
ಅರಸೀಕೆರೆ : ರಾಜ್ಯದಲ್ಲಿಯೇ ಇತಿಹಾಸ ಪ್ರಸಿದ್ಧಿ ಪಡೆದ ತಾಲೂಕಿನ ಕಣಕಟ್ಟೆ ಹೋಬಳಿ ಮಾಡಾಳು ಗ್ರಾಮದ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿಯವರ ವಿಸರ್ಜನೆಯು ಸುಕ್ಷೇತ್ರ ಆರನಳ್ಳಿ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರ ಸಮ್ಮುಖದಲ್ಲಿ ಮಂಗಳವಾರ ಮಧ್ಯಾನ ಊರ ಮುಂದಿನ ಕಲ್ಯಾಣಿಯಲ್ಲಿ ಸಾವಿರಾರು ಭಕ್ತರು ಕಣ್ತುಂಬಿ ಕೊಂಡರು
ಭಾದ್ರಪದ ಮಾಸದ ತದಿಗೆ ದಿನದಂದು ಗ್ರಾಮದ ಎರೆಹಳ್ಳಿ ರಸ್ತೆ ಪಕ್ಕ ನೂತನವಾಗಿ ನಿರ್ಮಿಸಿರುವ ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗಿತ್ತು ಪ್ರತಿದಿನ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನಗಳಿಂದ ಶ್ರದ್ಧಾ ಭಕ್ತಿಯಿಂದ ತ್ರಿಕಾಲ ಪೂಜೆ ಸಲ್ಲಿಸಲಾಗುತ್ತಿತ್ತು
ಮಂಗಳವಾರ ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಅಮ್ಮನವರನ್ನು ಪುಷ್ಪಾಲಂಕೃತ ಮಂಟಪದಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಹೂವಿನ ಅಲಂಕಾರದಲ್ಲಿ ಶೃಂಗರಿಸಲಾಗಿದ್ದ ವೇದಿಕೆ ಮೇಲೆ ಕೂರಿಸಲಾಯಿತು
ನಂತರ ಸ್ವರ್ಣ ಗೌರಮ್ಮ ದೇವಿಯವರಿಗೆ ಮಂಗಳಾರತಿ ಸಲ್ಲಿಸಲಾಯಿತು ಬಳಿಕ ನೂರಾರು ಮಹಿಳೆಯರು ತಲೆಯ ಮೇಲೆ ದುಃಖದ ಬಟ್ಟಲು ಹೊತ್ತು ನಿಲ್ಲುತ್ತಿದ್ದಂತೆ ಹರಕೆ ಹೊತ್ತ ಭಕ್ತರು ಕರ್ಪೂರದ ಬಟ್ಟಲಿಗೆ ಕರ್ಪೂರ ಸಲ್ಲಿಸುತ್ತಿದ್ದ ದೃಶ್ಯ ಕಣ್ಮನ ಸೆಳೆಯುತ್ತಿತ್ತು
ಬೆಳಿಗ್ಗೆ 10.30 ಕ್ಕೆ ಮಂಗಲ ತರಡೆ ವಾದ್ಯದೊಂದಿಗೆ ದೇವಿಯ ಉತ್ಸವಕ್ಕೆ ಚಾಲನೆ ನೀಡಲಾಯಿತು ದೇವಿಯು ತಮ್ಮ ಭಕ್ತರ ಮನೆಗೆ ತೆರಳಿದಾಗ ಮಹಿಳೆಯರು ದೇವಿಗೆ ಪೂಜೆ ಸಲ್ಲಿಸಿ ಮಡಿಲಕ್ಕಿ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು
ಮಧ್ಯಾಹ್ನ 3 ಗಂಟೆಗೆ ಊರ ಮುಂದಿನ ಕಲ್ಯಾಣಿಯಲ್ಲಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಚೇತನ್ ಮರಿದೇವರ ಸಮ್ಮುಖದಲ್ಲಿ ದೇವಿಗೆ ಪೂಜೆ ಸಲ್ಲಿಸಿ ಸ್ವರ್ಣ ಗೌರಮ್ಮ ದೇವಿಯವರನ್ನು ವಿಸರ್ಜಿಸಲಾಯಿತು
