
ಸಕಲೇಶಪುರ : ಕಳೆದ ಮಾರ್ಚ್ / ಏಪ್ರಿಲ್ 2025 ರಲ್ಲಿ ನಡೆದ ಎಸ್ ಎಸ್ ಎಲ್ ಸಿ ಪರೀಕ್ಷೆ -1 ರಲ್ಲಿ ಪರೀಕ್ಷೆಗೆ ಹಾಜರಾಗಿದ್ದ 1202 (ಗಂಡು 584 ಹೆಣ್ಣು ಮಕ್ಕಳು 618) ವಿದ್ಯಾರ್ಥಿಗಳಲ್ಲಿ 1124 (522 ಗಂಡು ಹಾಗೂ 602 ಹೆಣ್ಣು ಮಕ್ಕಳು) ಉತ್ತೀರ್ಣರಾಗಿದ್ದು ತಾಲೂಕಿಗೆ ಶೇಕಡಾ 93.05% ರಷ್ಟು ಫಲಿತಾಂಶದೊಂದಿಗೆ ಸಕಲೇಶಪುರ ತಾಲೂಕು ಹಾಸನ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಪುಷ್ಪಾ ರವರು ತಿಳಿಸಿದ್ದಾರೆ.
ತಾಲೂಕಿನ ಬಾಳ್ಳುಪೇಟೆಯ ವಿವೇಕ ಆಂಗ್ಲ ಶಾಲೆಯ ವಿದ್ಯಾರ್ಥಿ ಧನ್ಯಶ್ರೀ ಹೆಚ್.ಸಿ ರವರು 625 ಅಂಕಗಳಲ್ಲಿ 623 ಅಂಕಗಳನ್ನು ಪಡೆದು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ.
ಉಚ್ಚಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪೂಜಾ. ಎನ್ ಹಾಗೂ ಪಟ್ಟಣದ ರೋಟರಿ ಆಂಗ್ಲ ಶಾಲೆಯ ಆಕಾಶ್ ವಿ.ಬಿ ಕ್ರಮವಾಗಿ 617 ಅಂಕಗಳಿಸಿ ದ್ವಿತೀಯ ಸ್ಥಾನ ಗಳಿಸಿದ್ದಾರೆ,
ಸುಂಡಳ್ಳಿ ಗ್ರಾಮದ ಸೆಂಟ್ ಆನ್ಸ್ ಶಾಲೆಯ ವರ್ಷಿತ ಮತ್ತು ರೋಟರಿ ಆಂಗ್ಲ ಶಾಲೆಯ ವಸಂತ್ ಕುಮಾರ್ .ಬಿ.ವಿ ರವರು ಕ್ರಮವಾಗಿ 614 ಅಂಕಗಳಿಸಿ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾ ರವರು ಪತ್ರಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನಲ್ಲಿ ಒಟ್ಟು 42 ಶಾಲೆಗಳಿದ್ದು ಅವುಗಳಲ್ಲಿ 18 ಶಾಲೆಗಳು ಶೇಕಡಾ 100% ಫಲಿತಾಂಶ ಪಡೆದಿವೆ. ಇವುಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳು 9 ಅನುದಾನಿತ 1 ಅನುದಾನ ರಹಿತ 8 ಶಾಲೆಗಳಾಗಿವೆ.
ಈ ತಾಲ್ಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಉತ್ತಮ ಫಲಿತಾಂಶ ನೀಡುವಲ್ಲಿ ಶ್ರಮಿಸಿರುವಂತಹ ತಾಲ್ಲೂಕಿನ ಎಲ್ಲಾ ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರು/ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪುಷ್ಪ ಎಸ್ ರವರು ಅಭಿನಂದಿಸಿದ್ದಾರೆ.
ವಿವೇಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಧನ್ಯಶ್ರೀ ಹೆಚ್.ಸಿ ರವರು 623 ಅಂಕಗಳಿಸಿ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನಗಳಿಸಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಮಲ್ಲಿಕಾರ್ಜುನಪ್ಪ ತಿಳಿಸಿದ್ದಾರೆ.
ತಾಲೂಕಿನ ನಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶ ದಲ್ಲಿ ವಿಶೇಷ ಸಾಧನೆ ಮಾಡಿರುವ ವಿಧ್ಯಾರ್ಥಿಗಳಿಗೆ,ಶ್ರಮಿಸಿದ ಮುಖ್ಯ ಶಿಕ್ಷಕರಿಗೆ, ಶಿಕ್ಷಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಯವರಿಗೆ, ಇಲಾಖೆಯ ಅಧಿಕಾರಿಗಳು,ಸಿಬ್ಬಂದಿ ವರ್ಗದವರಿಗೆ ಹಾಗೂ ಪೋಷಕರಿಗೆ ಸಕಲೇಶಪುರ ಶಾಸಕ ಸಿಮೆಂಟ್ ಮಂಜುನಾಥ್, ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಅಧ್ಯಕ್ಷ ಮಲ್ನಾಡ್ ಝಾಕೀರ್, ಕಾರ್ಯದರ್ಶಿ ವೈ.ಎಸ್ ಗಿರೀಶ್ ಮತ್ತು ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
