್ : ಇಲ್ಲಿ ಯಾರ ಒಬ್ಬರ ಓಲೈಕೆ ಮಾಡಲು ಸಭೆ ಕರೆದಿಲ್ಲ.ನನ್ನ ತಾಲೂಕಿನಲ್ಲಿ ಅಭಿವೃದ್ಧಿ ಯಾಗಬೇಕು ಎಂಬುವುದು ನನ್ನ ಇಚ್ಚೆ ಈಗಾಗಲೇ ಮೂರು ಸ್ಥಳ ಗಳನ್ಜು ಗುರುತು ಮಾಡಿದ್ದು ಹಳೆಯ ನಿಲ್ದಾಣವನ್ನು ಅಭಿವೃದ್ಧಿ ಪಡಿಸಲು ಜಾಗವನ್ನು ಕೇಳಲಾಗುವುದು ಅದು ಬಿಟ್ಟರೆ ಹನುಮಂತನಗರ ಹಾಗು ರಾಯಪುರ ಬಳಿ ಬಸ್ ನಿಲ್ದಾಣ ನಿರ್ಮಾಣ ಮಾಡಿ ನಗರ ಸಾರಿಗೆ ಮಾಡಲು ಎಲ್ಲರ ಸಹಕಾರವನ್ನು ಕೋರುತ್ತೇನೆ ಅಧಿಕಾರಿಗಳು ಮೂರು ಸ್ಥಳಗಳನ್ನು ಗುರ್ತಿಸಿ ನಮಗೆ ಮಾಹಿತಿ ನೀಡಬೇಕು ಎಂದು ಶಾಸಕ ಹೆಚ ಕೆ ಸುರೇಶ್ ಹೇಳಿದರು.



