
ಹಾಸನ : ರೇಷ್ಮೆ ಕೃಷಿ ಮತ್ತು ಜೇನು ಕೃಷಿಯು ರೈತರಿಗೆ ಆದಾಯ ಹೆಚ್ಚಿಸುವಲ್ಲಿ ಮಹತ್ವವಾದ ಕಾರ್ಯ ನಿರ್ವಹಿಸುತ್ತದೆಮತ್ತು ಜೇನು ಸಾಕಾಣಿಕೆ ಪರಾಗಸಂಚಯಕ್ಕೆ ಸಹಕಾರಿ, ಇದು ಕೃಷಿಗೆ ಸಹಾಯವಾಗುತ್ತದೆ ಎಂದು ಶಿಬಿರಾರ್ಥಿಗಳು ತಿಳಿಸಿದರು.
ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ರೇಷ್ಮೆ ಮತ್ತು ಜೇನು ಕೃಷಿಯ ಬಗ್ಗೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ನಂದಿನಿ ಎಸ್,ಸಹಾಯಕ ರೇಷ್ಮೆ ಕೃಷಿ ನಿರ್ದೇಶಕರು, ಅರಸೀಕೆರೆ ಹಾಗೂ ಡಾ.ಸುನಿತಾ ಟಿ.ಆರ್, ಸಹಾಯಕ ಪ್ರಾಧ್ಯಪಕರು ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಹಾಸನ ರವರು ಆಗಮಿಸಿದ್ದರು. ಶ್ರೀಮತಿ ನಂದಿನಿ ಎಸ್ ರವರು ಮಾತನಾಡಿ ರೇಷ್ಮೆ ಕೃಷಿ ಮಾಡುವುದು ರೈತರಿಗೆ ಬಹಳ ಸುಲಭ ಮತ್ತು ಲಾಭದಾಯಕವಾಗಿದೆ ಎಂದು ತಿಳಿಸಿದರು.
ರೇಷ್ಮೆ ಸಾಕಾಣಿಕೆ ಮನೆ ಕಟ್ಟಲು ಸರ್ಕಾರದಿಂದ ರೈತರಿಗೆ ಸಬ್ಸಿಡಿ ಸಿಗುವುದರಿಂದ ಹಾಗೂ ರೇಷ್ಮೆ ಇಲಾಖೆಯಿಂದ ಎರಡನೇ ಹಂತದ ಮೊಟ್ಟೆ ನೇರವಾಗಿ ಸಿಗುವುದರಿಂದ ರೇಷ್ಮೆ ಕೃಷಿ ಮಾಡುವುದು ಬಹಳ ಸುಲಭ ಎಂದು ಹೇಳಿದರು.
ಆ ನಂತರ ಮಾತನಾಡಿದ ಡಾ. ಸುನಿತಾ ಟಿ.ಆರ್ ರವರು ಜೇನು ಕೃಷಿಯ ಬಗ್ಗೆ ಮಾಹಿತಿ ನೀಡಿದರು. ಜೇನು ಕಚ್ಚುವುದಿಲ್ಲ ಚುಚ್ಚುತ್ತದೆ ಎಂದು ತಿಳಿಸುವುದರ ಜೊತೆಗೆ ಜೇನು ಹುಳದಿಂದ ಆಗುವ ಲಾಭಗಳ ಬಗ್ಗೆ ವಿವರಿಸಿದರು.
ವಿವಿಧ ಬಗೆಯ ಜೇನು ಹುಳುಗಳ ಬಗ್ಗೆ ತಿಳಿಸಿ ಅದರಲ್ಲಿ ಜೇನು ಸಾಕಾಣಿಕೆಗೆ ಸೂಕ್ತವಾದ ಜೇನು ಹುಳು ಯಾವುದು? , ಯಾವುದು ಸೂಕ್ತವಲ್ಲ ? ಎಂಬುದರ ಬಗ್ಗೆ ಹೇಳಿಕೊಟ್ಟರು.
ಗ್ರಾಮದ ರೈತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ ರೇಷ್ಮೆ ಕೃಷಿ ಹಾಗೂ ಜೇನು ಕೃಷಿಯನ್ನು ಮಾಡಲು ರೈತರನ್ನು ಪ್ರೋತ್ಸಾಹಿಸಿದರು.
ಈ ಕಾರ್ಯಕ್ರಮದಲ್ಲಿ ನಂದಿನಿ ಎಸ್,ಸಹಾಯಕ ರೇಷ್ಮೆ ಕೃಷಿ ನಿರ್ದೇಶಕರು, ಅರಸೀಕೆರೆ ಹಾಗೂ ಡಾ.ಸುನಿತಾ ಟಿ.ಆರ್, ಸಹಾಯಕ ಪ್ರಾಧ್ಯಪಕರು ಕೃಷಿ ಕೀಟಶಾಸ್ತ್ರ ವಿಭಾಗ, ಕೃಷಿ ಮಹಾವಿದ್ಯಾಲಯ ಹಾಸನ ಹಾಗೂ ಡಾ. ಅಭಿಲಾಷ ಸಹಾಯಕ ಪ್ರಾಧ್ಯಾಪಕರು, ಆಹಾರ ತಂತ್ರಜ್ಞಾನ ವಿಭಾಗ,ಕೃಷಿ ಮಹಾವಿದ್ಯಾಲಯ ಹಾಸನ ರವರು ಭಾಗವಹಿಸಿದ್ದರು. ಅಂತಿಮ ವರ್ಷದ ಕೃಷಿ ಶಿಬಿರಾರ್ಥಿಗಳು ಹಾಗೂ ಕೋರವಂಗಲ ಗ್ರಾಮದ ಮುಖಂಡರೊಂದಿಗೆ ಎಲ್ಲಾ ಗ್ರಾಮಸ್ಥರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕೃಷಿ ವಿದ್ಯಾರ್ಥಿಗಳು ಹಮ್ಮಿಕೊಂಡಿದ್ದ ಈ ಉಪಯುಕ್ತವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ರೈತರೆಲ್ಲರೂ ಬಹಳ ಸಂತೋಷ ವ್ಯಕ್ತಪಡಿಸಿದರು.
