
ಹಾಸನ: ನಗರದ ಬಿ.ಎಂ. ರಸ್ತೆ ಬಳಿ ಇರುವ ಖಾಸಗೀ ವಸತಿ ಗೃಹವೊಂದರಲ್ಲಿ ಮುಖ್ಯ ಶಿಕ್ಷಕನೋರ್ವ ನೇಣಿಗೆ ಶರಣಾಗಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ಸಾವಿಗೆ ಕಾರಣ ತಿಳಿದು ಬಂದಿರುವುದಿಲ್ಲ.
ಹಾಸನ ನಗರದ ಹೌಸಿಂಗ್ ಬೋರ್ಡ್ನಲ್ಲಿ ವಾಸವಾಗಿರುವ ರಂಗಸ್ವಾಮಿ ೫೭ ವರ್ಷ ಎಂಬುವರೇ ಆತ್ಮಹತ್ಯೆ ಮಾಡಿಕೊಂಡವರು.
ಬೇಲೂರು ತಾಲೂಕು ತೊಳಲು ಗ್ರಾಮದ ಸರಕಾರಿ ಶಾಲೆಯೊಂದರಲ್ಲಿ ಮುಖ್ಯ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿರುವ ರಂಗಸ್ವಾಮಿ ಹಾಸನ ನಗರದ ಹೌಸಿಂಗ್ ಬೋರ್ಡ್ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸ ಮಾಡುತ್ತಿದ್ದು, ಶನಿವಾರ ಬೆಳಿಗ್ಗೆ ೯ ಗಂಟೆಗೆ ನಗರದ ಬಿ.ಎಂ. ರಸ್ತೆ ಬಳಿ ಇರುವ ಗೋಕುಲ್ ವಸತಿ ಗೃಹದಲ್ಲಿ ರೂಂ ಬಾಡಿಗೆಗೆ ಪಡೆದಿದ್ದರು.
ಭಾನುವಾರ ಬೆಳಿಗ್ಗೆ ತಮ್ಮ ಕುಟುಂಬದೊಂದಿಗೆ ಮೊಬೈಲ್ ಮೂಲಕ ಮಾತನಾಡಿದ್ದಾರೆ. ನಂತರದಲ್ಲಿ ಅವರು ನೇಣಿಗೆ ಶರಣಾಗಿರುವುದಾಗಿ ಮಾಹಿತಿ ತಿಳಿದು ಬಂದಿದೆ.
ಹಾಸನದಲ್ಲಿ ಮನೆಯಿದ್ದರೂ ಹಾಸನ ನಗರದಲ್ಲಿ ಖಾಸಗೀ ವಸತಿ ಗೃಹದಲ್ಲಿ ರೂಮ್ ಬಾಡಿಗೆ ಮಾಡಿ ಇಲ್ಲಿ ಏತಕ್ಕಾಗಿ ಇದ್ದರೂ ಎಂಬುದು ಕೆಲ ಅನುಮಾನಗಳು ಮೂಡಿ ಬಂದಿದೆ.
ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಕೇಸು ದಾಖಲಿಸಿಕೊಂಡು ಪರಿಶೀಲನೆ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
