
ಸಕಲೇಶಪುರ – ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆ ನಿರ್ಮಾಣದ ಹೆಸರಲ್ಲಿ ಹೆಗ್ಗದ್ದೆ ಗ್ರಾಮ ಪಂಚಾಯಿತಿ ಪಿಡಿಒ ಹಾಗೂ ಗ್ರಾಮ ಪಂಚಾಯತ್ ಸದಸ್ಯರು ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಶಿವು ಜಿಪ್ಪಿ ಗ್ರಾಮೀಣ ಅಭಿವೃದ್ಧಿ ಪ್ರಾಧಿಕಾರದ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
2024/25 ಸಾಲಿನಲ್ಲಿ ಹೆಗ್ಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗಾಳಿ ಗುಂಡಿ ಗ್ರಾಮದಿಂದ ಸಂತೆಕುಳಿವರೆಗೆ ಜಲ್ಲಿ ರಸ್ತೆ ನಿರ್ಮಾಣದ ಹೆಸರಲ್ಲಿ 5.50 ಲಕ್ಷ ಅಂದಾಜು ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿ ಅರಣ್ಯ ಇಲಾಖೆಯೊಳಗಿನ ಕಾಲು ದಾರಿಗೆ ಜಲ್ಲಿ ಹಾಕಲು 5.50 ಲಕ್ಷ ಹಣವನ್ನು ದುರುಪಯೋಗ ಪಡಿಸಿಕೊಳ್ಳಲು ಹೆಗ್ಗದ್ದೆ ಗ್ರಾಮ ಪಂಚಾಯತ್ ಸದಸ್ಯರು ಸೇರಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯವರು ಯೋಜನೆ ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈಗಾಗಲೇ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಕಾಡು ಅಕೇಷಿಯಾ ಮರ ಇರುವ ಅರಣ್ಯದೊಳಗೆ ಏಕೆ ರಸ್ತೆ ಮಾಡುತ್ತಿದ್ದಾರೆ. ಈ ರಸ್ತೆಯಿಂದ ಯಾವುದೇ ಗ್ರಾಮಗಳಿಗೆ ಪ್ರವೇಶ ಪಡೆಯುತ್ತಿಲ್ಲ. ಬಹುಮುಖ್ಯವಾಗಿ ಈ ರಸ್ತೆಯಲ್ಲಿ ಹೊಂದಿಕೊಂಡಂತೆ ಅಲ್ಲಿ ಒಂದೇ ಒಂದು ಮನೆ ಕೂಡ ಇಲ್ಲ. ಈಗಾಗಲೇ ಇದೆ ಅರಣ್ಯದೊಳಗೆ ಗ್ರಾಮ ಪಂಚಾಯತ್’ನ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಗ್ರಾಮ ಪಂಚಾಯತ್ ಸದಸ್ಯರಿಗೆ ಸೇರಿದ ಸೋಲಾರ್ ವಿದ್ಯುತ್ ಕಂಬ ಇದೆ. ಈ ಎಲ್ಲಾ ಅಕ್ರಮದಲ್ಲಿ ಪಂಚಾಯತ್ ಸದಸ್ಯರೊಂದಿಗೆ ಪಿಡಿಒ ಅವರು ನೇರವಾಗಿ ಭಾಗಿಯಾಗಿದ್ದಾರೆ. ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳನ್ನು ರೂಪಿಸಬೇಕು ಎಂದು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದಲ್ಲಿದೆ ಆದರೆ ಪಿಡಿಒ ಅವರು ಮಹಾತ್ಮ ಗಾಂಧಿ ನರೇಗಾ ಯೋಜನೆಯ ನಿಯಮ ಉಲ್ಲಂಘಿಸಿದರೆ ತಕ್ಷಣ ಈ ಅಕ್ರಮದಲ್ಲಿ ಭಾಗಿಯಾಗಿರುವ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

